ಅವಳಿ ರಾಜ್ಯಗಳಲ್ಲಿ ಬಹುಮಾನವಿದ್ದ ನಕ್ಸಲ್ ನಾಯಕನಿಗೆ ಅಂತ್ಯ – ಎಕೆ-47 ಸಹಿತ ಶಸ್ತ್ರಾಸ್ತ್ರ ವಶಕ್ಕೆ

ಛತ್ತೀಸ್ಗಢ: ತಲೆಗೆ 45 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಹತನಾಗಿರುವ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಶುಕ್ರವಾರ ನಡೆದಿರುವುದಾಗಿ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಯ ದಾಳಿಗೆ ಹತನಾದ ನಕ್ಸಲ್ ನಾಯಕನನ್ನು ಭಾಸ್ಕರ್ ಎನ್ನಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಕೆಲವು ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮತ್ತು ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಹಾಗೂ ಸಿಆರ್ಪಿಎಫ್ನ ವಿಶೇಷ ಘಟಕ ಕೋಬ್ರಾ ಸಿಬ್ಬಂದಿ ಕಳೆದ ಬುಧವಾರದಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದು ಇದರ ಭಾಗವಾಗಿ ಶುಕ್ರವಾರ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ನಕ್ಸಲ್ ನಾಯಕ ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ನಕ್ಸಲ್ ನಾಯಕ ಭಾಸ್ಕರ್ ಹತನಾಗಿದ್ದಾನೆ ಎಂದು ಬಸ್ತಾರ್ ರೇಂಜ್ನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ನಕ್ಸಲ್ ನಾಯಕನ ಮೃತದೇಹ, ಒಂದು ಎಕೆ -47 ರೈಫಲ್ ಮತ್ತು ಇತರ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ಗುರುತಿನ ಪ್ರಕಾರ, ಮೃತದೇಹವು ತೆಲಂಗಾಣ ರಾಜ್ಯ ಸಮಿತಿ (ಟಿಎಸ್ಸಿ)ಯ ವಿಶೇಷ ವಲಯ ಸಮಿತಿ (ಎಸ್ಜೆಡ್ಸಿ) ಸದಸ್ಯ ಭಾಸ್ಕರ್ ಅಲಿಯಾಸ್ ಮೈಲಾರಪು ಅಡೆಲ್ಲು ಅವರದ್ದಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಭಾಸ್ಕರ್, ಮಾವೋವಾದಿಗಳ ಟಿಎಸ್ಸಿಯ ಮಂಚೇರಿಯಲ್-ಕೊಮರಂಭೀಮ್ (ಎಂಕೆಬಿ) ವಿಭಾಗದ ಕಾರ್ಯದರ್ಶಿಯಾಗಿದ್ದ.ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಛತ್ತೀಸ್ಗಢದಲ್ಲಿ 25 ಲಕ್ಷ ರೂ. ಮತ್ತು ತೆಲಂಗಾಣದಲ್ಲಿ 20 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು ಆದರೆ ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ.