ಫ್ಲೈ ಓವರ್ ಪ್ರಾರಂಭದಿಂದ ಕಲ್ಲಡ್ಕದ ವ್ಯಾಪಾರಿಗಳಿಗೆ ಸಂಕಷ್ಟ

ಬಂಟ್ವಾಳ : ಬಹುಷಃ ಕಲ್ಲಡ್ಕದ ಹೆಸರು ಗೊತ್ತಿಲ್ಲದವರು ಯಾರೂ ಇಲ್ಲ ಎಂದರೆ ತಪ್ಪಾಗಲಾರದು. ಕಲ್ಲಡ್ಕದ ಶ್ರೀರಾಮ ಮಂದಿರ, ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದ ಕೆ.ಟಿ., ಮಸೀದಿ, ಮೀನು ಮಾರುಕಟ್ಟೆ ಹೀಗೆ ಹತ್ತು ಹಲವು ವಿಚಾರದಲ್ಲಿ ಹೆಸರುವಾಗಿದೆ. ಆದರೆ ಯಾವಾಗ ಕಲ್ಲಡ್ಕದ ಫ್ಲೈ ಓವರ್ ಎದ್ದು ನಿಂತು ಸಂಚಾರಕ್ಕೆ ಮುಕ್ತವಾಯಿತೋ ಅಲ್ಲಿಂದ ಜನನಿಬಿಡ ಕಲ್ಲಡ್ಕ ಪೇಟೆಯಲ್ಲಿ ಸದ್ಯ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು, ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಎಸ್.ಆರ್. ಪಿ. ಪೊಲೀಸ್ ಬಸ್ ಒಂದು ಬಿಟ್ಟರೆ ಉಳಿದೆಲ್ಲ ಕಡೆ ನೀರವ ಮೌನಕ್ಕೆ ಜಾರಿದ ಕಲ್ಲಡ್ಕದ ನಾಗರಿಕರ ವ್ಯಾಪಾರ ವ್ಯವಸ್ಥೆಗೆ ಹೊಡೆತ ಬಿದ್ದಿದೆ ಎಂಬ ಮಾತು ವ್ಯಕ್ತವಾಗಿದೆ. ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ, ವಾಹನಗಳ ಕರ್ಕಶ ಧ್ವನಿ ಇದ್ಯಾವುದು ಇಲ್ಲದೆ ಸಂಪೂರ್ಣ ಸ್ತಬ್ಧವಾಗಿದೆ. ವಿಟ್ಲ ರಸ್ತೆ ಮೂಲಕ ಕಾಸರಗೋಡು ಜಿಲ್ಲೆಗೆ ಸಂಚರಿಸುವ ವಾಹನಗಳ ಸಂಖ್ಯೆ ಬಿಟ್ಟರೆ ಸ್ಥಳೀಯ ವಾಹನಗಳ ಓಡಾಟ ಮಾತ್ರ ಕಾಣುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೆ ಪರಿಚಯಿಸಿದ ಕಲ್ಲಡ್ಕದ ಪೇಟೆ ಇದೀಗ ಬನ್ನಿ ಜನರೇ ಒಮ್ಮೆ ಕಲ್ಲಡ್ಕ ಪೇಟೆಯೊಳಗೆ ಎಂದು ಕೈ ಬೀಸಿ ಕರೆಯುವಂತಾಗಿದೆ.
ಇನ್ನು ಸರ್ವಿಸ್ ರೋಡ್ ಪೂರ್ಣವಾಗದೇ ಇರುವುದು ಇದಕ್ಕೆಲ್ಲಾ ಕಾರಣವಾಗಿದೆ. ಅದೂ ಅಲ್ಲದೆ ಇದರಿಂದ ಇಲ್ಲಿನ ವ್ಯಾಪಾರ ವಹಿವಾಟು ಸೇರಿದಂತೆ ಆರ್ಥಿಕ ವಲಯಕ್ಕೂ ಪೆಟ್ಟು ನೀಡಿದಂತಾಗಿದೆ. ಫ್ಲೈ ಓವರ್ ಮೂಲಕ ವಾಹನಗಳು ಓಡಾಟ ಅರಂಭಿಸಿದ ಬಳಿಕ ಪೇಟೆಯೊಳಗೆ ಬರುವ ವಾಹನಗಳು ತನ್ನ ಸಂಚಾರ ನಿಲ್ಲಿಸಿವೆ. ಸರ್ವೀಸ್ ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿದರೆ ಮತ್ತೆ ಕಲ್ಲಡ್ಕ ಪೇಟೆಗೆ ಜೀವಕಲೆ ಬರಬಹುದು. ಜನರ ಓಡಾಟ ಕಾಣಬಹುದು. ಬಸ್ ಗಳು ಓಡಾಟ ಆರಂಭಿಸಬಹುದು. ಹಾಗಾಗಿ ಶೀಘ್ರವಾಗಿ ಸರ್ವಿಸ್ ರಸ್ತೆಯ ಕೆಲಸ ಮುಗಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.