ಕಾರಿನಲ್ಲಿ ಸಿಲುಕಿದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವಿಗೆ – ದ್ವಾರಪುಡಿಯಲ್ಲಿ ಆಕ್ರಂದನ

ವಿಜಯನಗರ : ಕಾರಿನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಬಾಗಿಲು ತೆರೆಯಲಾಗದೇ ಅಲ್ಲಿಯೇ ಸಿಲುಕಿ ಉಸಿರುಗಟ್ಟಿ ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ದ್ವಾರಪುಡಿಯಲ್ಲಿ ನಡೆದಿದೆ.

ಒಂದೇ ಮನೆಯ ಇಬ್ಬರು ಮತ್ತು ಬೇರೆ ಬೇರೆ ಕುಟುಂಬಗಳ ಇಬ್ಬರು ಮಕ್ಕಳು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಮನೆಯ ಮುಂದಿನ ಪುಟ್ಟ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ಅಲ್ಲಿಯೇ ಇದ್ದ ಕಾರನ್ನೇರಿ ಆಟವಾಡುತ್ತಿದ್ದರು. ಈ ವೇಳೆ ಕಾರಿನ ಬಾಗಿಲು ಲಾಕ್ ಆದ ಕಾರಣ ಅಲ್ಲಿಯೇ ಸಿಲುಕಿಕೊಂಡರು. ಒಂದು ಕಡೆ ಬಿಸಿಲಿನ ಶಾಖ, ಮತ್ತೊಂದೆಡೆ ಉಸಿರಾಟದ ತೊಂದರೆಯಿಂದ ಬಳಲಿ ನಾಲ್ವರು ಕಾರಿನ ಒಳಗಡೆಯೇ ಮೃತಪಟ್ಟಿದ್ದಾರೆ.
ದ್ವಾರಪುಡಿಯ ಬುಚುನಾಯ್ಡು ಮತ್ತು ಭವಾನಿ ಅವರ ಮಗ ಉದಯ್ ಮೂರನೇ ತರಗತಿಗೆ ಪ್ರವೇಶಿಸಿದ್ದಾನೆ. ಬುಚುನಾಯ್ಡು ಅವರು ವಿಜಯನಗರ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಓರ್ವ ಮಗಳು ಸಹ ಇದಾಳೆ. ಮಗ ಉದಯ್ ಕ್ರೀಡೆಗಳಲ್ಲಿ ನಿಪುಣನಾಗಿದ್ದ. ಅವನು ಹಳ್ಳಿಯ ಎಲ್ಲರೊಂದಿಗೆ ಸುತ್ತಾಡುತ್ತಿದ್ದ. ಇತ್ತೀಚೆಗೆ ಬೇಸಿಗೆ ಕ್ರೀಡಾ ಶಿಬಿರದ ಭಾಗವಾಗಿ ಬಾಕ್ಸಿಂಗ್ ತರಬೇತಿಗೆ ಸೇರಿಕೊಂಡಿದ್ದ. ತನ್ನ ತಾಯಿಗೆ ಒಂದು ದಿನ ತಾನು ಬಾಕ್ಸರ್ ಆಗುತ್ತೇನೆ ಎಂದು ಹೇಳುತ್ತಿದ್ದ. ಆದರೆ, ದುರಂತ ಘಟನೆಯಲ್ಲಿ ಮಗ ಸಾವಿಗೀಡಾಗಿದ್ದು, ತಂದೆ-ತಾಯಿ ದುಃಖಿಸುತ್ತಿದ್ದಾರೆ.
ಇನ್ನು ಬುಚುನಾಯ್ಡು ಅವರ ಸಹೋದರಿ ಅರುಣಾ ಮತ್ತು ಆಕೆಯ ಪತಿ ಸುರೇಶ್ ಹತ್ತಿರದಲ್ಲಿ ವಾಸಿಸುತ್ತಿದ್ದಾರೆ. ಸುರೇಶ್, ಕಟ್ಟಡ ನಿರ್ಮಾಣ ಕೆಲಸಗಾರ. ಅವರ ಪತ್ನಿ ಗೃಹಿಣಿ. ಮನಸ್ವಿನಿ ಅವರ ಏಕೈಕ ಮಗು. ಅದಕ್ಕಾಗಿಯೇ ಮಗಳನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಘೋರ ವಿಧಿಯಾಟದಲ್ಲಿ ಮಗುವಿನ ಪ್ರಾಣ ಹೋಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮದಲ್ಲಿ ನಡೆಯುತ್ತಿದ್ದ ಶುಭ ಕಾರ್ಯಕ್ರಮದಲ್ಲಿ ಎಲ್ಲರೂ ನಿರತರಾಗಿದ್ದರಿಂದ ಯಾರಿಗೂ ಮಕ್ಕಳ ಮೇಲೆ ಗಮನ ಹೋಗಲಿಲ್ಲ. ತಮ್ಮ ಕಣ್ಣ ಮುಂದೆಯೇ ಓಡಾಡಿಕೊಂಡಿದ್ದ ಮಕ್ಕಳು ಇದೀಗ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ.
