ಮಂಗಳೂರು ಗಿಡಗಳಲ್ಲಿ ವಿದೇಶಿ ರುಚಿ: ಸರ್ವೇಶ್ ರಾವ್ ಅವರ ಕೃಷಿಯಲ್ಲಿ ಹೊಸ ಸಂಚಲನ”

ಮಂಗಳೂರು : ಮಾರುಕಟ್ಟೆಯಲ್ಲಿ ಈಗ ತರಹೇವಾರಿ, ಮಾವು, ಹಲಸಿನ ಹಣ್ಣುಗಳದ್ದೇ ಘಮ. ವಿಶೇಷ ವೆಂದರೆ ಮಂಗಳೂರಿನಲ್ಲೊಬ್ಬರು ಇದಕ್ಕಿಂತ ಭಿನ್ನವಾಗಿ ವಿದೇಶಗಳಿಗೆ ಹೋಗಿ ಅಲ್ಲಿಂದ ಹಣ್ಣುಹಂಪಲಿನ ಗಿಡದ “ಗೆಲ್ಲು’ ತಂದು ಮಂಗಳೂರಿನಲ್ಲೇ ವಿದೇಶದ ಬಗೆಬಗೆಯ ಹಣ್ಣುಹಂಪಲು ಬೆಳೆಯುತ್ತಿದ್ದಾರೆ!
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮೂಲಕ ಖ್ಯಾತಿ ಪಡೆದ ಕಲಾವಿದ ಸರ್ವೇಶ್ ರಾವ್ ಅವರು ಮಂಗಳೂರಿನ ಕೂಳೂರಿನಲ್ಲಿ ತಮ್ಮ ನರ್ಸರಿಯಲ್ಲಿ ಈ ಪ್ರಯೋಗವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ವಿದೇಶಿ ತಳಿಯ ಮಾವು, ಇತರ ಹಣ್ಣು ಕರಾವಳಿಯ ನೆಲದಲ್ಲಿ ಬೆಳೆಯುವುದಿಲ್ಲ. ಇಲ್ಲಿನ ಹವಾಮಾನ, ಮಣ್ಣು ಅದಕ್ಕೆ ಸೂಕ್ತ ಎನಿಸುವುದಿಲ್ಲ ಎಂಬ ಅಪವಾದವಿದೆ. ಆದರೆ ಇದಕ್ಕೆ ಉತ್ತರವೆಂಬಂತೆ ಸರ್ವೇಶ್ ರಾವ್ ಅವರು ವಿದೇಶಿ ಗಿಡಗಳನ್ನೇ ಇಲ್ಲಿ ತಂದು ನೆಟ್ಟು ಬೆಳೆಸುತ್ತಿದ್ದಾರೆ.
ಮಾವು, ಹಲಸು, ಚಿಕ್ಕು, ಬಾಳೆಹಣ್ಣು ಸಹಿತ ವಿವಿಧ ಬಗೆಯ ಹಣ್ಣಿನ ಗಿಡಗಳು ಇವರ ಬಳಿಯಿದೆ. ಕೆಲವು ವರ್ಷದ ಹಿಂದೆ ತಂದ ಈ ಗಿಡಗಳಲ್ಲಿ ಸಮೃದ್ದ ಬೆಳೆಯನ್ನೂ ತೆಗೆದಿದ್ದಾರೆ. ವಿಯೆಟ್ನಾಂ, ಥಾಯ್ಲಾಂಡ್, ಮಲೇಶ್ಯಾದಿಂದ ತಂದ ಹಲಸು ಇಲ್ಲಿ ಭಾರಿ ಸದ್ದು ಮಾಡುತ್ತಿದೆ. ರುಚಿ ಹಾಗೂ ಭಿನ್ನ ಆಕೃತಿಯ ಈ ಹಣ್ಣುಗಳು ಮಂಗಳೂರಿಗೆ ಹೊಸ ಅನುಭವ.
ಸರ್ವೇಶ್ ರಾವ್ ಅವರು ಅಂತಾ ರಾಷ್ಟ್ರೀಯ ಗಾಳಿಪಟ ಸ್ಪರ್ಧೆ ನಡೆಯುವ ಸಂದರ್ಭ ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾರೆ. ಹೀಗೆ ಹೋದವರು ಬರುವಾಗ ಅಲ್ಲಿನ ಹಣ್ಣಿನ ಗಿಡದ “ಗೆಲ್ಲು’ ಮಾತ್ರ ತರುತ್ತಾರೆ. ಇಲ್ಲಿ ಅದನ್ನು ಕಸಿ ಮಾಡಲಾಗುತ್ತದೆ. ಕೆಲವು ಗಿಡಗಳಲ್ಲಿ ಕೆಲವು ತಿಂಗಳಲ್ಲಿ ಫಲ ದೊರಕಿದರೆ, ಇನ್ನೂ ಕೆಲವು ವರ್ಷದವರೆಗೆ ಕಾಯಬೇಕು!
ಗಿಡದಲ್ಲಿ ಹಣ್ಣು ಬೆಳೆದಿದೆ
ಸರ್ವೇಶ್ ರಾವ್ ಅವರು ಥೈಲ್ಯಾಂಡ್ ತಳಿಯ ಮಾವುಗಳನ್ನು ಬೆಳೆಯುತ್ತಿದ್ದಾರೆ. ಇವರು ತಂದ 9 ಜಾತಿಯ (ರೆನೋಸರಸ್, ಮಾಚನೊಕ್, ನಾಮ್ ಡಾಕ್ ಮೈ ನಾಮ್ ಡಾಕ್ ಮೈ ಪರ್ಪಲ್, ರೆಡ್ ಐವೆರಿ, ಮಾಂಕುಶಿ) ಮಾವಿನ ಗಿಡದಲ್ಲಿ 3ರಿಂದ 5 ಜಾತಿಯ ಗಿಡದಲ್ಲಿ ಮಾವಿನ ಹಣ್ಣು ಬೆಳೆದಿದೆ. ಗ್ರೋ ಬ್ಯಾಗ್ನಲ್ಲಿ ಇವರು ಇದನ್ನು ಬೆಳೆದಿದ್ದಾರೆ.
ಗೆಲ್ಲು ಮಾತ್ರ ತರುತ್ತೇನೆ!
ವಿದೇಶದಲ್ಲಿ ಖರೀದಿಸಿದ ಗಿಡವನ್ನು ಹಾಗೆಯೇ ತರಲು ಅನುಮತಿ ಇರುವುದಿಲ್ಲ. ಅದಕ್ಕಾಗಿ ಗಿಡದ ಗೆಲ್ಲನ್ನು ಮಾತ್ರ ತಂದು ಅದನ್ನು ಮಂಗಳೂರಿಗೆ ತಂದು ಕಸಿ ಮಾಡಿ ಇಲ್ಲಿ ಬೆಳೆಯುತ್ತೇನೆ, ಹೀಗಾಗಿ ವಿವಿಧ ಜಾತಿಯ ಹಣ್ಣು ಬೆಳೆಯಲು ಸಾಧ್ಯವಾಗಿದೆ.
– ಸರ್ವೇಶ್ ರಾವ್ ಮಂಗಳೂರು