ಜಾರ್ಖಂಡ್ನಲ್ಲಿ ಆನೆ ಕಳ್ಳತನ: “ಜೋಯ್ಮೋತಿ” ಪತ್ತೆ, ಮಾಲೀಕತ್ವ ವಿವಾದ ಭುಗಿಲು

ಮೇದಿನಿನಗರ್: ಹಲವು ಬಗೆಯ ಕಳ್ಳರಿರುತ್ತಾರೆ. ಕೆಲವರು ಚಿನ್ನ-ಬೆಳ್ಳಿ ಕದ್ದರೆ, ಮತ್ತೆ ಕೆಲವರು ಹಣ ಕದಿತಾರೆ. ಅಷ್ಟೇ ಏಕೆ ಹೃದಯ ಕದಿಯೋ ಹದಿಹರೆಯದ ಕಳ್ಳ/ಕಳ್ಳಿಯರೂ ಇರುತ್ತಾರೆ. ಆದರೆ ಆನೆಯನ್ನೇ ಕದಿಯೋ ಕಳ್ಳನ ಬಗ್ಗೆ ನೀವು ಕೇಳಿದ್ದೀರಾ? ಹೌದು, ಜಾರ್ಖಂಡ್ನಲ್ಲಿ ನಡೆದ ಹೆಣ್ಣಾನೆ ಕಳ್ಳತನ ಪ್ರಕರಣವೊಂದು, ಇದೀಗ ಆನೆ ಕಳ್ಳತನದ ಬಹುದೊಡ್ಡ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚುವಂತೆ ಮಾಡಿದೆ.

ಜಿಲ್ಲೆಯ ಚುಕುರ್ ಪ್ರದೇಶದಲ್ಲಿ ತಾವು ಖರೀದಿಸಿದ್ದ ಹೆಣ್ಣಾನೆ ಕಳ್ಳತನವಾಗಿದೆ ಎಂದು ಕಳೆದ ಆ.12ರಂದು ಪೊಲೀಸರಿಗೆ ದೂರು ನೀಡಿದ್ದರು. ನರೇಂದ್ರ ಶುಕ್ಲಾ 40 ಲಕ್ಷ ರೂ. ಕೊಟ್ಟು ಖರೀದಿಸಿದ್ದ ಈ ಹೆಣ್ಣಾನೆಗೆ “ಜೋಯ್ಮೋತಿ” ಎಂದು ಹೆಸರಿಟ್ಟಿದ್ದರು.
ಜಾರ್ಖಂಡ್ನಿಂದ ಉತ್ತರ ಪ್ರದೇಶಕ್ಕೆ ಈ ಹೆಣ್ಣಾನೆಯನ್ನು ಸಾಗಿಸುವ ವೇಳೆ, “ಆನೆ ಮಾಫಿಯಾ” ಜೋಯ್ಮೋತಿಯನ್ನು ಕದ್ದಿರುವುದಾಗಿ ನರೇಂದ್ರ ಶುಕ್ಲಾ ಜಾರ್ಖಂಡ್ ಪೊಲೀಸರಿಗೆ ದೂರು ನೀಡಿದ್ದುರು. ದೂರು ಸ್ವೀಕರಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿ, ಕಳ್ಳತನವಾಗಿದ್ದ ಆನೆಯನ್ನು ಬಿಹಾರದ ಛಪ್ರಾದಲ್ಲಿ ಪತ್ತೆ ಹಚ್ಚಿದ್ದಾರೆ. ಇತ್ತಿಚಿಗೆ ಸುಭದ್ರಾ ಆನೆಯ ಮಾಲೀಕತ್ವ ವಿವಾದ ಕಾರಣಕ್ಕೆ ಕರ್ನಾಟಕದ ಎರಡು ಧಾರ್ಮಿಕ ಕ್ಷೇತ್ರಗಳು ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಜೋಯ್ಮೋತಿ ಪತ್ತೆಯಾದ ಬಳಿಕ ಇದೀಗ ಅದರ ಮಾಲೀಕತ್ವದ ವಿವಾದ ಭುಗಿಲೆದ್ದಿದೆ. ಏಕೆಂದರೆ ದೂರು ನೀಡುವ ಸಂದರ್ಭದಲ್ಲಿ ನರೇಂದ್ರ ಶುಕ್ಲಾ ಅವರು ತಾವೇ ಜೋಯ್ಮೋತಿಯ ಮಾಲೀಕ ಎಂದು ಹೇಳಿದ್ದರು. ಅದರೀಗ ಈ ಆನೆಯ ನಿಜವಾದ ಮಾಲೀಕ ಅಸ್ಸಾಂನಲ್ಲಿದ್ದಾರೆ ಎಂದು ಶುಕ್ಲಾ ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರಡುವ ಪಲಮು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್, “ಜೋಯ್ಮೋತಿ ಎಂಬ ಹೆಣ್ಣಾನೆಯ ಮಾಲೀಕತ್ವದ ಕುರಿತು ನರೇಂದ್ರ ಶುಕ್ಲಾ ನೀಡಿರುವ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಉತ್ತರ ಪ್ರದೇಶದ ಮಿರ್ಜಾಪುರಕ್ಕೆ ಕಾಲ್ನಡಿಗೆಯಲ್ಲೇ ಜೋಯ್ಮೋತಿಯನ್ನು ಕೊಂಡೊಯ್ದ ಔಚಿತ್ಯವನ್ನೂ ಪೊಲೀಸರು ಪ್ರಶ್ನಿಸಿದ್ದಾರೆ.
ನರೇಂದ್ರ ಶುಕ್ಲಾ ಪ್ರಕಾರ, ಜೋಯ್ಮೋತಿಯನ್ನು ಸಾಗಿಸಲು ಸಾರಿಗೆ ಪರವಾನಗಿ (ಟಿಪಿ) ಪಡೆದು ಆ.4ರಂದು ರಾಂಚಿಯಿಂದ ಕಾಲ್ನಡಿಗೆಯಲ್ಲಿ ಹೊರಟರು. ಆ.11ರಂದು ಪಲಮು ತಲುಪಿದಾಗ ಹೆಣ್ಣಾನೆಯನ್ನು ಮಾವುತರಿಗೆ ಒಪ್ಪಿಸಿ ಅವರು ಬಸ್ನಲ್ಲಿ ಮಿರ್ಜಾಪುರಕ್ಕೆ ಪ್ರಯಾಣಿಸಿದರು. ಆದರೆ ನಗದಿತ ಸಮಯಕ್ಕೆ ಮಾವುತರು ಜೋಯ್ಮೋತಿಯನ್ನು ಕರೆದುಕೊಂಡು ಮಿರ್ಜಾಪುರಕ್ಕೆ ಬರಲಿಲ್ಲ.
ಇದರಿಂದ ಅನುಮಾನಗೊಂಡು ನರೇಂದ್ರ ಶುಕ್ಲಾ ಅವರು ಮರಳಿ ಪಲಮುಗೆ ಬಂದಾಗ ಮಾವುತರು ಮತ್ತು ಹೆಣ್ಣಾನೆ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದರು. ತನಿಖೆಯನ್ನು ಆರಂಭಿಸಿದ ಪೊಲೀಸರು ಬಿಹಾರದ ಛಪ್ರಾ ಸಮೀರದ ಪಹರ್ಪುರ್ದಲ್ಲಿ ಜೋಯ್ಮೋತಿಯನ್ನು ಪತ್ತೆಹಚ್ಚಿದ್ದಾರೆ.
ಸದ್ಯ ಜೋಯ್ಮತಿಯ ಕಾನೂನುಬದ್ಧ ಮಾಲೀಕತ್ವ ಮತ್ತು ಸಾಗಣೆಗೆ ಅನುಮತಿಯನ್ನು ದೃಢೀಕರಿಸಲು, ಜಾರ್ಖಂಡ್ ಪೊಲೀಸರು ಅಸ್ಸಾಂ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ನ ಮುಖ್ಯ ವನ್ಯಜೀವಿ ವಾರ್ಡನ್ಗಳಿಂದ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.