ಎಲ್ಲರಿಗೂ ಎರಡೆರಡು ಲಾಡು, ನನಗೊಂದು ಮಾತ್ರ ಕೊಟ್ಟರು: ಸಿಎಂ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

ಭೋಪಾಲ್: ಎಲ್ಲರಿಗೂ ಎರಡೆರಡು ಲಾಡು, ನನಗೆ ಮಾತ್ರ ಒಂದೇ ಕೊಟ್ಟಿದ್ದು ಎಂದು ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಂದು ಸ್ವಾತಂತ್ರ್ಯ ದಿನಾಚರಣೆ. ಗ್ರಾಮ ಪಂಚಾಯತ್ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಧ್ವಜಾರೋಹಣದ ಬಳಿಕ ಹಾಜರಿದ್ದ ಎಲ್ಲರಿಗೂ ಲಡ್ಡುಗಳನ್ನು ವಿತರಿಸಲಾಗಿತ್ತು. ಗ್ರಾಮಸ್ಥ ಕಮಲೇಶ್ ಕುಶ್ವಾಹ ಸರದಿ ಬಂದಾಗ ಅವರಿಗೆ ಕೇವಲ ಒಂದು ಲಾಡನ್ನು ನೀಡಲಾಗಿತ್ತು. ಅಲ್ಲಿಯೇ ಎಲ್ಲರಿಗೂ ಎರಡು ಕೊಟ್ಟಿದ್ದೀರಿ ನನಗಿಲ್ವಾ ಅಂತಾ ಹೇಳಿದ್ದರು.

ಆದರೆ ಅಲ್ಲಿರುವವರು ಕೊಡಲು ನಿರಾಕರಿಸಿದ್ದರು. ಅವರು ಪಂಚಾಯತ್ ಕಟ್ಟಡದ ಹೊರಗಿನಿಂದಲೇ ಸಿಎಂ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಧ್ವಜಾರೋಹಣ ಮಾಡಿದ ನಂತರ ಪಂಚಾಯತ್ ಸರಿಯಾಗಿ ಸಿಹಿತಿಂಡಿಗಳನ್ನು ವಿತರಿಸಲು ವಿಫಲವಾಗಿದೆ ಮತ್ತು ಈ ವಿಷಯವನ್ನು ಬಗೆಹರಿಸಬೇಕಾಗಿದೆ ಎಂದು ಖುಷ್ವಾಹ ತಮ್ಮ ದೂರಿನಲ್ಲಿ ಬರೆದಿದ್ದಾರೆ.
ಗ್ರಾಮಸ್ಥರು ಹೊರಗೆ ರಸ್ತೆಯಲ್ಲಿ ನಿಂತಿದ್ದರು. ಪ್ಯೂನ್ ಅವರಿಗೆ ಒಂದು ಲಾಡು ಕೊಟ್ಟಿದ್ದಾರೆ , ಆದರೆ ಅವರು ಎರಡು ಲಾಡು ಕೊಡಲು ಒತ್ತಾಯಿಸಿದರು. ನಿರಾಕರಿಸಿದಾಗ, ಅವರು ಸಿಎಂ ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂದು ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.
ಪಂಚಾಯತ್ ಆತನಿಗಾಗಿ ಮಾರುಕಟ್ಟೆಯಿಂದ ಒಂದು ಕೆಜಿ ಸಿಹಿ ತಿನಿಸು ಖರೀದಿಸಿದೆ, ದೂರುದಾರನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಜನವರಿ 2020 ರಲ್ಲಿ, ಜಿಲ್ಲೆಯ ಗ್ರಾಮಸ್ಥರೊಬ್ಬರು ಸಿಎಂ ಸಹಾಯವಾಣಿಯಲ್ಲಿ ದೋಷಪೂರಿತ ಹ್ಯಾಂಡ್ ಪಂಪ್ ಬಗ್ಗೆ ದೂರು ನೀಡಿದ್ದರು.
ಇಲಾಖೆಯ ಆಗಿನ ಕಾರ್ಯನಿರ್ವಾಹಕ ಎಂಜಿನಿಯರ್ ಪಿಆರ್ ಗೋಯಲ್ ದೂರಿಗೆ ನೀಡಿದ ಉತ್ತರದಲ್ಲಿ, ದೂರುದಾರ ಹುಚ್ಚ, ಅವರಿಗೆ ಅಪಸ್ಮಾರ ರೋಗವಿದೆ. ಅವರ ಇಡೀ ಕುಟುಂಬಕ್ಕೆ ರೋಗ ಅಂಟಿಕೊಂಡಿದೆ . ಹ್ಯಾಂಡ್ ಪಂಪ್ ದೋಷಪೂರಿತವಾಗಿಲ್ಲ, ಅವರ ಮನಸ್ಸು ದೋಷಪೂರಿತವಾಗಿದೆ ಎಂದು ಹೇಳಿದ್ದರು.
ಅಧಿಕಾರಿಯ ಹೇಳಿಕೆಗಳು ಕೋಲಾಹಲಕ್ಕೆ ಕಾರಣವಾದವು, ನಂತರ ಎಂಜಿನಿಯರ್ಗೆ ನೋಟಿಸ್ ನೀಡಲಾಯಿತು. ನಂತರ, ಅವರು ತಮ್ಮ ಐಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.