ಕಾರು ಪಲ್ಟಿಯಾಗಿ ಐವರು ದುರ್ಮರಣ; ಲಾರಿ ಓವರ್ಟೇಕ್ ಮಾಡುವಾಗ ದುರಂತ!

ದೊಡ್ಡಬಳ್ಳಾಪುರ: ಗೌರಿಬಿದನೂರು ರಾಜ್ಯ ಹೆದ್ದಾರಿಯ ನಾಯಕರಂಡನಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಕಾರು ಪಲ್ಟಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿಗಳಾದ ಡಿ.ಎಂ.ಈಶ್ವರಪ್ಪ ಮಾನಕೂರ್(75), ಪುರುಷೋತ್ತಮ(62), ಕಾಳಪ್ಪ(69),ಗೋಪಿನಾಥ್(52) ಹಾಗೂ ಕಾರಿನ ಚಾಲಕ ನರಸಿಂಹಮೂರ್ತಿ(50) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ.
ಎಂಟು ಜನರು ಕಾರಿನಲ್ಲಿ ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಲಾರಿ ಹಿಂದಿಕ್ಕಿ ಮುಂದೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿ ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಮೃತಪಟ್ಟ ಡಿ.ಎಂ.ಈಶ್ವರಪ್ಪ ಮಾನಕೂರ್ ಅವರ ಕಣ್ಣುಗಳನ್ನು ಕುಟುಂಬದವರು ಡಾ.ರಾಜ್ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಗೌರಿಬಿದನೂರು ರಾಜ್ಯ ಹೆದ್ದಾರಿಯ ನಾಯಕರಂಡನಹಳ್ಳಿ ಸಮೀಪ ಮಂಗಳವಾರ ಐದು ಜನರನ್ನು ಬಲಿಪಡೆದ ಸ್ಥಳ ಮಹಜರ್ ನಡೆಸುತ್ತಿರುವ ಪೊಲೀಸರು
