ದೆಹಲಿಯಲ್ಲಿ ಕೌಟುಂಬಿಕ ಮಾರಣಹೋಮ: ತಾಯಿ, ತಂಗಿ ಹಾಗೂ ತಮ್ಮನನ್ನು ಕೊಂದ ಪಾಪಿ; ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೇ ಬಂದ ಯುವಕ!

ನವದೆಹಲಿ: ತಾಯಿ, ತಂಗಿ ಹಾಗೂ ತಮ್ಮನನ್ನು ಕೊಲೆಗೈದು ಆರೋಪಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ದೆಹಲಿಯ (New delhi) ಲಕ್ಷ್ಮಿ ನಗರದಲ್ಲಿ (Laxmi Nagar) ನಡೆದಿದೆ.

ಆರೋಪಿಯನ್ನು ಮಂಗಲ್ ಬಜಾರ್ ಪ್ರದೇಶದ ನಿವಾಸಿ ಯಶ್ವೀರ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ತಾಯಿ ಕವಿತಾ (46), ಸಹೋದರಿ ಮೇಘನಾ (24) ಮತ್ತು ಸಹೋದರ ಮುಕುಲ್ (14) ಮೂವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದ ದಿನ, ಆರೋಪಿ ಮೂವರನ್ನು ಕೊಲೆ ಮಾಡಿ, ಬಳಿಕ ಲಕ್ಷ್ಮಿ ನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೂರು ಶವಗಳನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ನಿಖರ ಕಾರಣ ಏನು ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಆರೋಪಿ ತನ್ನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ.
ಈ ಕುರಿತು ನೆರೆಮನೆಯವರಾದ ಮಹೇಶ್ ಶರ್ಮಾ ಮಾತನಾಡಿ, ಮೃತ ಮೂವರ ಬಗ್ಗೆ ನನಗೆ ಗೊತ್ತಿಲ್ಲ. ಇಲ್ಲಿರುವ ಯಾರಿಗೂ ಅವರ ಬಗ್ಗೆ ಗೊತ್ತಿಲ್ಲ. ಆದರೆ ಅವರು ಯಾವಾಗಲೂ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಿದ್ದರು ಎಂದು ತಿಳಿಸಿದ್ದಾರೆ.