ಮರುಮರೆಯಾದ ಹೆದ್ದಾರಿ ಭರವಸೆ: NH-75 ಭೀತಿಯ ಮಾರ್ಗ

ಸಕಲೇಶಪುರ :’ಮಗು ಅತ್ತಾಗಲೊಮ್ಮೆ ತೊಟ್ಟಿಲು ತೂಗಿದಂತಾಗಿದೆ ರಾಷ್ಟ್ರೀಯ ಹೆದ್ದಾರಿ-75 ಸ್ಥಿತಿ. ಭೂಕುಸಿತ ಆದಾಗ ಸ್ಥಳ ವೀಕ್ಷಣೆಗೆ ಬರುವ ಸಚಿವರು, ಅಧಿಕಾರಿಗಳು, ಮಳೆ ನಿಂತ ಮೇಲೆ ಮರೆತು ಹೋಗುತ್ತಾರೆ. ಮತ್ತೆ ಅವರು ಬರಲು ಮಣ್ಣು ಕುಸಿಯಲೇ ಬೇಕು, ರಸ್ತೆ ಸಂಚಾರ ಸ್ಥಗಿತವಾಗಲೇಬೇಕು’.
ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆಯ ದುಸ್ಥಿತಿಯ ಬಗ್ಗೆ ಸ್ಥಳೀಯರು ವ್ಯಕ್ತಪಡಿಸುತ್ತಿರುವ ಆಕ್ರೋಶವಿದು.
ಈಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 80 -100 ಅಡಿ ಎತ್ತರದ ಗುಡ್ಡಗಳನ್ನು 90 ಡಿಗ್ರಿಯಲ್ಲಿ ಕತ್ತರಿಸಿ, ಕೇವಲ 6 ಅಡಿ ಎತ್ತರದ ತಡೆಗೋಡೆ ಕಟ್ಟಿರುವುದು, ಕಟ್ಟಿರುವ ತಡೆಗೋಡೆಗಳೂ ಕುಸಿದು ಬಿದ್ದಿರುವುದು, ಗುಡ್ಡ ಕುಸಿದಿರುವುದು, ಕುಸಿಯುತ್ತಿರುವುದು, ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿರುವುದು ಎಲ್ಲವನ್ನೂ ಖುದ್ದು ವೀಕ್ಷಿಸಿದ್ದಾರೆ.
ಆನೇಮಹಲ್, ದೋಣಿಗಾಲ್, ಕೆಲಗಾನಹಳ್ಳಿ, ದೊಡ್ಡತಪ್ಪಲೆ ಗ್ರಾಮ ಸೇರಿದಂತೆ ಸಕಲೇಶಪುರ ಬೈಪಾಸ್ ಪ್ರಾರಂಭದ ತೋಟದಗದ್ದೆಯಿಂದ ದೊಡ್ಡತಪ್ಪಲೆವರೆಗೂ 9 ವರ್ಷಗಳಿಂದಲೂ 12 ಕಿ.ಮೀ. ರಸ್ತೆ ಕಾಮಗಾರಿ ಯಾವ ಗುಣಮಟ್ಟದಲ್ಲಿ ನಡೆಯುತ್ತಿದೆ? ಇದರಿಂದ ಆಸ್ತಿಪಾಸ್ತಿ ಎಷ್ಟು ಹಾನಿಯಾಗಿದೆ? ಸಾರ್ವಜನಿಕರಿಗೆ ಆಗಿರುವ ತೊಂದರೆ, ಮುಂದೆಯೂ ನಡೆಯಬಹುದಾದ ಅನಾಹುತಗಳು ಬಗ್ಗೆ ಮಾಹಿತಿ ಪಡೆದಿದ್ದಾರೆ.
‘ಕಳಪೆ ಕಾಮಗಾರಿ ನಡೆಯುತ್ತಿದ್ದು, ಪ್ರತಿ ಮಳೆಗಾಲದಲ್ಲಿ ತಡೆಗೋಡೆಗಳು, ಗುಡ್ಡ ಕುಸಿದು ತಿಂಗಳುಗಟ್ಟಲೆ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗುತ್ತಿದೆ. ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳ ಮೇಲೆ ಗುಡ್ಡ ಕುಸಿದು ಸಾವು ನೋವುಗಳು ಆಗಿವೆ. ಪ್ರತಿ ವರ್ಷವೂ ಇದು ಮುಂದುವರಿಯುತ್ತಿದೆ’ ಎಂಬುದನ್ನು ಸ್ಥಳೀಯ ನಿವಾಸಿಗಳು ಸಚಿವರ ಗಮನಕ್ಕೆ ತಂದಿದ್ದಾರೆ.
ಒಬ್ಬರತ್ತ ಇನ್ನೊಬ್ಬರ ಬೊಟ್ಟು: ರಾಷ್ಟ್ರೀಯ ಹೆದ್ದಾರಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದತ್ತ, ಬಿಜೆಪಿ ಮುಖಂಡರು ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆಯೇ ಹೊರತು, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಹೆದ್ದಾರಿ ವಿಷಯದಲ್ಲಿ ನಮ್ಮದೇನೂ ಇಲ್ಲ. ಎಲ್ಲವೂ ಕೇಂದ್ರ ಸರ್ಕಾರದ್ದು. ನೀವು ಏನಿದ್ದರೂ ಕೇಂದ್ರದವರನ್ನೇ ಕೇಳಬೇಕು. ಇತ್ತೀಚೆಗೆ ಇದೇ ಸ್ಥಳಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನೇ ಕೇಳಬೇಕಿತ್ತು. ಕಾಮಗಾರಿಗೆ ಹಣ ಕೊಟ್ಟವರು, ಅಧಿಕಾರಿಗಳು ಎಲ್ಲವೂ ಕೇಂದ್ರ ಸರ್ಕಾರದವರೇ. ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ. ಬದಲಿಗೆ ‘ಕಳೆದ ವರ್ಷ ಇದೇ ಸ್ಥಳಕ್ಕೆ ಬಂದಿದ್ದೆವು. ಸುಮಾರು ಕೆಲಸ ಆಗಿದೆ’ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ‘ಸಚಿವರಿಗೆ ಸರಿಯಾದ ಮಾಹಿತಿ ಕೊಡಿ. ಸುಳ್ಳು ಸುಳ್ಳು ವರದಿ ಏಕೆ ಕೊಡ್ತಿರಾ? 12 ಕಿ.ಮೀ. ರಸ್ತೆ ಮಾಡೋಕೆ 9 ವರ್ಷ ಬೇಕಾ? 90 ಡಿಗ್ರಿಯಲ್ಲಿ ಇಂತಹ ದೊಡ್ಡ ಗುಡ್ಡಗಳನ್ನೆಲ್ಲಾ ಕತ್ತರಿಸಿ 5-6 ಅಡಿ ತಡೆಗೋಡೆ ಕಟ್ಟುತ್ತಿದ್ದೀರಿ. ಕಟ್ಟಿಕೊಂಡು ಬಂದಂತೆಲ್ಲಾ ಹಿಂದಿನಿಂದ ಬಿದ್ದು ಹೋಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಕಲೇಶಪುರ ತಾಲ್ಲೂಕಿನ ಕೆಸಗಾನಹಳ್ಳಿ ಬಳಿ ತಡೆಗೋಡೆ ಹಾಗೂ ಗುಡ್ಡ ಕುಸಿದಿರುವುದು.ಧರ್ಮಪ್ರಕಾಶ್ ಬಾಳ್ಳುಪೇಟೆ ನಿವಾಸಿಹೆದ್ದಾರಿ ವೀಕ್ಷಣೆಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರು ಮುಖ್ಯ ಕಾರ್ಯಾದರ್ಶಿ ಸೇರಿದಂತೆ ಎಲ್ಲರೂ ಬಂದು ಹೋಗುವುದು ಸಾಮಾನ್ಯವಾಗಿದೆ. ಶೇ 50 ರಷ್ಟೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಮಕ್ಕಳಾಟವೇ?ಡಾ.ಎಂ.ಕೆ. ಶ್ರುತಿ ಸಕಲೇಶಪುರ ಉಪ ವಿಭಾಗಾಧಿಕಾರಿಸಕಲೇಶಪುರ-ಮಾರನಹಳ್ಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾದರೂ ಮಣ್ಣನ್ನು ತಕ್ಷಣ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.