ಮೃತದೇಹಗಳ ಅಂತ್ಯಸಂಸ್ಕಾರಗೂ ಜನಾಂಗೀಯ ಸಂಘರ್ಷದ ಕರಿನೆರಳು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಮಣಿಪುರಿ ಸಿಬ್ಬಂದಿಗೆ ಬಿಕ್ಕಟ್ಟು

ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕರಿ ನೆರಳು ಇತ್ತೀಚಿಗೆ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಮೇಲೂ ಬಿದ್ದಿದೆ.
ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ AI 171 ಅಪಘಾತದಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು.
ಇದರಲ್ಲಿ ಮಣಿಪುರದ ಇಬ್ಬರು ಕ್ಯಾಬಿನ್ ಸಿಬ್ಬಂದಿ ಸೇರಿದ್ದಾರೆ.
ಮೃತ ಕ್ಯಾಬಿನ್ ಸಿಬ್ಬಂದಿಗಳಲ್ಲಿ ಒಬ್ಬರಾದ ನ್ಗಾಂಥೋಯ್ ಕೆ ಶರ್ಮಾ ಮೈತೈ ಸಮುದಾಯಕ್ಕೆ ಸೇರಿದ್ದರೆ, ಇನ್ನೊಬ್ಬರು ಲ್ಯಾಮ್ನುಂಥೀಮ್ ಸಿಂಗ್ಸನ್ ಕುಕಿ ಸಮುದಾಯಕ್ಕೆ ಸೇರಿದ್ದಾರೆ.
ಅಹಮದಾಬಾದ್ನಲ್ಲಿ ಅಧಿಕಾರಿಗಳು ಇಬ್ಬರು ಸಿಬ್ಬಂದಿಗಳ ಮೃತದೇಹಗಳನ್ನು ಗುರುತಿಸಿ ಮಣಿಪುರಕ್ಕೆ ಕಳುಹಿಸಲು ಸಿದ್ಧತೆ ಮಾಡುತ್ತಿದ್ದರೂ, ಸ್ಥಳೀಯ ಆಡಳಿತ, ಪೊಲೀಸರು ಮತ್ತು ಮೈತೈ ಮತ್ತು ಕುಕಿ ನಾಯಕರ ನಡುವೆ ಮೃತದೇಹಗಳ ಅಂತ್ಯಸಂಸ್ಕಾರದ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ ಎಂದು ವತದಿಯಾಗಿದೆ.
ಮೇ 2023 ರಿಂದ, ರಾಜ್ಯವು ಜನಾಂಗೀಯ ಸಂಘರ್ಷದಿಂದ ನಲುಗಿದೆ. ಇದರ ಪರಿಣಾಮವಾಗಿ 260 ಜನರು ಮೃತಪಟ್ಟಿದ್ದಾರೆ. ಅಂದಾಜು 50,000 ಜನರು ಸ್ಥಳಾಂತರಗೊಂಡಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ. ಕುಕಿ ಸಮುದಾಯಕ್ಕೆ ಸೇರಿದವರು ಇಂಫಾಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ತೊರೆದು ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮೈತೈ ಸಮುದಾಯಕ್ಕೆ ಸೇರಿದವರು ಇದಕ್ಕೆ ವಿರುದ್ಧವಾಗಿ ಬೆಟ್ಟ ಪ್ರದೇಶಗಳನ್ನು ತೊರೆದಿದ್ದಾರೆ. ಈ ಪ್ರದೇಶಗಳನ್ನು ಸ್ಥಳೀಯರು ರಕ್ಷಿಸುತ್ತಾರೆ. ಕೇಂದ್ರ ಭದ್ರತಾ ಪಡೆಗಳು ಕೇವಲ ಹೊರವಲಯಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ವರದಿಯಾಗಿದೆ.
ಈಗ ಇಡೀ ಚರ್ಚೆ ಕೇಂದ್ರೀಕತವಾಗಿರುವುದು ಮಣಿಪುರದಲ್ಲಿ ಸಿಂಗ್ಸನ್ ಅವರ ದೇಹವು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ. ಏಕೆಂದರೆ ಕುಕಿಗಳು ಸಾವಿನ ಭಯದಿಂದ ಇಂಫಾಲ್ಗೆ ಪ್ರವೇಶಿಸುವುದಿಲ್ಲ. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಅವರ ಕುಟುಂಬದೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಇಂಫಾಲ್ ವಿಮಾನ ನಿಲ್ದಾಣದಲ್ಲಿ ಮೃತದೇಹವನ್ನು ಸ್ವೀಕರಿಸಲು ಬಯಸಿದರೆ ಇಂಫಾಲ್ನಿಂದ ಅವರು ನೆಲೆಸಿರುವ ಕಾಂಗ್ಪೋಕ್ಪಿಗೆ ಭದ್ರತಾ ಬೆಂಗಾವಲು ಪಡೆಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಸಿಂಗ್ಸನ್ ಅವರ ಕುಟುಂಬವು ಇಂಫಾಲ್ನ ನ್ಯೂ ಲ್ಯಾಂಬುಲೇನ್ ಪ್ರದೇಶದಲ್ಲಿ ವಾಸಿಸುತ್ತಿತ್ತು. ಆದರೆ ಸಂಘರ್ಷ ಭುಗಿಲೆದ್ದ ನಂತರ ಕಾಂಗ್ಪೋಪ್ಕಿಯ ಬೆಟ್ಟದ ಜಿಲ್ಲೆಗೆ ಪಲಾಯನ ಮಾಡಿತು.
ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಮಣಿಪುರ ಸರ್ಕಾರವು ಏರ್ ಇಂಡಿಯಾ ಮತ್ತು ಟಾಟಾ ಗ್ರೂಪ್ ಜೊತೆ ಸಂಪರ್ಕದಲ್ಲಿದೆ. ಇಂಫಾಲ್ ವಿಮಾನ ನಿಲ್ದಾಣದಲ್ಲಿ ಎರಡೂ ಮೃತದೇಹಗಳನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದು ಭರವಸೆ ನೀಡಿದೆ.
“ಕಾಂಗ್ಪೋಕ್ಪಿ ಪೊಲೀಸ್ ವರಿಷ್ಠಾಧಿಕಾರಿ ಕುಟುಂಬವನ್ನು ಭೇಟಿಯಾಗಿ, ಮಗಳ ಮೃತದೇಹವನ್ನು ಇಂಫಾಲ್ ಮೂಲಕ ತರಲು ಅವರಿಗೆ ಎಲ್ಲಾ ಸಹಾಯದ ಭರವಸೆ ನೀಡಿದರು. ಒಂದು ವೇಳೆ ಇಂಫಾಲ್ಗೆ ಹೋದರೆ ಅವರದೇ ಸಮುದಾಯದಿಂದ ಬರಬಹುದಾದ ಪ್ರತಿಕ್ರಿಯೆ ಯ ಬಗ್ಗೆಯೂ ಅವರು ಚಿಂತಿತರಾಗಬಹುದು” ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು hindustantimes.comಗೆ ಹೇಳಿದರು.
ಕುಟುಂಬಕ್ಕೆ ಸಹಾಯ ಮಾಡುತ್ತಿರುವ ಕಾಂಗ್ಪೋಕ್ಪಿ ಘಟಕದ ಕುಕಿ ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಶೋಂಗ್ರೆಂಗ್, “ಕುಕಿ ಜನರಿಗೆ ಇಂಫಾಲ್ಗೆ ಸುರಕ್ಷಿತವಲ್ಲ. ಕಳೆದ ಎರಡು ವರ್ಷಗಳಲ್ಲಿ ಅಲ್ಲಿನ ನಮ್ಮ ಜನರಿಗೆ ಏನಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸಂಘಟನೆಯು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದರೂ, ಅವರು ತಮ್ಮ ಪ್ರೀತಿಪಾತ್ರರ ಮೃತದೇಹವನ್ನು ಮನೆಗೆ ಹೇಗೆ ತರುತ್ತಾರೆ ಎಂಬುದು ಕುಟುಂಬಕ್ಕೆ ಬಿಟ್ಟದ್ದು” ಎಂದು ಹೇಳಿದರು.
ಸಿಂಗ್ಸನ್ ಅವರ ಮೃತದೇಹವನ್ನು ನಾಗಾಲ್ಯಾಂಡ್ ನ ದಿಮಾಪುರ ವಿಮಾನ ನಿಲ್ದಾಣಕ್ಕೆ ತಂದು ನಂತರ ರಸ್ತೆ ಮೂಲಕ ಕಾಂಗ್ಪೋಕ್ಪಿಗೆ ತರುವುದು ಒಂದು ಆಯ್ಕೆಯಾಗಿದೆ. ಏಕೆಂದರೆ ಈ ದಾರಿ ಮಧ್ಯೆ ಯಾವುದೇ ಮೈತೈ ಪ್ರದೇಶಗಳಿಲ್ಲ. ಮಿಜೋರಾಂನ ಐಜ್ವಾಲ್ನಲ್ಲಿರುವ ವಿಮಾನ ನಿಲ್ದಾಣವನ್ನು ಮತ್ತೊಂದು ಬೆಟ್ಟದ ಜಿಲ್ಲೆಯಾದ ಚುರಾಚಂದ್ಪುರದ ಕುಕಿ ಜನರು ಬಳಸುತ್ತಾರೆ. ಆದರೆ ಅಲ್ಲಿಂದ ಕಾಂಗ್ಪೋಕ್ಪಿಗೆ ಪ್ರಯಾಣಿಸಲು ಇಂಫಾಲ್ ಮೂಲಕವೇ ಹಾದುಹೋಗಬೇಕಾಗುತ್ತದೆ.
ಇದೆಲ್ಲದರ ನಡುವೆಯೂ ಏನು ಆಗದಿರಬಹುದು ಎಂಬ ಭರವಸೆಯ ಕಿರಣವಿದೆ. ಮಾನವೀಯ ಮುನ್ನೋಟವಿದೆ ಎನ್ನುತ್ತಾರೆ ಅಧಿಕಾರಿಗಳು.
ಈ ಮಧ್ಯೆ ಇಂಫಾಲ್ ನ ಅತ್ಯಂತ ಪ್ರಭಾವಶಾಲಿ ಮೈತೈ ಗುಂಪುಗಳಲ್ಲಿ ಒಂದಾದ COCOMI ಸೋಮವಾರ ಸಮಾಜದ ಎಲ್ಲಾ ವರ್ಗಗಳು ಒಗ್ಗಟ್ಟಾಗಿರಬೇಕು. ಮಣಿಪುರಕ್ಕೆ ಮೃತದೇಹಗಳು ಗೌರವಯುತ ಮರಳಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮೈತೈ ಗುಂಪುಗಳೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಸಿಂಗ್ಸನ್ ಅವರ ಮೃತದೇಹವನ್ನು ಇಂಫಾಲ್ ನಿಂದ ಕಾಂಗ್ಪೋಕ್ಪಿಗೆ ಸಾಗಿಸಲು ಅವಕಾಶ ನೀಡುವುದು ಶಾಂತಿಯ ಸಂದೇಶ ಎಂದು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಅನೇಕ ಗುಂಪುಗಳು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್ಸನ್ ಅವರ ಕುಟುಂಬವು ಅಹಮದಾಬಾದ್ನಲ್ಲಿ ಅಧಿಕಾರಿಗಳು ಮೃತದೇಹವನ್ನು ಕಳುಹಿಸಲು ಸಿದ್ಧರಾದಾಗ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದೆ.
“ಸಿಂಗ್ಸನ್ ಅವರು ಬಹಳ ಹಿಂದೆಯೇ ತನ್ನ ತಂದೆಯನ್ನು ಕಳೆದುಕೊಂಡು ಇಂಫಾಲ್ನಲ್ಲಿ ತಾಯಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಜನಾಂಗೀಯ ಸಂಘರ್ಷ ತಾರಕಕ್ಕೇರಿದಾಗ ಅವರು ಇಂಫಾಲ್ನಲ್ಲಿರುವ ತಮ್ಮ ಮನೆಯನ್ನು ತೊರೆಯಬೇಕಾಯಿತು. ನಂತರ ಅವರ ಮನೆಯನ್ನು ಲೂಟಿ ಮಾಡಲಾಯಿತು. ಆಕೆಯ ತಾಯಿ ಈಗ ಕಾಂಗ್ಪೋಕ್ಪಿಯಲ್ಲಿ ನಮ್ಮೊಂದಿಗೆ ಇದ್ದಾರೆ. ನಾವು ಅಹಮದಾಬಾದ್ನ ಅಧಿಕಾರಿಗಳಿಂದ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ. ಅಹಮದಾಬಾದ್ನಿಂದ ನಮಗೆ ಸುದ್ದಿ ಬಂದ ನಂತರ ನಾವು ಹೇಳಿಕೆ ನೀಡುತ್ತೇವೆ” ಎಂದು ಸಿಂಗ್ಸನ್ ಅವರ ಚಿಕ್ಕಪ್ಪ ಹಹಾವೊ ಹೈಪಿ ಹೇಳಿದರು.