ಕುಂದಾಪುರದಲ್ಲಿ ಕಾಡಾನೆ ದಾಳಿ ಭೀತಿ: ಶಾಲೆಗಳಿಗೆ ಸತತ ಮೂರು ದಿನ ರಜೆ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾರಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 4ರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಜೂನ್5ರಂದು ರಜೆ ಮುಂದುವರೆದಿದೆ.
ಅಲ್ಲದೇ ರಜೆ ವಿಸ್ತರಣೆಯಾಗುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಒಂಟಿ ಸಲಗ; ಶಾಲೆಗಳಿಗೆ ರಜೆ:
ಹೌದು, ಕುಂದಾರಪುರದ ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಕಂಡುಬಂದಿದ್ದು, ಸದ್ಯ ಇಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಲು ಕಾರ್ಯಾಚರಣೆ ಆರಂಭವಾಗಿದೆ. ಹೀಗಾಗಿ ಈ ಭಾಗದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪೌಢಶಾಲೆಗಳವರೆಗೆ ಈಗಾಗಲೇ ಜೂನ್ 4 ಮತ್ತು 5ರಂದು ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ಜೂನ್ 6ರಂದು ಸಹ ಏನಾದರೂ ಕಾಡಾನೆ ಸಿಗದಿದ್ದರೆ ಈ ರಜೆ ಮುಂದುವರೆಯಲಿದೆ ಎಂದು ಡಿಡಿಪಿಐ ಅಶೋಕ್ ಟೈಮ್ಸ್ ನೌಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಈಗಾಗಲೇ ಬುಧವಾರ ನಡೆಯಬೇಕಾಗಿದ್ದು ವಾರದ ಸಿದ್ದಾಪುರ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿತ್ತು.
ಕಾಡಾನೆ ಸೆರಗೆ ಅಧಿಕಾರಿಗಳ ಪ್ರಯತ್ನ:
ಆಗುಂಬೆಯಿಂದ 30 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಸತತ 2 ದಿನಗಳಿಂದ ಆನೆ ಸಂಚರಿಸುತ್ತಿದೆ. ಈಗಾಗಲೇ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಇನ್ನು ಆನೆ ತಡೆ ಪಡೆ, ಅರಣ್ಯ ಇಲಾಖೆ, ವನ್ಯಜೀವಿ ವಲಯ ಅಧಿಕಾರಿ, ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾಡಾನೆ ಸಂಚಾರದ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಕುಂದಾಪುರ ತಾಲೂಕು ಆಡಳಿತವೂ ಕಾಡಾನೆ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕು ಎಂದು ಸೂಚನೆ ನೀಡಿದೆ. ಮನೆಯಿಂದ ಹೊರಬರುವ ಮುನ್ನ ಎಷ್ಷರವಹಿಸುವಂತೆ ತಿಳಿಸಿದೆ. ಸದ್ಯದ ಮಾಹಿತಿ ಪ್ರಕಾರ ಹಾಸನ ಕಾಡಿನ ಸುಮಾರು 12 ವರ್ಷ ಪ್ರಾಯದ ಗಂಡು ಆನೆಯು ಕಾರಿಡಾರ್ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ದಾರಿ ತಪ್ಪಿ, ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎನ್ನಲಾಗಿದೆ.