ಮೈಸೂರು: ಸರ್ಕಾರದಿಂದ ಸೀಜ್ ಮಾಡಲಾಗಿದ್ದ ಮನೆಯಲ್ಲಿ ಕಳ್ಳರ ಕೈಚಳಕ; 14 ವರ್ಷಗಳಿಂದ ಮುಟ್ಟುಗೋಲು ಹಾಕಿದ್ದ ಆಸ್ತಿಯಲ್ಲಿ ಕಳ್ಳತನದ ಯತ್ನ

ಮೈಸೂರು: ಸರ್ಕಾರಿ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದ ಮನೆಯಲ್ಲಿ ಕಳ್ಳರು ನುಗ್ಗಿರುವ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನಡೆದಿದೆ.

ಈ ಮನೆ ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದು, ಸುಮಾರು 14 ವರ್ಷಗಳ ಹಿಂದೆ ಸರ್ಕಾರದ ಆದೇಶದ ಮೇರೆಗೆ ಸೀಜ್ ಮಾಡಲಾಗಿತ್ತು.
ಸೋಮವಾರ ಅಧಿಕಾರಿಗಳು ಆಸ್ತಿಯಲ್ಲಿದ್ದ ಚರಾಸ್ಥಿಗಳನ್ನು ಸ್ಥಳಾಂತರಿಸಲು ಮನೆಗೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ತಹಸೀಲ್ದಾರ್ ಶಿರೀನ್ ತಾಜ್, ಕಾನೂನು ಅಧಿಕಾರಿ ರಕ್ಷಿತ್, ಹಾಗೂ ರಾಜಸ್ವ ನಿರೀಕ್ಷಕ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದಾಗ, ಮನೆಯ ಮುಖ್ಯ ಬಾಗಿಲು ಮುರಿದು ಹೋಗಿರುವುದು ಗಮನಕ್ಕೆ ಬಂತು. ಹಿಂಬದಿಯ ಸೀಜ್ ಮಾಡದ ಬಾಗಿಲು ಭಾಗದಿಂದ ಅಪರಿಚಿತರು ಒಳ ನುಗ್ಗಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯ ಒಳಭಾಗದಲ್ಲಿ ವಸ್ತುಗಳ ಚೆಲ್ಲಾಪಿಲ್ಲಿ ಆಗಿದ್ದು, ದೋಚಾಟ ಅಥವಾ ಹಾನಿ ಉದ್ದೇಶದಿಂದ ಕಳ್ಳರು ನುಗ್ಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸರ್ಕಾರ ಸೀಜ್ ಮಾಡಿರುವ ಆಸ್ತಿಗಳಿಗೆ ಸೂಕ್ತ ಭದ್ರತೆ ಒದಗಿಸದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬ ಆರೋಪ ಸ್ಥಳೀಯರೊಳಗೆ ಕೇಳಿಬಂದಿದೆ. ಅಧಿಕಾರಿಗಳು ಈಗ ಆ ಮನೆಯನ್ನು ರಕ್ಷಿಸಲು ಪೊಲೀಸ್ ಭದ್ರತೆ ನಿಯೋಜಿಸಲು ವಿನಂತಿ ಸಲ್ಲಿಸಿದ್ದಾರೆ