ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಆರಂಭಕ್ಕೆ ಅರಣ್ಯ ಇಲಾಖೆಯ ಗ್ರೀನ್ ಸಿಗ್ನಲ್

ಮಂಗಳೂರು:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಗುವುದು. ಒಂದು ವರ್ಷದವರೆಗೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದ್ದು, ತಡೆಗೋಡೆಗಳು ಮಣ್ಣುಪಾಲಾಗಲಿವೆ. ಎಸ್ಎಲ್ವಿ ಅರ್ಥ್ ಮೂವರ್ಸ್ ಸಂಸ್ಥೆ ಕಾಮಗಾರಿ ನಡೆಸಲಿದೆ.
ಮಂಗಳೂರು: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಮರಗಳ ತೆರವು ಕಾರ್ಯಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಮಳೆಗಾಲ ಕಳೆದ ಕೂಡಲೇ ಚಾರ್ಮಾಡಿ ಹೆದ್ದಾರಿ ವಿಸ್ತರಣೆ ಕಾರ್ಯ ಆರಂಭವಾಗಲಿದೆ.
ಚಾರ್ಮಾಟಿ ಘಾಟಿ ಪಶ್ಚಿಮಘಟ್ಟದ ಅತೀಸೂಕ್ಷ್ಮ ಪ್ರದೇಶವಾಗಿದ್ದು, ಬೆಟ್ಟಗುಡ್ಡ, ಕಣಿವೆ- ಪ್ರಪಾತ, ಝರಿ- ತೊರೆ, ಶೋಲ ಕಾಡು, ಹುಲ್ಲುಗಾವಲಿನಿಂದ ಆವರಿಸಿದೆ. ಈ ಮಧ್ಯೆ ಚಾರ್ಮಾಡಿ ಘಾಟಿ ಹೆದ್ದಾರಿ ಒಟ್ಟು 25 ಕಿ.ಮೀ. ವ್ಯಾಪ್ತಿಸಿದ್ದು, ಇದರಲ್ಲಿ 11 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲೆಗೆ, 14 ಕಿ.ಮೀ ಚಿಕ್ಕಮಗಳೂರು ಭಾಗಕ್ಕೆ ಸೇರುತ್ತದೆ.
ಚಿಕ್ಕಮಗಳೂರು ಗಡಿಭಾಗದ ವರೆಗೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಚಿಕ್ಕಮಗಳೂರು ಭಾಗ ಮಾತ್ರ ಡಿಪಿಆರ್ ಹಂತದಲ್ಲಿಯೇ ಇದೆ.
ಒಂದು ವರ್ಷಗಳ ಕಾಲ ಹೆದ್ದಾರಿ ಬಂದ್ ಸಾಧ್ಯತೆ.
ಮರಗಳ ತೆರವು ಕಾರ್ಯ ನಿರೀಕ್ಷೆಯಂತೆ ನಡೆದರೆ ಅಕ್ಟೋಬರ್ ವೇಳೆಗೆ ಚಾರ್ಮಾಡಿ ದ್ವಿಪಥ ರಸ್ತೆ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆ ತೀರಾ ಕ್ಲಿಷ್ಟಕರವಾಗಿದ್ದು, ಈ ಕಾರಣದಿಂದ ಕಾಮಗಾರಿಗೆ ಕನಿಷ್ಠ 1 ವರ್ಷಗಳ ವರೆಗೆ ಹೆದ್ದಾರಿ ಸಂಚಾರ ಬಂದ್ ಮಾಡಬೇಕಾದ ಅನಿವಾರ್ಯತೆಯಿದೆ.1984ರಲ್ಲೂ ರಸ್ತೆ ಕಾಮಗಾರಿ ನಡೆಯುವ ವೇಳೆ ರಸ್ತೆ ಬಂದ್ ಮಾಡಲಾಗಿತ್ತು.
ಗುತ್ತಿಗೆದಾರರು ರೆಡಿ
ಎಸ್ಎಲ್ವಿ ಅರ್ಥ್ ಮೂವರ್ಸ್ ಕನ್ಸ್ಟ್ರಕ್ಷನ್ ಕಂಪನಿ 141 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ವಹಿಸಿಕೊಂಡಿದ್ದು, ರಸ್ತೆಯ ಮಧ್ಯಭಾಗದಿಂದ ಇಕ್ಕೆಲಗಳಲ್ಲಿಯೂ 15ಮೀಟರ್ನಷ್ಟು ರಸ್ತೆ ಅಗಲೀಕರಣವಾಗಲಿದೆ. ರಸ್ತೆ ಅಗಲೀಕರಣದಿಂದ ತೆರವು ಮಾಡಬೇಕಾದ ಮರಗಳ ಲೆಕ್ಕಾಚಾರಗಳು ಮುಗಿದಿದ್ದು, ಇದಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಮರ ತೆರವಿನ ಬಗ್ಗೆ ಈಗಾಗಲೇ ಮಾರ್ಕಿಂಗ್ ಕೆಲಸ ಮುಗಿದಿದ್ದು, ಸರಕಾರ ಅರಣ್ಯ ಇಲಾಖೆಗೆ ಮರಗಳ ಮೊತ್ತ ಕಟ್ಟಬೇಕಾಗಿದೆ. ಇದಾದ ಬಳಿಕ ಮರಗಳ ತೆರವಿಗೆ ಟೆಂಡರ್ ಕರೆದ ಬಳಿಕ ಮರಗಳ ತೆರವು ಕಾರ್ಯ ಆರಂಭವಾಗಲಿದೆ. ಇದೆಲ್ಲ ಪ್ರಕ್ರಿಯೆ ಜೂನ್ನೊಳಗೆ ಮುಗಿಯುವ ಸಾಧ್ಯತೆಯಿದೆ. ಮಾ ತೆರವು ನಡೆದ ಬಳಿಕ ಫಿಲ್ಲಿಂಗ್ ಕಾರ್ಯ ಆರಂಭವಾಗಲಿದೆ.
ಕಾಮಗಾರಿಗೆ ಪ್ಲಾಂಟ್ಸ್ ರೆಡಿ:
ದ್ವಿಪಥ ರಸ್ತೆ ಅಗಲೀಕರಣ ಗುತ್ತಿಗೆ ವಹಿಸಿಕೊಂಡ ಎಸ್ಎಲ್ವಿ ಅರ್ಥ್ ಮೂವರ್ಸ್ ಸಂಸ್ಥೆ ಕಾಮಗಾರಿ ಹಿನ್ನೆಲೆಯಲ್ಲಿ ಮೂಡಿಗೆರೆಯಲ್ಲಿ ಪ್ಲಾಂಟ್ ತಯಾರಿ ಮಾಡಿದ್ದು, ಈಗಾಗಲೇ ಅದಕ್ಕೆ ಬೇಕಾದ ಸಾಮಗ್ರಿ ಸಿದ್ಧಗೊಳಿಸುತ್ತಿದೆ. ಮರಗಳನ್ನು ತೆರವು ಮಾಡಿ ಕೊಟ್ಟರೆ ರಸ್ತೆ ಕಾಮಗಾರಿ ಆರಂಭಿಸಲು ನಾವು ರೆಡಿ ಇದ್ದೇವೆ ಎನ್ನುತ್ತಾರೆ ಗುತ್ತಿಗೆದಾರರು ಬಾಕ್ಸ್
ಕೋಟಿ ಮೊತ್ತದ ತಡೆಗೋಡೆ ಮಣ್ಣುಪಾಲು:
ಚಾರ್ಮಾಡಿ ಘಾಟಿಯಲ್ಲಿ ಸುರಕ್ಷಾ ದೃಷ್ಟಿಯಿಂದ ಘಾಟಿಯುದ್ದಕ್ಕೂ ತಡೆಗೋಡೆ ನಿರ್ಮಾಣ ಕಾರ್ಯ ಹಲವು ವರ್ಷದಿಂದ ನಡೆಯುತ್ತಿದೆ. ಆದರೆ ದ್ವಿಪಥ
ರಸ್ತೆ ರಸ್ತೆ ಮಧ್ಯ ಇಕ್ಕೆಲಾಗಳಿಗೂ ವಿಸ್ತರಣೆಯಾಗುವ ಕಾರಣ ತಡೆಗೋಡೆಗಳು ನಿಷ್ಟ್ರಯೋಜಕವಾಗಲಿದ್ದು, ರಸ್ತೆ ವಿಸ್ತರಣೆ ಸಂದರ್ಭ ಮಣ್ಣುಪಾಲಾಗಲಿದೆ ಎನ್ನುತ್ತಾರೆ ತಂತ್ರಜ್ಞರು.