ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳ ಮಹಾಪೂರ – ಸಾರ್ವಜನಿಕರಿಗೆ ಕೇಂದ್ರ ಸರಕಾರದ ಎಚ್ಚರಿಕೆ

ಹೊಸದಿಲ್ಲಿ: ಬೆಂಗಳೂರಿನಲ್ಲಿರುವ ಬಂದರನ್ನು ಪಾಕಿಸ್ಥಾನ ಸೇನೆಯು ನಾಶಗೊಳಿಸಿದೆ ಎಂದು ಒಬ್ಬ ಫೇಸ್ಬುಕ್ನಲ್ಲಿ ಕಮೆಂಟ್ ಮಾಡಿದ್ದು ಈಗ ತೀವ್ರವಾಗಿ ಟ್ರೋಲ್ ಆಗುತ್ತಿದೆ.
ಈ ಫೋಟೋವನ್ನು ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಪೋಸ್ಟ್ ಮಾಡಿ “ಬೆಂಗಳೂರಿನಲ್ಲಿ ಪೋರ್ಟ್ ಇಲ್ಲ, ಯುಎಸ್ಬಿ ಪೋರ್ಟ್ ಅಷ್ಟೇ ಇದೆ’ ಎಂದಿದ್ದಾರ
ಫವಾದ್ ಉರ್ ರೆಹಮಾನ್ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಕಮೆಂಟ್ ಮಾಡಲಾಗಿದೆ ಎನ್ನುವ ಫೋಟೋವೊಂದು ವೈರಲ್ ಆಗುತ್ತಿದೆ.
ಇದೇ ರೀತಿ ಪಾಕ್ ಪರವಾಗಿರುವ ಹಲವು ಖಾತೆಗಳಲ್ಲಿ ಭಾರತದ 3 ಯುದ್ಧವಿಮಾನಗಳು ಹಿಮಾಲಯ ಪರ್ವತ ಪ್ರದೇಶದಲ್ಲಿ ಪತನಗೊಂಡಿವೆ ಎಂದು ಹಳೆಯ ಫೋಟೋಗಳನ್ನು ಬಳಸಿ ಪೋಸ್ಟ್ಗಳನ್ನು ಮಾಡಲಾಗಿದೆ. ಜತೆಗೆ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ ಎಂದೂ ಹಲವು ಪೋಸ್ಟ್ಗಳು ಹರಿದಾಡುತ್ತಿವೆ. ಈ ಬಗ್ಗೆ ಪಿಐಬಿ ಫ್ಯಾಕ್ಟ್ಚೆಕ್ ಘಟಕ ಸ್ಪಷ್ಟನೆ ನೀಡಿದ್ದು, ಭಾರತ ಸರಕಾರ ಆ ರೀತಿಯ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದಿದೆ.
ಭಾರತ-ಪಾಕಿಸ್ಥಾನ ನಡುವಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಮೀಮ್ಸ್, ಟ್ರೋಲ್ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ. ಅದರ ಜತೆಗೇ ಸುಳ್ಳು ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ. ಭಾರತದ ವಿರುದ್ಧ ದೊಡ್ಡ ದಾಳಿ ನಡೆಸಿದ್ದೇವೆ ಎಂದು ಹೇಳಿಕೊಳ್ಳುವ ಭರದಲ್ಲಿ ಪಾಕ್ ಇಲ್ಲಸಲ್ಲದ ಸುಳ್ಳು ಹೇಳಿತ್ತು. ಅದನ್ನು ಭಾರತೀಯ ಸೇನೆಯು ಸಾಕ್ಷಿ ಸಮೇತ ಬಯಲು ಮಾಡಿತ್ತು. ಅದಾಗ್ಯೂ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ಭಾರತೀಯ ಸೇನಾ ಪಡೆಗಳು, ಇಂತಹ ಯಾವುದೇ ಊಹಾಪೋಹಗಳನ್ನು ನಂಬದೇ, ಪರಿಶೀಲನೆ ನಡೆಸಿ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿವೆ.

ಆಪರೇಷನ್ ಸಿಂದೂರ ಟೀಕಿಸಿ ಪೋಸ್ಟ್: ಮಹಿಳೆ ವಿರುದ್ಧ ದೂರು
ಮುಂಬಯಿ: ಆಪರೇಷನ್ ಸಿಂದೂರವನ್ನು ಟೀಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ 40 ವರ್ಷದ ಮಹಿಳೆಯೊಬ್ಬಳ ವಿರುದ್ಧ ಮುಂಬೈನ ಮಾಲ್ವಾನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2 ದಿನಗಳ ಹಿಂದೆ ಈ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದ್ದು, ಶನಿವಾರ ಬಜರಂಗದಳದ ಸದಸ್ಯರೊಬ್ಬರು ಈ ಪೋಸ್ಟ್ ಅನ್ನು ಗಮನಿಸಿ ದೂರು ನೀಡಿದ್ದಾರೆ. ಬಳಿಕ ಮಹಿಳೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಎಫ್ಐಆರ್ ದಾಖಲಿಸಲಾಗಿದೆ.