ರಾಜ್ಯದಲ್ಲಿ ಮೊದಲು! ಕೋಲಾರದ ಕೆರೆಯಲ್ಲಿ ತೇಲುವ ಸೌರ ಫಲಕ ಯೋಜನೆಗೆ ಚಾಲನೆ

ಕೋಲಾರ: ಜಿಲ್ಲೆಯ ಅತೀ ದೊಡ್ಡ ಕೆರೆ ಎನಿಸಿಕೊಂಡಿರುವ ಕೋಲಾರ ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಯಲ್ಲಿ ರಾಜ್ಯದಲ್ಲೇ ಮೊದಲ ವಿನೂತನ ತೇಲುವ ಸೌರಫಲಕ ಅಳವಡಿಸುವ ಯೋಜನೆಯ ಅನುಷ್ಠಾನಕ್ಕೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ ರೂಪಿಸಲು ಸೂಚಿಸಲಾಗಿದ್ದು, 6-7 ತಿಂಗಳ ಅನಂತರ ಚಾಲನೆ ನೀಡುವ ಸಾಧ್ಯತೆಯಿದೆ.
ದೇಶದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿರುವ ತೇಲುವ ಸೌರ ಫಲಕ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಈಗಾಗಲೇ ಕೇರಳ, ಆಂಧ್ರಪ್ರದೇಶ ಮತ್ತಿತರ ಕೆಲವು ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಭೂಮಿಯ ಮೇಲೆ ಸೌರಫಲಕ ಅಳವಡಿಸುವುದಕ್ಕಿಂತಲೂ ನೀರಿನ ಮೇಲೆ ಸೌರಫಲಕ ಅಳವಡಿಸುವುದು ಅನೇಕ ಪ್ರಯೋಜನಗಳನ್ನು ಹೊಂದಿದೆ.
ಎಸ್. ಅಗ್ರಹಾರ ಕೆರೆಯ ಸಾಧಕ ಬಾಧಕ ಗಮನಿಸಿಕೊಂಡು ಇತರ ಜಿಲ್ಲೆಗಳ ಸುಮಾರು 40 ಕೆರೆಗಳಲ್ಲಿ ತೇಲುವ ಸೌರಫಲಕ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.