ಬ್ಯಾಂಕ್ ಮುಚ್ಚಿದರೂ ₹10 ಲಕ್ಷವರೆಗೆ ಖಾತರಿ! ಸರ್ಕಾರದ ಹೊಸ ಯೋಜನೆ ಪೂರೈಕೆ ಹಂತದಲ್ಲಿ

ನವದೆಹಲಿ: ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್, ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಇತ್ಯಾದಿ ಹಣಕಾಸು ಸಂಸ್ಥೆಗಳ ಕರ್ಮಕಾಂಡದಿಂದಾಗಿ ಜನರಿಗೆ ಬ್ಯಾಂಕ್ನಲ್ಲಿ ಹಣ ಇಡುವುದಕ್ಕೂ ಭಯದ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಸರ್ಕಾರ ಐದು ವರ್ಷದ ಹಿಂದೆ ಬ್ಯಾಂಕ್ ಹಣಕ್ಕೆ ಇನ್ಷೂರೆನ್ಸ್ ಗ್ಯಾರಂಟಿಯನ್ನು (Bank deposit insurance guarantee) ಒಂದು ಲಕ್ಷ ರೂನಿಂದ ಐದು ಲಕ್ಷ ರೂಗೆ ಏರಿಸಿತ್ತು.
ಇದೀಗ ಈ ಗ್ಯಾರಂಟಿ ಹಣವನ್ನು ಎರಡು ಪಟ್ಟು ಹೆಚ್ಚಿಸಲೂ ಸರ್ಕಾರ ಯೋಜಿಸಿದೆ. ಸದ್ಯದಲ್ಲೇ ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಅನ್ನು 10 ಲಕ್ಷ ರೂಗೆ ಏರಿಸಬಹುದು ಎಂದೆನ್ನಲಾಗುತ್ತಿದೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ವೆಬ್ಸೈಟ್ನಲ್ಲಿ ಬಂದ ವರದಿ ಪ್ರಕಾರ ಮುಂದಿನ ಆರು ತಿಂಗಳೊಳಗೆ ಈ ಕ್ರಮ ನಿರೀಕ್ಷಿಸಬಹುದು.
ಇದೇನಾದರೂ ನಿಜವಾದಲ್ಲಿ ಜನರು ಬ್ಯಾಂಕುಗಳಲ್ಲಿ ಇರಿಸುವ 10 ಲಕ್ಷ ರೂವರೆಗಿನ ಹಣಕ್ಕೆ ಇನ್ಷೂರೆನ್ಸ್ ಖಾತ್ರಿ ಇರುತ್ತದೆ. ಅಂದರೆ, ಬ್ಯಾಂಕು ಮುಚ್ಚಿದರೂ 10 ಲಕ್ಷ ರೂವರೆಗಿನ ಹಣ ಗ್ರಾಹಕರಿಗೆ ಖಾತ್ರಿಯಾಗಿ ಮರಳುತ್ತದೆ. ಸದ್ಯ ಇದು 5 ಲಕ್ಷ ರೂ ಇದೆ. ಈ ಮಿತಿಯನ್ನು 10 ಲಕ್ಷಕ್ಕೆ ಏರಿಸಿದರೆ ಬ್ಯಾಂಕ್ ಬಗ್ಗೆ ಗ್ರಾಹಕರ ವಿಶ್ವಾಸ ಹೆಚ್ಚಬಹುದು ಎನ್ನುವ ನಂಬಿಕೆ ಸರ್ಕಾರದ್ದಾಗಿದೆ.
ಅಖಿಲ ಭಾರತ ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘವು 2018-19ರಲ್ಲೇ ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಮಿತಿಯನ್ನು 1 ಲಕ್ಷ ರೂನಿಂದ 10 ಲಕ್ಷ ರೂಗೆ ಏರಿಸಬೇಕೆಂದು ಮನವಿ ಮಾಡಿತ್ತು. ಆದರೆ, ಸರ್ಕಾರ 5 ಲಕ್ಷ ರೂಗೆ ಏರಿಕೆಯನ್ನು ಮಿತಿಗೊಳಿಸಿತು. ಈಗ 10 ಲಕ್ಷ ರೂಗೆ ಏರಿಸುವ ಆಲೋಚನೆ ನಡೆದಿದೆ. ಈ ವಲಯದಲ್ಲಿರುವ ಕೆಲವರು ಈ 10 ಲಕ್ಷ ರೂ ಇನ್ಷೂರೆನ್ಸ್ ಗ್ಯಾರಂಟಿ ಸಾಲದು, ಇನ್ನೂ ಹೆಚ್ಚಿನ ಮೊತ್ತಕ್ಕೆ ಇನ್ಷೂರೆನ್ಸ್ ಇರಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.
ಡೆಪಾಸಿಟ್ ಇನ್ಷೂರೆನ್ಸ್ ಮಿತಿ ಏರಿಕೆಗೆ ಹಣಕಾಸು ಸಂಸ್ಥೆಗಳಿಂದ ವಿರೋಧ?
ಐದು ಲಕ್ಷ ರೂವರೆಗಿನ ಬ್ಯಾಂಕ್ ಡೆಪಾಸಿಟ್ಗಳಿಗೆ ಸರ್ಕಾರವು ಇನ್ಷೂರೆನ್ಸ್ ಖಾತ್ರಿಯನ್ನು ಸುಮ್ಮನೆ ಕೊಡುವುದಿಲ್ಲ. ಗ್ರಾಹಕರು ಪಡೆಯುವ ಸಾಲಕ್ಕೆ ಬ್ಯಾಂಕುಗಳು ಹೇಗೆ ಇನ್ಷೂರೆನ್ಸ್ ವಸೂಲಿ ಮಾಡುತ್ತವೆಯೋ, ಹಾಗೆಯೇ, ಡೆಪಾಸಿಟ್ ಇನ್ಷೂರೆನ್ಸ್ಗೆ ಸರ್ಕಾರಕ್ಕೆ ಬ್ಯಾಂಕುಗಳು ನಿಗದಿತ ಪ್ರೀಮಿಯಮ್ ಪಾವತಿಸಬೇಕು.
ಈಗ ಇನ್ಷೂರೆನ್ಸ್ ಮಿತಿಯನ್ನು 10 ಲಕ್ಷಕ್ಕೆ ಏರಿಸಿದರೆ, ಪ್ರೀಮಿಯಮ್ ಕೂಡ ಹೆಚ್ಚು ಕಟ್ಟಬೇಕಾಗುತ್ತದೆ. ಉತ್ತಮ ಸ್ಥಿತಿಯಲ್ಲಿರುವ ಬ್ಯಾಂಕುಗಳಿಗೆ ಇದು ಅನಗತ್ಯ ಹೊರೆ ಎಂಬುದು ಕೆಲ ಬ್ಯಾಂಕುಗಳ ಅನಿಸಿಕೆ.