ತಂದೆ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚುವಷ್ಟು ಮಗಳು ಮಾಡಿದ್ದಾದರೂ ಏನು?

ಗುರುಗ್ರಾಮ: ಮುಜಾಫರ್ನಗರದಲ್ಲಿರುವ ಕಾಡೊಂದರಲ್ಲಿ ಮಹಿಳೆಯ ಅರೆಬೆಂದ ಶವ ಪತ್ತೆಯಾಗಿತ್ತು. ಇದೀಗ ಅದು ಮರ್ಯಾದಾ ಹತ್ಯೆ(Murder) ಎಂಬುದು ತಿಳಿದುಬಂದಿದೆ. ಯುವತಿ ಲಿವ್ ಇನ್ ಸಂಬಂಧದಲ್ಲಿದ್ದರು, ಅದು ತಿಳಿದ ಬಳಿಕ ಕೋಪಗೊಂಡ ತಂದೆ ತನ್ನ ಮಗನ ಜತೆ ಸೇರಿ ಮಗಳ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಯುವತಿ ಗುರುಗ್ರಾಮದ ಇ-ಕಾಮರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಗ್ರಾಮದ ಅಮಿತ್ ಎಂಬ ವ್ಯಕ್ತಿಯೊಂದಿಗೆ ಆಕೆ ಲಿವ್-ಇನ್ ಸಂಬಂಧದಲ್ಲಿದ್ದರು. ಪೊಲೀಸರ ಪ್ರಕಾರ, ಮಹಿಳೆ ತನ್ನ ಕುಟುಂಬವನ್ನು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಮನೆಗೆ ಮರಳಿದ್ದಳು.
ಆಕೆ 2019 ರಲ್ಲಿ ಮದುವೆಯಾಗಿದ್ದರು ಆದರೆ ಎರಡು ವರ್ಷಗಳ ನಂತರ ಪತಿಯನ್ನು ತೊರೆದಿದ್ದರು. ಆಕೆಯ ಕುಟುಂಬ 2022 ರಲ್ಲಿ ಮತ್ತೊಂದು ಮದುವೆಗೆ ಪ್ರಯತ್ನಿಸಿತು, ಆದರೆ ಅದು ಫಲ ನೀಡಲಿಲ್ಲ. ಅದೇ ವರ್ಷ ಗುರುಗ್ರಾಮದಲ್ಲಿ ಅಮಿತ್ ಜತೆ ವಾಸಿಸಲು ಶುರು ಮಾಡಿದ್ದರು. ಉದ್ವಿಗ್ನತೆಯ ಹೊರತಾಗಿಯೂ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಮೇ 26 ರಂದು ಅಮಿತ್ ಜೊತೆ ಕೊನೆಯದಾಗಿ ಮಾತನಾಡಿದ್ದರು, ತನ್ನ ಕುಟುಂಬದವರ ಮನಸ್ಸು ಗೆಲ್ಲುವ ತನ್ನ ಕೊನೆಯ ಪ್ರಯತ್ನ ಎಂದು ಹೇಳಿದ್ದಳು. ಮೇ 29–30 ರ ರಾತ್ರಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ತಂದೆ ರಾಜವೀರ್ ಸಿಂಗ್ (55) ಮತ್ತು ಸಹೋದರ ಸುಮಿತ್ ಸಿಂಗ್ (24) ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಶವವನ್ನು 5 ಕಿ.ಮೀ ದೂರದ ಕಾಡಿಗೆ ತೆಗೆದುಕೊಂಡು ಹೋಗಿ, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಎರಡು ದಿನಗಳ ನಂತರ, ತನಿಖೆಯನ್ನು ಗೊಂದಲಗೊಳಿಸಲು ಕುಟುಂಬವು ಆಕೆ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿತ್ತು. ಆದರೆ ಜೂನ್ 3 ರಂದು, ಪೊಲೀಸರು ಕಾಲುವೆಯ ಬಳಿ ಅರೆಬೆಂದ ಶವ ಪತ್ತೆಯಾಗಿತ್ತು.ಆದರೆ ಗುರುತಿಸುವುದು ಕಷ್ಟಕರವಾಗಿತ್ತು.
ಆದರೆ ಕಾನ್ಸ್ಟೆಬಲ್ ಮತ್ತು SHO ಆಕೆಯ ಕೈಯಲ್ಲಿದ್ದ ಬಳೆಗಳನ್ನು ಗಮನಿಸಿದರು ಮತ್ತು ಅವುಗಳನ್ನು ಆಕೆಯ ಹಿಂದಿನ ಫೋಟೋಗೆ ಹೊಂದಿಸಿದರು. ಇದು ಮಹಿಳೆಯ ಗುರುತನ್ನು ದೃಢಪಡಿಸಲು ಸಹಾಯ ಮಾಡಿತು.