ಶಾಲೆಗೆ ಸೇರಿದ ಮೊದಲ ದಿನವೇ ದುರಂತ: ರಾಯಬಾಗದಲ್ಲಿ ಬೈಕ್, ಕಾರು ಡಿಕ್ಕಿಯಾಗಿ 5 ವರ್ಷದ ಬಾಲಕ ಸಾವು

ಚಿಕ್ಕೋಡಿ : ಶಾಲೆಗೆ ಹೋಗಿ ಮನೆಗೆ ಮರಳುತ್ತಿದ್ದ ವೇಳೆ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ರಾಯಭಾಗ ತಾಲೂಕಿನ ಕಂಕನವಾಡಿ ಹೊರವಲಯದಲ್ಲಿ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಶಾಲೆಗೆ ಸೇರಿದ ಮೊದಲ ದಿನವೇ ಬುಧವಾರ ಸಂಜೆ ಶಾಲೆ ಮುಗಿಸಿಕೊಂಡು ಅಕ್ಕನ ಜೊತೆಗೆ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆಯಲ್ಲಿ ಮುತ್ತುರಾಜ್ ಮುಗಳಖೋಡ(5) ಮೃತ ದುರ್ದೈವಿಯಾಗಿದ್ದಾನೆ. ಬಾಲಕ ನಾಗನೂರ ಪಟ್ಟಣದ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ. ಸಂಜೆ ಶಾಲೆಯ ವಾಹನದಲ್ಲಿ ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ಇಳಿದು ವಿದ್ಯಾರ್ಥಿಗಳ ಜೊತೆಗೆ ರಸ್ತೆ ದಾಟುತ್ತಿದ್ದ. ಈ ವೇಳೆ ರಾಜ್ಯ ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದಿದ್ದಾನೆ. ಇದರ ಬೆನ್ನಲ್ಲೆ ಮತ್ತೊಂದು ಕಾರು ಬಾಲಕನ ಮೇಲೆ ಹರಿದಿದೆ.
ಇದರಿಂದ ಬಾಲಕ ಮುತ್ತುರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್ ಹಾಗೂ ಕಾರು ಚಾಲಕರು ವಾಹನ ನಿಲ್ಲಿಸದೇ ಪರಾರಿಯಾಗಿದ್ದಾರೆ. ಇನ್ನು ಘಟನೆ ಕಂಡು ಭಯಭೀತನಾದ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.