ಚೀನಾದಿಂದ ಭಾರತಕ್ಕೆ ರಸಗೊಬ್ಬರಗಳ ‘ಶಾಕ್’: ವಿರಳ ಲೋಹಗಳ ನಂತರ ಈಗ ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೂರೈಕೆಯೂ ಸ್ಥಗಿತ!

ಹೊಸದಿಲ್ಲಿ: ಭಾರತಕ್ಕೆ ರಫ್ತು ಮಾಡುತ್ತಿದ್ದ ವಿರಳ ಲೋಹಗಳಿಗೆ ನಿಷೇಧ ಹೇರಿರುವ ಚೀನಾ ಈಗ ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೂರೈಕೆಯನ್ನೂ ನಿಲ್ಲಿಸಿದೆ.”ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೈಕಿ ಶೇ. 80ರಷ್ಟನ್ನು ಚೀನಾವು ಭಾರತಕ್ಕೆ ಪೂರೈಸುತಿತ್ತು.
ಕಳೆದ ನಾಲ್ಕೈದು ವರ್ಷಗಳಿಂದ ಪೂರೈಕೆ ಪ್ರಮಾಣ ಕಡಿಮೆ ಮಾಡುತ್ತ ಬಂದಿದ್ದ ನೆರೆ ದೇಶವು, ಈಗ ಎರಡು ತಿಂಗಳಿನಿಂದ ಅಂದರೆ ಮುಂಗಾರು ಋುತು ಆರಂಭವಾಗುವ ಸಮಯದಲ್ಲೇ ಏಕಾಏಕಿ ರಫ್ತು ನಿಲ್ಲಿಸಿದೆ,” ಎಂದು ಭಾರತೀಯ ರಸಗೊಬ್ಬರ ಉದ್ಯಮ ಸಂಘದ (ಎಸ್ಎಫ್ಐಎ) ಅಧ್ಯಕ್ಷ ರಾಜೀವ್ ಚಕ್ರವರ್ತಿ ಹೇಳಿದ್ದಾರೆ.
“ಭಾರತಕ್ಕೆ ರಸಗೊಬ್ಬರ ರಫ್ತು ನಿಲ್ಲಿಸಿದ್ದೇವೆ ಎಂದು ಚೀನಾ ಎಲ್ಲಿಯೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ವಿಶೇಷ ರಸಗೊಬ್ಬರಗಳ ಪೂರೈಕೆಯನ್ನೂ ಮಾಡುತ್ತಿಲ್ಲ,” ಎಂದು ಚಕ್ರವರ್ತಿ ವಿವರಿಸಿದ್ದಾರೆ. ಈಗಾಗಲೇ ಭಾರತಕ್ಕೆ ವಿರಳ ಲೋಹಗಳ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ಚೀನಾದಿಂದ ಭಾರತಕ್ಕೆ ಬರುತ್ತಿದ್ದ ವಿಶೇಷ ರಸಗೊಬ್ಬರಗಳು ಸಬ್ಸಿಡಿ ರಹಿತವಾಗಿದ್ದವು. ಜೈವಿಕ ಉತ್ತೇಜಕ (ಬಯೋ ಸ್ಟಿಮಿಲೆಂಟ್ಸ್) ಎಂದು ಕರೆಯಲಾಗುವ ಈ ರಸಗೊಬ್ಬರಗಳು ಮಣ್ಣಿನ ಸಾರ ಮತ್ತು ಸತ್ವವನ್ನು ಹೆಚ್ಚಿಸುವ ಗುಣ ಹೊಂದಿದ್ದವು. ವಿವಿಧ ಬೆಳೆಗಳ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸುವ ಬಲ ಹೊಂದಿರುವ ಈ ರಸಗೊಬ್ಬರಗಳ ಪೂರೈಕೆ ನಿಲ್ಲಿಸುವ ಮೂಲಕ ಭಾರತದ ಕೃಷಿ ವಲಯಕ್ಕೆ ಏಟು ನೀಡುವುದು ಆ ದೇಶದ ಉದ್ದೇಶವಾಗಿರಬಹುದು ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಹಲವು ಸಮಸ್ಯೆಗಳನ್ನು ಸೃಷ್ಟಿಸಿ ಭಾರತದ ಮುನ್ನಡೆಯನ್ನು ತಡೆಯುವುದು ಮತ್ತು ಎಲ್ಲೆಡೆ ತನ್ನ ಆರ್ಥಿಕ ಸಾರ್ವಭೌಮತ್ವನ್ನು ಸ್ಥಾಪಿಸಿಕೊಳ್ಳುವುದು ಆ ದೇಶದ ‘ರಾಜನೀತಿ’ಯೇ ಆಗಿದೆ. ಭಾರತಕ್ಕೆ ರಫ್ತು ಮಾಡುತ್ತಿರುವ ವಿವಿಧ ಬಗೆಯ ಉತ್ಪನ್ನಗಳ ಪೂರೈಕೆ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಮುನ್ಸೂಚನೆ ನೀಡದೇ ಸ್ಥಗಿತಗೊಳಿಸುವುದು ಸಹ ಅಂತಹ ಹುನ್ನಾರದ ಭಾಗವೇ ಆಗಿದೆ ಎನ್ನುವುದು ರಾಜನೀತಿಜ್ಞರ ವಿಶ್ಲೇಷಣೆ.

ಭಾರತ ಸಾಮಾನ್ಯವಾಗಿ ಜೂನ್-ಡಿಸೆಂಬರ್ ಅವಧಿಯಲ್ಲಿ 1,50,000-1,60,000 ಟನ್ ವಿಶೇಷ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತೀಯ ರಸಗೊಬ್ಬರ ಉದ್ಯಮ ಸಂಘದ (ಎಫ್ಎಐ) ಪ್ರಕಾರ 2029ರ ವೇಳೆಗೆ ಭಾರತದ ಸೂಕ್ಷ್ಮ ಪೋಷಕಾಂಶ ರಸಗೊಬ್ಬರ ಮಾರುಕಟ್ಟೆ ಶತಕೋಟಿ ಡಾಲರ್ ದಾಟಲಿದೆ ಎಂದು ಅಂದಾಜಿಸಿದೆ.
ಭಾರತದ ಜೈವಿಕ ಉತ್ತೇಜಕ (ಬಯೊ ಸ್ಟಿಮಿಲೆಂಟ್ಸ್)ಗಳ ಬೇಡಿಕೆ 2029ರ ವೇಳಗೆ 734 ದಶಲಕ್ಷ ಡಾಲರ್ ಆಗುವ ನಿರೀಕ್ಷೆ ಇದೆ. ಸಾವಯುವ ರಸಗೊಬ್ಬರ ಮಾರುಕಟ್ಟೆ 2022 ರವೇಳೆಗೆ 1.13 ಶತಕೋಟಿ ಡಾಲರ್ಗೆ ಹೆಚ್ಚುವ ನಿರೀಕ್ಷೆ ಇದೆ.
ಜೈವಿಕ ಉತ್ತೇಜಕಗಳ ಉಪಯೋಗವೇನು?
ಚೀನಾದಿಂದ ಬರುವ ಜೈವಿಕ ಉತ್ತೇಜಕ ರಸಗೊಬ್ಬರಗಳಿಂದ ಇಳುವರಿ ಬಂಪರ್
ಮಣ್ಣಿನ ಆರೋಗ್ಯದಲ್ಲಿಗಮನಾರ್ಹ ಸುಧಾರಣೆ
ಪೋಷಕಾಂಶ ಬಳಕೆಯಲ್ಲಿದಕ್ಷತೆ
ಪರಿಸರದ ಮೇಲೆ ಮಾರಕ ಪರಿಣಾಮವಾಗದು
ಭಾರತದ ಮುಂದಿನ ಆಯ್ಕೆ?
ಚೀನಾ ಬಳಸುವ ಮೂಲ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಬೇಡಿಕೆಗೆ ತಕ್ಕಷ್ಟು ವಿಶೇಷ ರಸಗೊಬ್ಬರ ಅಥವಾ ಜೈವಿಕ ಉತ್ತೇಜಕಗಳನ್ನು ಉತ್ಪಾದಿಸುವ ತಾಂತ್ರಿಕತೆ ಸದ್ಯಕ್ಕೆ ಭಾರತದಲ್ಲಿ ಇಲ್ಲ. ಈಗೀಗ ಹಲವು ರಸಗೊಬ್ಬರ ಉತ್ಪಾದಕ ಕಂಪನಿಗಳು ಇಂತಹ ವಿಶೇಷ ರಸಗೊಬ್ಬರ ಉತ್ಪಾದನೆಗೆ ಆಸಕ್ತಿ ತೋರಿಸಿವೆ. ಸದ್ಯ ವಿಶೇಷ ರಸಗೊಬ್ಬರಗಳ ಆಮದಿಗೆ ಜೋರ್ಡಾನ್ ಮತ್ತು ಐರೋಪ್ಯ ಒಕ್ಕೂಟದ ದೇಶಗಳನ್ನು ಆಶ್ರಯಿಸಬೇಕು.
ಯಾವುದಕ್ಕೆ ಚೀನಾ ತಡೆ?
- ನೀರಿನಲ್ಲಿ ಕರಗಬಲ್ಲ ರಸಗೊಬ್ಬರ (ಡಬ್ಲೂಎಸ್ಎಫ್)
- ಕಂಟ್ರೋಲ್ಡ್ ರಿಲೀಸ್ ಫರ್ಟಿಲೈಸರ್(ಸಿಆರ್ಎಫ್)
- ಸ್ಲೋ ರಿಲೀಸ್ ಫರ್ಟಿಲೈಸರ್(ಎಸ್ಆರ್ಎಫ್)
- ಬಲವರ್ಧಿತ ರಸಗೊಬ್ಬರ
- ಸೂಕ್ಷ್ಮ ಪೋಷಕಾಂಶ ಹಾಗೂ ನ್ಯಾನೊ ರಸಗೊಬ್ಬರ