ನಕಲಿ ಚಿನ್ನಕ್ಕೆ ಸಿಕ್ಕಿತು ಮೂರು ಲಕ್ಷ ನಗದು!

ಹೊಳೆಹೊನ್ನೂರು: ವ್ಯಕ್ತಿಯೋರ್ವರಿಗೆ ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪದ ಮೇರೆಗೆ, ವ್ಯಕ್ತಿಯೋರ್ವನನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ದಾವಣಗರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಎಸ್.ಬಿ.ಆರ್.
ಕಾಲೋನಿ ನಿವಾಸಿ ರಾಮಪ್ಪ ಆಲಿಯಾಸ್ ಬೆಂಕಿ ರಾಮಪ್ಪ (65) ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ವಂಚನೆ ಮಾಡಲಾಗಿದ್ದ 3.08 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮೇ 6 ರ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಹೊಸಪೇಟೆ ನಗರದ ನಿವಾಸಿ ರಾಜೇಶ್ ಎಂಬವರಿಗೆ 2024ರ ಜುಲೈ 21 ರಂದು ಸುರೇಶ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೂ ಅಸಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿ, ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭದ್ರಾವತಿ ಡಿವೈಎಸ್ಪಿ ನಾಗರಾಜ್ ಕೆ.ಆರ್. ಮೇಲ್ವಿಚಾರಣೆಯಲ್ಲಿ ಇನ್ಸ್ ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಮಂಜುನಾಥ್ ಎಸ್ ಕುರಿ, ಕೃಷ್ಣನಾಯ್ಕ್, ಸಿಬ್ಬಂದಿಗಳಾದ ಹೆಚ್.ಸಿ. ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ಪಿಸಿಗಳಾದ ವಿಶ್ವನಾಥ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.