ಪ್ರಸಿದ್ಧ ಬೆಳ್ಳುಳ್ಳಿ ಕಬಾಬ್ ಹೋಟೆಲ್ ಮಳೆಗೆ ಬಲಿ: 15 ಲಕ್ಷ ರೂ. ವ್ಯಾಪಾರ ನಷ್ಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು ಅಷ್ಟಿಷ್ಟಲ್ಲ. ಒಂದು ಸಣ್ಣ ಮಳೆ ಬಂದರೂ ಸಾಕು ಸಾಲು ಸಾಲು ಅವಾಂತರಗಳೇ ಆಗುತ್ತವೆ. ಅದರಂತೆ ಭಾನುವಾರ ಸುರಿದ ಮಳೆಯಿಂದಾಗಿ ಬೆಂಗಳುರು ನಗರದ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಇನ್ನು ಶಿವಾನಂದ ಸರ್ಕಲ್ ಬಳಿಯಿರುವ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹೋಟೆಲ್ ಮಳೆ ನೀರಿನಿಂದ ಜಲಾವೃತವಾಗಿದೆ.
ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್ ಅಂತಿರಬೇಕು.. ಚಟಪಟ… ಚಟಪಟ.. ಅನ್ನೋ ಡೈಲಾಗ್ ಹೊಡೆದು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಚಂದ್ರು ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಬೆಂಗಳೂರು ಕೆಫೆ ಕಟ್ಟದಲ್ಲಿರುವ ಚಂದ್ರು ಮಾಲೀಕತ್ವದ ಹೋಟೆಲ್ ಬೇಸ್ಮೆಂಟ್ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಕಳೆದ 2 ದಿನಗಳಿಂದ ಹೋಟೆಲ್ ಬಂದ್ ಆಗಿದೆ. ಅಲ್ಲದೇ ಸುಮಾರು 15 ಲಕ್ಷ ರೂ. ವ್ಯಾಪಾರ ಲಾಸ್ ಆಗಿದೆ ಎಂದು ಚಂದ್ರು ಅವಲತ್ತುಕೊಂಡಿದ್ದಾರೆ.