ದ್ರಾಕ್ಷಿ ತೋಟದಲ್ಲಿ ಮೊಟ್ಟೆ ಪೂಜೆ! ಮಾಟ ಮಂತ್ರದಿಂದ ರೈತ ಕಂಗಾಲು

ಚಿಕ್ಕಬಳ್ಳಾಪುರ: ಕಟಾವಿಗೆ ಬಂದ ದ್ರಾಕ್ಷಿ ತೋಟಕ್ಕೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಘಟನೆ ಚಿಕ್ಕಬಳ್ಳಾಪುರದ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯದಿಂದ ರೈತ ಭಯಗೊಂಡಿದ್ದಾರೆ.
ಗ್ರಾಮದ ಯುವ ರೈತ ಪ್ರಭಾಕರ್ ಎರಡೂವರೆ ಎಕರೆ ಜಮೀನಿನಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದಾರೆ.
ದ್ರಾಕ್ಷಿ ಫಸಲು ಬಂದಿದ್ದು, ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ತೋಟದಲ್ಲಿ ಕ್ಷುದ್ರ ಪೂಜೆ ಮಾಡಿ ಮೊಟ್ಟೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ಕಂಗಾಲಾದ ರೈತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಟ ಮಂತ್ರದಿಂದಾಗಿ ದ್ರಾಕ್ಷಿ ಗಿಡಗಳು ಒಣಗುತ್ತಿದೆ, ಕಟಾವು ಮಾಡಲು ಕೂಡಾ ಯಾರೂ ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಿಡಿಗೇಡಿಗಳು ರೈತನನ್ನು ಹೆದರಿಸಲು ಮತ್ತು ವರ್ತಕರು ದ್ರಾಕ್ಷಿ ಕಟಾವಿಗೆ ಬಾರದಿರಲಿ ಎಂದು ಮಾಟ ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ರೈತ ನಂದಿ ಗಿರಿಧಾಮ ಪೋಲಿಸ್ ಠಾಣೆಗೆ ದೂರು ನೀಡಿದ್ದು, ದುಷ್ಕರ್ಮಿಗಳ ಪತ್ತೆ ಇಳಿದಿದ್ದಾರೆ.