ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಸುಳ್ಳು ವದಂತಿ

ಗುಜರಾತ್ನ ಅಹಮ್ಮದಾಬಾದ್ನ ಮೇಘನಿ ನಗರ ಪ್ರದೇಶದಲ್ಲಿ ಇದೇ 12ರಂದು ನಡೆದಿದ್ದ ಭೀಕರ ವಿಮಾನ ಅಪಘಾತದಲ್ಲಿ 240ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅವರ ಪೈಕಿ ಇಂದಿಗೂ ಕೆಲವು ಮೃತದೇಹಗಳ ಪತ್ತೆಯೇ ಆಗದಷ್ಟು ಭೀಕರವಾಗಿದೆ ಸ್ಥಿತಿ. ಪ್ರಯಾಣಿಕರು ಹಾಗೂ ವಿಮಾನ ಅಪಘಾತಕ್ಕೀಡಾದ ಕಟ್ಟಡದ ವೈದ್ಯಕೀಯ ವಿದ್ಯಾರ್ಥಿಗಳು ಸುಟ್ಟು ಕರಕಲಾಗಿರುವ ಹಿನ್ನೆಲೆಯಲ್ಲಿ ಯಾರ ದೇಹ ಯಾರದ್ದು ಎಂದು ಡಿಎನ್ಎ ಮೂಲಕ ಪತ್ತೆ ಹಚ್ಚುವ ದೊಡ್ಡ ಕಾರ್ಯ ನಡೆದಿದ್ದು, ಇಂದಿಗೂ ಅದು ಕಗ್ಗಂಟಾಗಿಯೇ ಉಳಿದಿದೆ.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಮೃತಪಟ್ಟಿದ್ದು, ಅವರು ಸೇರಿದಂತೆ ಹಲವರ ಅಂತ್ಯಕ್ರಿಯೆಯೂ ನಡೆದಿದೆ. ವಿಮಾನ ಟೇಕಾಫ್ ಆದ 15 ಕಿ ಮೀಟರ್ ದೂರದಲ್ಲಿ 600 ರಿಂದ 700 ಅಡಿ ಎತ್ತರದಲ್ಲಿ ಹಾರಿರುವಾಗ ವಿಮಾನ ಪತನವಾಗಿದೆ. ಜನ ವಸತಿ ಕಟ್ಟಡ ಮೇಲೆ ಮತ್ತು ಅಲ್ಲೇ ಇರುವ ಹಾರ್ಸ್ ಕ್ಯಾಂಪ್ ಬಳಿ ವಿಮಾನ ಬಿದ್ದಿದ್ದು, ಈ ಬಗ್ಗೆ ವಿವರಕ್ಕಾಗಿ ತನಿಖೆ ನಡೆಯುತ್ತಲೇ ಇದೆ.
ಇಂಥದ್ದೇ ಘಟನೆಯನ್ನು ಕಾದು ಕುಳಿತವರಂತೆ ಕೆಲವು ಯುಟ್ಯೂಬರ್, ರೀಲ್ಸ್ ಮಾಡುವವರು ಮನಸ್ಸಿಗೆ ಬಂದಂತೆ ಏನೇನೋ ಸೃಷ್ಟಿ ಮಾಡಿ, ಕಲ್ಪನೆಯ ವಿಡಿಯೋಗಳನ್ನು ಮಾಡಿ ತಮ್ಮ ಲೈಕ್ಸ್, ವ್ಯೂವ್ಸ್ಗಳನ್ನು ಹೆಚ್ಚು ಮಾಡಿಕೊಳ್ಳಲು ಹಾತೊರೆಯುವ ಹೀನ ಮನಸ್ಥಿತಿಗೆ ಬಂದು ತಲುಪಿದ್ದಾರೆ. ಇದೀಗ ಅಂಥದ್ದೇ ಒಂದು ವಿಡಿಯೋ ಏವಿಯೇಷನ್ಸ್ಪಾಟಿಂಗ್ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಈ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್. ಅವರು ಇದಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಮಾನದ AI 171 ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಪವಾಡದಂತೆ ಬದುಕುಳಿದ್ದರು. ಆದರೆ, ಈ ಇನ್ಸ್ಟಾಗ್ರಾಮ್ನಲ್ಲಿ ಅಂದು ವಿಶ್ವಾಸ್ ಕುಮಾರ್ ಅವರು ಮನೆಯಲ್ಲಿ ಇದ್ದರು, ವಿಮಾನದಲ್ಲಿ ಇರಲೇಇಲ್ಲ. ಅದು ಶುದ್ಧ ಸುಳ್ಳು ಎಂದು ವಿಡಿಯೋ ಶೇರ್ ಮಾಡಿದೆ.

ಈ ವಿಡಿಯೋ ಅನ್ನು ಕೆಲವೇ ಕೆಲವರು ನಂಬಿದ್ದರೆ, ಬಹುತೇಕ ಮಂದಿ ಉಗಿದಿದ್ದಾರೆ. ಟ್ರೋಲ್ ಆದರೇನಂತೆ, ಈ ವಿಡಿಯೋದ ವ್ಯೂವ್ಸ್ ಹೆಚ್ಚಾಗುವ ಮೂಲಕ ವಿಡಿಯೋ ಶೇರ್ ಮಾಡಿದವರಿಗೆ ವರದಾನವಾಗಿದೆ. ಇಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಕಾನೂನು ಇಲ್ಲದ ಕಾರಣ, ಮನಸ್ಸಿಗೆ ಬಂದಂತೆ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಅದೇ ಇನ್ನೊಂದೆಡೆ, ಬಾಲಿವುಡ್ನ ಖ್ಯಾತ ನಟಿ, ಶಾರುಖ್ ಖಾನ್ ಅವರ ಕಭಿ ಹಾನ್ ಕಭಿ ನಾ ಸಹನಟಿ, ಸುಚಿತ್ರಾ ಕೃಷ್ಣಮೂರ್ತಿ ಅವರು ಇತ್ತೀಚಿನ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯ ಬಗ್ಗೆ ಪೋಸ್ಟ್ ಮಾಡಿ ಈಗ ಕ್ಷಮೆ ಕೋರಿದ್ದಾರೆ.
ಅವರು ಈ ವಿಶ್ವಾಸ್ ಕುಮಾರ್ ರಮೇಶ್ ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಮತ್ತು ಬದುಕುಳಿದ ಏಕೈಕ ವ್ಯಕ್ತಿ ಎನ್ನುವುದು ಸುಳ್ಳು ಎಂದು ಎನ್ನಿಸುತ್ತಿದೆ. ಇದು ನಿಜಕ್ಕೂ ವಿಚಿತ್ರ. ಯುಕೆಯಲ್ಲಿರುವ ಅವರ ಕುಟುಂಬ ಅವರ ಕಥೆಯನ್ನು ದೃಢೀಕರಿಸಲಿಲ್ಲವೇ? ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಅವರು ಬರಲಿಲ್ಲ. ಇದು ನಿಜವಾಗಿದ್ದರೆ ಗಂಭೀರ ಶಿಕ್ಷೆಗೆ ಮಾತ್ರವಲ್ಲ, ಮಾನಸಿಕವಾಗಿಯೂ ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದೆಲ್ಲಾ ಬರೆದುಕೊಂಡಿದ್ದರು. ಯಾವಾಗ ತಾವು ಬರೆದಿರುವುದು ತಪ್ಪು ಮಾಹಿತಿ ಎಂದು ತಿಳಿಯಿತೋ ಜೊತೆಗೆ ಜನರಿಂದ ಇನ್ನಿಲ್ಲದಂತೆ ಉಗಿಸಿಕೊಳ್ಳಲು ಶುರು ಮಾಡಿದರೋ ಈಗ ಎಕ್ಸ್ ಖಾತೆಯಲ್ಲಿ ಕ್ಷಮೆ ಕೋರಿದ್ದಾರೆ. ತಾವು ಮನಸ್ಸಿಗೆ ತೋಚಿದ್ದನ್ನು ಬರೆದಿರುವುದಕ್ಕೆ ಕ್ಷಮಿಸುವಂತೆ ಹೇಳಿದ್ದಾರೆ!
