ಗಂಗಾವತಿ ಹೋಂ ಸ್ಟೇ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ, ಪೊಲೀಸರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆರೋಪ

ಕೊಪ್ಪಳ: ಗಂಗಾವತಿಯ ಸಣಾಪೂರದಲ್ಲಿ ನಡೆದ ವಿದೇಶಿ ಮಹಿಳೆ, ಹೋಂ ಸ್ಟೇ ಮಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಿರುವುದಾಗಿ ಎಸ್ಪಿ ರಾಮ ಎಲ್.ಅರಸಿದ್ಧಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, “ಮಾಚ್ 6ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗಂಗಾವತಿಯ ಮಲ್ಲೇಶ ದಾಸರ (22) ಮತ್ತು ಚೇತನ ಕಾಮೇಶ್ವರ (21) ಎಂಬಿಬ್ಬರು ಆರೋಪಿಗಳನ್ನು ಮಾರ್ಚ್ 8ರಂದು ಬಂಧಿಸಲಾಗಿತ್ತು. ಮೂರನೇ ಆರೋಪಿಗೆ ಶೋಧ ಕಾರ್ಯ ನಡೆಸಿದ್ದೆವು. ಮಾರ್ಚ್ 9ರಂದು ಮೂರನೇ ಆರೋಪಿ ಗಂಗಾವತಿಯ ಸಾಯಿನಗರ ನಿವಾಸಿಯಾದ ಶರಣಬಸವರಾಜ ಅಲಿಯಾಸ್ ಶರಣು ಬಾಲಪ್ಪ (30) ಎಂಬಾತನನ್ನು ಬಂಧಿಸಿದ್ದೇವೆ” ಎಂದು ಹೇಳಿದರು. “ಕಳ್ಳತನ, ಕೊಲೆ, ಕೊಲೆ ಯತ್ನ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದೆವು. ಪ್ರಕರಣ ಸಂಬಂಧ ಇಬ್ಬರನ್ನು ಮಾರ್ಚ್ 8ರಂದು ಬಂಧಿಸಿದ್ದೆವು. ಪರಾರಿಯಾಗಿದ್ದ ಇನ್ನೊಬ್ಬ ಆರೋಪಿಯನ್ನು ಚೆನ್ನೈನಲ್ಲಿ ವಶಕ್ಕೆ ಪಡೆದು ಕರೆತಂದಿದ್ದೇವೆ. ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದೇವೆ. ಮುಂದಿನ ತನಿಖೆಯನ್ನು ತನಿಖಾಧಿಕಾರಿ ಕೈಗೊಂಡಿದ್ದಾರೆ. ಮೂವರು ಆರೋಪಿಗಳು ಗಂಗಾವತಿಯ ಸಾಯಿನಗರದ ನಿವಾಸಿಗಳಾಗಿದ್ದು ಸ್ನೇಹಿತರು. ಮೂರನೇ ಆರೋಪಿ ಗಾರೆ ಕೆಲಸ ಮಾಡುತ್ತಿದ್ದ” ಎಂದು ಎಸ್ಪಿ ಮಾಹಿತಿ ನೀಡಿದರು.
ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲ ಸುರಕ್ಷತಾ ಗೈಡ್ಲೈನ್ಸ್ ಪಾಲಿಸುವಂತೆ ಮತ್ತು ವಿದೇಶಿ ಪ್ರವಾಸಿಗರಿದ್ದರೆ ಫಾರ್ಮ್ ಸಿ ತುಂಬಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯ ಹೋಮ್ ಸ್ಟೇ ಮತ್ತು ರೆಸಾರ್ಟ್ಗಳ ಮಾಲೀಕರಿಗೆ ಸೂಚನೆ ನೀಡಿದ್ದಾಗಿ ಎಸ್ಪಿ ಹೇಳಿದ್ದಾರೆ. ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿ: ತಲೆಮರೆಸಿಕೊಂಡಿದ್ದ ಶರಣಬಸವರಾಜನ ಪತ್ತೆಗಾಗಿ 6 ವಿಶೇಷ ಪೋಲಿಸ್ ತಂಡಗಳನ್ನು ರಚಿಸಲಾಗಿತ್ತು. ಆರೋಪಿ ತಮಿಳುನಾಡಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ಕೈಗೊಂಡು, ಚೆನ್ನೈ ನಗರದ ರೈಲು ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದೆವು ಎಂದು ತಿಳಿಸಿದರು.
ಪೊಲೀಸರ ನಿರ್ಲಕ್ಷ್ಯ ಆರೋಪ: ಸಣ್ಣಪುಟ್ಟ ಅಪರಾಧ ಹಿನ್ನೆಲೆ ಇರುವಂಥವರಾಗಿದ್ದು, ಹಗಲು ಗಾರೆ ಕೆಲಸ, ರಾತ್ರಿ ಕಳ್ಳತನ ಮಾಡುತ್ತಿದ್ದರು. ಈ ಹಿಂದೆ ಕೋಳಿ, ಬೈಕ್, ಕಿರಾಣಿ ಅಂಗಡಿ ಕಳ್ಳತನ ಆರೋಪದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಇವರನ್ನು ರಾಜಿ ಸಂಧಾನ ಮಾಡಿ ಪೊಲೀಸರು ಬಿಟ್ಟು ಕಳುಹಿಸಿದ್ದೇ ಇಂದು ದೊಡ್ಡ ಕೃತ್ಯಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಗಂಗಾವತಿಯ ಸಾಣಾಪೂರ ಡ್ರಗ್ಸ್ ಹಬ್?: ಈ ಹಿಂದೆಯೇ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಗಂಗಾವತಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಧಿಕೃತ ರೆಸಾರ್ಟ್ಗಳು ತಲೆ ಎತ್ತಿದ್ದು, ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಸ್ಥಳೀಯ ಪ್ರಭಾವಿಗಳ ಕೈವಾಡವಿದೆ. ಇಲ್ಲಿ ಕಾನೂನು ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕು. ಗಂಗಾವತಿ ಡ್ರಗ್ಸ್ ಹಬ್ಬ ಆಗುತ್ತಿದೆ ಎಂದು ಸದನದಲ್ಲೇ ರಾಯರಡ್ಡಿ ಧ್ವನಿ ಎತ್ತಿದ್ದರು.