ಪಾಕಿಸ್ತಾನದಲ್ಲಿ ಧರ್ಮನಿಂದನೆ ಸುಳ್ಳು ಆರೋಪ: ಪ್ರವಾಸಿಗನನ್ನು ಸಜೀವ ದಹನ ಮಾಡಿದ ಗುಂಪು

ಇಸ್ಲಾಮಾಬಾದ್: ಕುರಾನ್ ಗೆ ಅಗೌರವ ತೋರಿದ್ದಾರೆಂದು ಪ್ರವಾಸಿಗರೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಗುಂಪೊಂದು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿತ್ತು. ವರದಿಗಳ ಪ್ರಕಾರ, ಆ ವ್ಯಕ್ತಿ ಮೇಲೆ ಕೋಪಗೊಂಡ ಜನರು ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ, ಅಂತಿಮವಾಗಿ ಸಜೀವದಹನ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಗುಂಪಿನಲ್ಲಿ ಹಂತಕರು ಕೂಡ ಇದ್ದರು, ಹಗಲಿನಲ್ಲಿಯೇ ಅಮಾಯಕರೊಬ್ಬರ ಹತ್ಯೆ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕಾನೂನು ವಿಶ್ವದ ಅತ್ಯಂತ ಕಠಿಣ ಕಾನೂನುಗಳಲ್ಲಿ ಒಂದು. ಇವುಗಳನ್ನು ಅಲ್ಪಸಂಖ್ಯಾತರು, ರಾಜಕೀಯ ವಿರೋಧಿಗಳು ಅಥವಾ ವಿದೇಶಿಯರ ವಿರುದ್ಧ ಹೆಚ್ಚಾಗಿ ಬಳಸುತ್ತಾರೆ.
ಕೆಲವೊಮ್ಮೆ ವಿಶ್ವಾಸಾರ್ಹ ಪುರಾವೆಗಳಿಲ್ಲದೆ, ಕೇವಲ ಆರೋಪಗಳು ಬಂದಿದ್ದರೂ, ನಂತರ ಸುಳ್ಳು ಎಂದು ಸಾಬೀತಾದರೂ ಈ ಕಾನೂನು ಬಳಕೆ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ವಿದೇಶಿ ಸರ್ಕಾರಗಳು ಈ ದಾಳಿಯನ್ನು ಖಂಡಿಸಿವೆ.
ಎರಡು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಕುರಾನ್ಗೆ ಬೆಂಕಿ ಹೆಚ್ಚಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಖಾನೆವಾಲ್ ಜಿಲ್ಲೆ ಜಂಗಲ್ ಡೇರಾವಾಲಾ ಗ್ರಾಮದ ಬಳಿ ಹಲವು ಮುಸ್ಲಿಮರು ಪ್ರಾರ್ಥನೆ ಮಾಡುವಾಗ ಬಾರಾ ಚಾಕ್ ಗ್ರಾಮದ ಮುಷ್ತಾಕ್ ಅಹ್ಮದ್ ಎಂಬ ವ್ಯಕ್ತಿಯು ಕುರಾನ್ ಹರಿದುಹಾಕಿ, ಅದರ ಹಾಳೆಗಳನ್ನು ಸುಟ್ಟುಹಾಕಿದ್ದ.
ಕುರಾನ್ ಸುಟ್ಟಿರುವ ಸುದ್ದಿ ಹರಡುತ್ತಲೇ ನೂರಾರು ಮುಸ್ಲಿಮರು ಒಗ್ಗೂಡಿ ವ್ಯಕ್ತಿಯನ್ನು ಮೊದಲು ಮರಕ್ಕೆ ಕಟ್ಟಿಹಾಕಿದ್ದಾರೆ. ಎಲ್ಲರೂ ಆತನಿಗೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಶಂಕಿತ ತಾನು ನಿರಪರಾಧಿಯೆಂದು ಹೇಳುತ್ತಿದ್ದರೂ ಮಾತುಗಳನ್ನೂ ಆಲಿಸಿಕೊಳ್ಳದೇ ಮರಕ್ಕೆ ನೇತುಹಾಕಿ ಆತನನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಪ್ರಕಟಿಸಿದೆ.
ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡು ಆರೋಪಿಗಳನ್ನು ಹತ್ಯೆ ಮಾಡುತ್ತಿರುವ ಘಟನೆ ಪಾಕಿಸ್ತಾನದಲ್ಲಿ ಇದು ಮೊದಲಲ್ಲ. ಇದೇ ರೀತಿಯ ಘಟನೆ ಕಳೆದ ನವೆಂಬರ್ ತಿಂಗಳಲ್ಲಿ ಖೈಬರ್ ಪಖ್ತುಂಕ್ವಾದಲ್ಲಿ ನಡೆದಿತ್ತು.