ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಆತ್ಮಹತ್ಯೆ; ಹಾಸ್ಟೆಲ್ ಕೋಠಡಿಯಲ್ಲಿ ನೇಣಿಗೆ ಶರಣು

ಬೆಳಗಾವಿ: ವಸತಿ ನಿಲಯದಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ರಾಮನಗರದಲ್ಲಿರುವ ಚಂದ್ರಕಾಂತ ಕಾಗವಾಡ ಬಾಯ್ಸ್ ಹಾಸ್ಟೇಲ್ ನಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಪ್ರಜ್ವಲ್ ಕುಪ್ಪಾನಟ್ಟಿ (20) ಎಂದು ಗುರುತಿಸಲಾಗಿದೆ.
ಪ್ರಜ್ವಲ್ ನಿನ್ನೆ ಕಾಲೇಜಿಗೆ ಹೋಗದೆ ತನ್ನ ರೂಮಿನಲ್ಲಿಯೇ ಇದ್ದ. ಸಂಜೆ ಸ್ನೇಹಿತ ಬಂದು ರೂಮಿನ ಬಾಗಿಲು ಬಡಿದಾಗ ಪ್ರಜ್ವಲ್ ಬಾಗಿಲು ತೆಗೆಯಲಿಲ್ಲ. ಈ ವೇಳೆ ಕಿಟಕಿಯಿಂದ ನೋಡಿದಾಗ ಪ್ರಜ್ವಲ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪ್ರಜ್ವಲ್ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರಾಯಭಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ನಿವಾಸಿಯಾಗಿರುವ ಪ್ರಜ್ವಲ್ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ.
ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.