ಉಳ್ಳಾಲದಲ್ಲಿ ಪಶ್ಚಿಮ ಬಂಗಾಳದ ಯುವತಿಗೆ ಸಾಮೂಹಿಕ ಅತ್ಯಾಚಾರ: ರಿಕ್ಷಾ ಚಾಲಕ ಸೇರಿದಂತೆ ಮೂವರು ಬಂಧನ

ಉಳ್ಳಾಲ: ಉಳ್ಳಾಲ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ನಿರ್ಜನ ಪ್ರದೇಶವೊಂದರಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಸಂಬಂಧ ರಿಕ್ಷಾ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗುರುವಾರ ನಸುಕಿನಲ್ಲಿ ನೀರು ಕೇಳುತ್ತ ಯುವತಿ ಮುನ್ನೂರು ಗ್ರಾಮದ ಮನೆಯೊಂದರ ಬಾಗಿಲು ಬಡಿದಿದ್ದಳು. ಮೈತುಂಬ ಗಾಯಗೊಂಡಿದ್ದ ಆಕೆ ಸ್ವಲ್ಪ ಹೊತ್ತಿನಲ್ಲೆ ಪ್ರಜ್ಞೆ ತಪ್ಪಿದ್ದಳು. ಚಿಕಿತ್ಸೆ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿರುವ ಆಕೆ, ರಿಕ್ಷಾ ಚಾಲಕನೊಬ್ಬ ಆಹಾರದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ತನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಕಾರಿನಲ್ಲಿ ಅತ್ಯಾಚಾರ ನಡೆಸಿರುವ ಶಂಕೆ ಇದೆ ಎಂದು ತಿಳಿಸಿದ್ದಾಳೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ರಿಕ್ಷಾ ಚಾಲಕನಾಗಿರುವ ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡಿನ ಕೆ.ಎಸ್.ರಾವ್ ನಗರದ ನಿವಾಸಿ ಪ್ರಭುರಾಜ್ (38), ಕೋಟೆಕಾರು ಕುಂಪಲದ ಚಿತ್ರಾಂಜಲಿನಗರದ ನಿವಾಸಿ ಮಿಥುನ್ (37) ಹಾಗೂ ಮಂಗಳೂರಿನ ಪಡೀಲ್ ಕೋಡಕ್ಕಲ್ ನಿವಾಸಿ ಮನೀಶ್ (30) ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಸುಮಾರು 20 ವರ್ಷ ಪ್ರಾಯದ ಸಂತ್ರಸ್ತ ಯುವತಿಯು ಪಶ್ಚಿಮ ಬಂಗಾಳದ ಕೂಚ್ಬಿಹಾರ್ನವಳು. ಕೇರಳದ ಪ್ರೈವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಹೊಸ ಕೆಲಸ ಅರಸುವುದಕ್ಕಾಗಿ ಆಕೆ ಗೆಳೆಯನ ಜೊತೆ ಮಂಗಳೂರಿಗೆ ಬಂದಿದ್ದಳು. ಬಳಿಕ ಆಕೆಗೆ ಹಾಗೂ ಆಕೆಯ ಗೆಳೆಯನಿಗೂ ಜಗಳವಾಗಿತ್ತು. ಈ ನಡುವೆ ಆಕೆಯ ಮೊಬೈಲ್ ಹಾನಿಗೊಂಡಿತ್ತು. ಆಕೆ ಆಟೊರಿಕ್ಷಾ ಹತ್ತಿದ್ದಳು. ಚಾಲಕ ಆಕೆಯನ್ನು ಮೊಬೈಲ್ ದುರಸ್ತಿ ಅಂಗಡಿಗೆ ಕರೆದೊಯ್ದಿದ್ದ. ಮೊಬೈಲ್ ದುರಸ್ತಿಯಾದ ಬಳಿಕ ಯುವತಿಯು, ಪಶ್ಚಿಮ ಬಂಗಾಳಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣಕ್ಕೆ ತನ್ನನ್ನು ಬಿಡುವಂತೆ ರಿಕ್ಷಾ ಚಾಲಕನಲ್ಲಿ ಕೋರಿದ್ದಳು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಯುವತಿ ಗುರುವಾರ ನಸುಕಿನಲ್ಲಿ ಮುನ್ನೂರು ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ತೀರ ಸಮೀಪದ ಮನೆಯೊಂದರ ಬಾಗಿಲು ಬಡಿದು ನೀರು ಕೇಳಿದ್ದಳು. ಮನೆಯವರು ಬಾಗಿಲು ತೆಗೆದು ಸ್ವಲ್ಪ ಹೊತ್ತಿನಲ್ಲೇ ಆಕೆ ಪ್ರಜ್ಞೆ ತಪ್ಪಿದ್ದಳು. ಈ ವೇಳೆ ಅವರು ಪೊಲೀಸ್ ಸಹಾಯವಾಣಿಗೆ (112) ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
‘ರಿಕ್ಷಾ ಚಾಲಕ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದೆ. ಪ್ರಜ್ಞೆ ಮರಳಿದಾಗ ಕಾರೊಂದರಲ್ಲಿ ಆಟೊಚಾಲಕ ಸೇರಿ ಮೂವರು ಯುವಕರ ಜೊತೆ ಇದ್ದೆ. ಕಿರುಚಾಡಿದಾಗ ಅವರು ನನ್ನನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದರು. ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮೂವರು ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿರಬಹುದು ಎಂದು ಯುವತಿ ಹೇಳಿಕೆ ನೀಡಿದ್ದಾಳೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
‘ಈ ಕೃತ್ಯ ಗೊತ್ತಾದ ತಕ್ಷಣವೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರ ಹಲವು ತಂಡಗಳನ್ನು ರಚಿಸಿ ಆಳವಾದ ತನಿಖೆ ನಡೆಸಿದ್ದೇವೆ. ಸಾಕಷ್ಟು ಸಾಂತ್ವನ ಹೇಳಿದ ಬಳಿಕ ಯುವತಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಈ ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126 (ಬಲವಂತದಿಂದ ಬಂಧನದಲ್ಲಿರಿಸುವುದು), ಸೆಕ್ಷನ್ 140 (2) (ಬಲವಂತದಿಂದ ಅಪಹರಣ ನಡೆಸುವುದು), 352 (ಶಾಂತಿಭಂಗವನ್ನುಂಟುಮಾಡುವುದು), ಸೆಕ್ಷನ್ 351 (1) ( ಕ್ರಿಮಿನಲ್ ಬೆದರಿಕೆ ಒಡ್ಡುವುದು) 115 (2) (ಹಲ್ಲೆ ನಡೆಸುವುದು), ಸೆಕ್ಷನ್ 64 (ಅತ್ಯಾಚಾರ ನಡೆಸುವುದು), ಸೆಕ್ಷನ್ 309 (6) (ಬೆದರಿಸಿ ಸುಲಿಗೆ ಮಾಡುವುದು), ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ) ಹಾಗೂ ಸೆಕ್ಷನ್ 3 (5)ರ (ಕೂಟ ರಚಿಸಿಕೊಂಡು ಕ್ರಿಮಿನಲ್ ಕೃತ್ಯ ನಡೆಸುವುದು) ಅಡಿ ಎಫ್ಐಆರ್ ದಾಖಲಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ರಿಕ್ಷಾದ ದೃಶ್ಯ ಸೆರೆ
ಮುನ್ನೂರು ಗ್ರಾಮದ ನಿರ್ಜನ ಪ್ರದೇಶಕ್ಕೆ ಆಟೊ ರಿಕ್ಷಾವೊಂದು ಮಧ್ಯ ರಾತ್ರಿ ತೆರಳಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಈ ದೃಶ್ಯಗಳು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ನೆರವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಧ್ಯಾಹ್ನದಿಂದಲೇ ಯುವತಿ ಜೊತೆಗಿದ್ದ ರಿಕ್ಷಾಚಾಲಕ
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಿಕ್ಷಾ ಚಾಲಕ ಪ್ರಭುರಾಜ್ 10 ವರ್ಷಕ್ಕಿಂತಲೂ ಹೆಚ್ಚು ಕಾಲ ಆಟೋಚಾಲಕನಾಗಿದ್ದಾನೆ. ಆತ ಬುಧವಾರ ಮಧ್ಯಾಹ್ನ 2.30ರಿಂದಲೇ ಯುವತಿ ಜೊತೆಗಿದ್ದ. ಮೊಬೈಲ್ ದುರಸ್ತಿಗಾಗಿ ಆತನ ಜೊತೆ ಅನೇಕ ಮಳಿಗೆಗಳಿಗೆ ಆಕೆ ಸುತ್ತಿದ್ದಳು. ಈ ವೇಳೆ ರಿಕ್ಷಾ ಚಾಲಕ ಆಕೆಗೆ ಉಪಾಹಾರವನ್ನು ನೀಡಿದ್ದ. ಮೊಬೈಲ್ ದುರಸ್ತಿಯ ಹಣವನ್ನೂ ಆತನೇ ಪಾವತಿಸಿದ್ದ. ಆಕೆಯ ಪ್ರಜ್ಞೆ ತಪ್ಪಿಸಿ ಮುನ್ನೂರು ಪ್ರದೇಶಕ್ಕೆ ಕರೆದೊಯ್ಯುವಾಗ ರಿಕ್ಷಾಚಾಲಕ ಹಾಗೂ ಆತನ ಗೆಳೆಯರು ಪಾನಮತ್ತರಾಗಿದ್ದರು. ಆ ಯುವತಿಗೂ ಮದ್ಯ ಕುಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಪ್ರಭುರಾಜ್ ಸ್ನೇಹಿತನಾಗಿರುವ ಆರೋಪಿ ಮಿಥುನ್ ಪೇಂಟಿಂಗ್ ಚಾಲಕ ಹಾಗೂ ಎಲೆಕ್ನಿಷಿಯನ್ ವೃತ್ತಿಗಳನ್ನು ಮಾಡುತ್ತಿದ್ದ. ಇನ್ನೊಬ್ಬ ಸ್ನೇಹಿತ ಆರೋಪಿ ಮನೀಶ್ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ.