ಕೇವಲ ₹3 ಸಾವಿರಕ್ಕೆ ಪರಿಸರ ಸ್ನೇಹಿ ಫ್ರಿಡ್ಜ್: ಯುವ ವಿಜ್ಞಾನಿಯ ಹೊಸ ಆವಿಷ್ಕಾರ

ಧಾರವಾಡ: ಆಹಾರ ಮತ್ತು ತರಕಾರಿ ಕೆಡದಂತೆ ಇಡಲು ಎಲ್ಲರ ಮನೆಯಲ್ಲೂ ಬಳಕೆಯಾಗುವ ರೆಫ್ರಿಜರೇಟರ್ಗಳು ವಿಭಿನ್ನ ಸ್ವರೂಪ ಪಡೆದುಕೊಂಡಾಗಿದೆ. ಆದರೆ ಎಷ್ಟೇ ದೊಡ್ಡ ಕಂಪನಿ ಸಿದ್ಧಪಡಿಸಿದ ಸುಧಾರಿತ ತಂತ್ರಜ್ಞಾನದ ಫ್ರಿಡ್ಜ್ಗಳು ದೊಡ್ಡ ಬೆಲೆ ಮತ್ತು ವಿದ್ಯುತ್ ಆಧರಿಸಿಯೇ ನಡೆಯುತ್ತವೆ.

ಆದರೆ ಇಲ್ಲೊಬ್ಬ ಯುವ ವಿಜ್ಞಾನಿ ಕೇವಲ ಮೂರು ಸಾವಿರ ರೂ.ಗಳಲ್ಲಿ ಸಣ್ಣ ಗಾತ್ರದ ಪರಿಸರಸ್ನೇಹಿ ಫ್ರಿಡ್ಜ್ ಶೋಧಿಸಿದ್ದಾನೆ. ಹೌದು, ಪರಿಸರ ಸ್ನೇಹಿ ಉತ್ಪನ್ನಗಳ ಉತ್ಪಾದನೆ ಮುಂದಿನ ಪೀಳಿಗೆಗೆ ಅತ್ಯಂತ ಅನಿವಾರ್ಯ ಎಂಬುದು ಈಗ ಎಲ್ಲರಿಗೂ ಮನದಟ್ಟಾಗುತ್ತಿದೆ. ಹೀಗಾಗಿ ಇಕೋ ಫ್ರಿಡ್ಜ್ ಎಂಬ ನೈಸರ್ಗಿಕ ಶಿಥಲ ಘಟಕವೊಂದನ್ನು ಅತ್ಯಂತ ಸರಳ ಮತ್ತು ಸುವಿಧಾನದಲ್ಲಿ ನಿರ್ಮಿಸಿದ್ದು, ಭವಿಷ್ಯದ ಪೀಳಿಗೆಗೆ ಇದು ಪರಿಸರ ಉಳಿಸುವ ನಿಟ್ಟಿನಲ್ಲಿ ಖಂಡಿತವಾಗಿಯೂ ಸಹಾಯಕ್ಕೆ ಬರಲಿದೆ.
ಓಝೋನ್ ಪದರದಲ್ಲಿ ರಂಧ್ರ ಕಾಣಿಸಿಕೊಳ್ಳುವ ಮೂಲಕ ವಿಶ್ವದ ಹವಾಮಾನ ವೈಪರೀತ್ಯ ಮತ್ತು ಅತೀ ಶಾಖ ಉಂಟಾಗುತ್ತಿರುವುದರಲ್ಲಿ ಮನೆ ಬಳಕೆಯ ಫ್ರಿಡ್ಜ್ಗಳು ಹೊರ ಸೂಸುವ ಹಾನಿಕಾರ ಗಾಳಿಯೇ ಕಾರಣವಾಗಿದೆ. ಜಾಗತಿಕ ತಾಪಮಾನ ತಡೆಗೆ ಸೂಕ್ಷ್ಮ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆ ಆಗಬೇಕೆಂಬ ಬಯಕೆ ಇಟ್ಟುಕೊಂಡ ಯುವ ಕೃಷಿ ವಿಜ್ಞಾನಿ ವಿಜಯನಗರ ಜಿಲ್ಲೆ ಹರಪನಹಳ್ಳಿಯ ವಿನಯ್ಕುಮಾರ್ ಪಾಟೀಲ್ ಈ ದೇಶಿ ಫ್ರಿಡ್ಜ್ ಶೋಧಿಸಿದ್ದಾರೆ.
ಏನಿದು ದೇಶಿ ಫ್ರಿಡ್ಜ್?: ಇದು ಕೂಡ ಸಾಮಾನ್ಯ ಫ್ರಿಡ್ಜ್ನಂತೆಯೇ ಇರಲಿದ್ದು, ತರಕಾರಿ ತುಂಬಿ ಸಾಗಿಸುವ ಪ್ಲಾಸ್ಟಿಕ್ ಟ್ರೇಗಳ ಗಾತ್ರದಲ್ಲಿದೆ. ಇದಕ್ಕೆ ಯಾವುದೇ ರೀತಿಯ ವಿದ್ಯುತ್ ಅಗತ್ಯವಿಲ್ಲ. ಹೊರಮೈಯಲ್ಲಿ ನೋಡಲು ತರಕಾರಿ ಟ್ರೇಗಳಂತೆ ಇದ್ದು, ಇದರ ಒಳಮೈಗೆ ಬಟ್ಟೆ ಸ್ವರೂಪದಲ್ಲಿಯೇ ಇರುವ ಗಟ್ಟಿಯಾದ ತಗಡಿನ ಆಕಾರ ನೀಡಲಾಗಿದೆ. ಇಲ್ಲಿಯೇ ಕಿರಿದಾಗಿ ನೀರಿನ ಸೂಕ್ಷ್ಮ ಸಂಗ್ರಹಗಾರವಿದ್ದು, ಇಲ್ಲಿ ಪ್ರತಿದಿನ ಒಂದು ಲೀಟರ್ ನೀರು ಹಾಕಿದರೆ ಸಾಕು.
ಗಡಿಗೆಯಲ್ಲಿ ನೀರು ತಣ್ಣಿಗೆ ಇರುವಂತೆಯೇ ಇದು ತಣ್ಣಗೆ ಇರುತ್ತದೆ. ಇದು ಇಡೀ ದೇಶಿ ಫ್ರಿಡ್ಜ್ನ ಉಷ್ಣಾಂಶವನ್ನು ಶೇ.15ರಷ್ಟು ಶೀಥಿಲೀಕರಣ ಗೊಳಿಸುತ್ತದೆ. ಹೀಗಾಗಿ ಇದರಲ್ಲಿ ಇಡುವ ತರಕಾರಿಗಳು ಕೆಡುವುದಿಲ್ಲ. ಸದ್ಯಕ್ಕೆ 15 ಲೀಟರ್, 25 ಲೀಟರ್ನಷ್ಟು ಜಾಗದ ಟ್ರೇಗಳಲ್ಲಿ ಈ ದೇಶಿ ಫ್ರಿಡ್ಜ್ಗಳಿದ್ದು, ಇದನ್ನು 100 ಚದರಡಿವರೆಗೂ ವಿಸ್ತರಿಸಬಹುದಾಗಿದೆ.
ಏನು ಲಾಭಗಳು?: ಸಾಮಾನ್ಯ ಫ್ರಿಡ್ಜ್ಗಳಲ್ಲಿ ಇಟ್ಟು ಹೊರ ತೆಗೆದ ತರಕಾರಿ ಗುಣಮಟ್ಟ ಕುಸಿಯುತ್ತದೆ. ರುಚಿ ಕಳೆದುಕೊಳ್ಳುತ್ತವೆ, ಅನಾರೋಗ್ಯಕ್ಕೆ ಕಾರಣ ವಾಗುತ್ತದೆ. ಇಲ್ಲಿ ನೈಸರ್ಗಿಕವಾಗಿ ಸಂಗ್ರಹಿಸಿ ಇಡುವುದರಿಂದ ತರಕಾರಿ ಗುಣಮಟ್ಟ ಕಳೆದು ಕೊಳ್ಳುವುದಿಲ್ಲ. ಸಾಮಾನ್ಯ ಫ್ರಿಡ್ಜ್ಗಳಲ್ಲಿ ವಿದ್ಯುತ್ ಇಲ್ಲದೇ ಹೋದಾಗ ಒಳಗಿನ ಆಹಾರ ಪದಾರ್ಥಗಳು ಕೆಟ್ಟು ಹೋಗುತ್ತವೆ. ಇನ್ನು ಇದು ಪರಿಸರ ಸ್ನೇಹಿಯಾಗಿದ್ದು, ಇದಕ್ಕೆ ವಿದ್ಯುತ್ನ ಅಗತ್ಯವೇ ಇಲ್ಲ.
ವಿದೇಶಗಳಿಂದ ಬೇಡಿಕೆ: ಈ ದೇಶಿ ಫ್ರಿಡ್ಜ್ ಸಿದ್ಧಗೊಂಡು ಮೂರು ತಿಂಗಳಾಗಿಲ್ಲ, ಆಗಲೇ ರಾಜ್ಯದ ಇತರ ಜಿಲ್ಲೆಗಳು, ದೇಶದ ಹೊರರಾಜ್ಯಗಳು ಸೇರಿ ವಿದೇಶಗಳಿಂದಲೂ ಉತ್ತಮ ಬೇಡಿಕೆ ಬರುತ್ತಿದೆ. ದುಬೈ, ಓಮನ್ ಸೇರಿ ಅರಬ್ ದೇಶಗಳು, ಆಫ್ರಿಕನ್ ದೇಶಗಳು ಮತ್ತು ನೈಜàರಿಯಾದಿಂದ ಅತ್ಯಧಿಕ ಬೇಡಿಕೆ ಬಂದಿದೆ.
ಗಾಳಿಯನ್ನೇ ಶೀಥಲ ಆಗಿಸುವ ನೂತನ ತಂತ್ರ
ದೇಶಿ ಫ್ರಿಡ್ಜ್ನ ಕಾರ್ಯವೈಖರಿ ಯಶಸ್ವಿಯಾಗಿದ್ದು, ಇದರಿಂದ ಉತ್ಸಾಹಿತರಾಗಿರುವ ಅನಿಲ್ ಮತ್ತು ಗೆಳೆಯರು ಮುಂದಿನ ದಿನಗಳಲ್ಲಿ ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ದೊಡ್ಡ ದೊಡ್ಡ ಕಂಟೇನರ್ಗಳನ್ನೇ ಶೀಥಲಗೃಹವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಿದ್ದಾರೆ. ತರಕಾರಿ ತುಂಬಿಕೊಂಡು ಸಾಗುವ ಲಾರಿಗಳಿಗೆ ತಾಗುವ ಗಾಳಿಯನ್ನೇ ಅದರಲ್ಲಿನ ಕಂಟೇನರ್ಗಳಿಗೆ ಹರಿಸಿ, ಇಡೀ ಕಂಟೇನರ್ ಶೀಥಲಗೃಹದಂತಾಗುವಂತೆ ಮಾರ್ಪಾಡು ಮಾಡುವ ಸಿದ್ಧತೆಯಲ್ಲಿದ್ದಾರೆ. ಇದರಿಂದ ರೈತರು ತಮ್ಮ ಹೊಲಗಳಿಂದ ಕಿತ್ತ ತರಕಾರಿಯನ್ನು ಮುಂಬೈ, ದೆಹಲಿ, ಬೆಂಗಳೂರುವರೆಗೂ ಸಾಗಿಸಿದರೂ ಅವುಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲ.
ಇದು ದೇಶಿ ಜ್ಞಾನ ಪರಂಪರೆಯಲ್ಲಿನ ಹಳೆಯ ತಂತ್ರಜ್ಞಾನವೇ ಆಗಿದೆ. ಮಣ್ಣಿನ ಮಡಿಕೆಗೆ ಸುತ್ತಲು ತಣ್ಣೀರು ಬಟ್ಟೆ ಕಟ್ಟುವ ಪದ್ಧತಿ ಇತ್ತು. ಇದನ್ನೇ ಇಂದಿನ ಹೈಟೆಕ್ ಯುಗಕ್ಕೆ ತಕ್ಕಂತೆ ಸಿದ್ಧಗೊಳಿಸಿದ್ದೇನೆ. – ವಿನಯ್ಕುಮಾರ್ ಪಾಟೀಲ್, ಕೂಲ್ಫ್ರಿಡ್ಜ್ ಶೋಧಕ