ಎಸೆಸೆಲ್ಸಿ 3ನೇ ಪರೀಕ್ಷೆಗೆ ನೀರಸ ಪ್ರತಿಕ್ರಿಯೆ – ಶೇ. 50ರಷ್ಟು ವಿದ್ಯಾರ್ಥಿಗಳು ಗೈರು!

ಮಂಗಳೂರು: ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಪರೀಕ್ಷೆ ಹೊರೆಯಾಗಬಾರದು ಎಂಬ ಕಾರಣ ನೀಡಿ ಆರಂಭಿಸಲಾದ 3 ಹಂತದ ಪರೀಕ್ಷೆಯ ಪೈಕಿ 3 ನೇ ಪರೀಕ್ಷೆಗೆ ಅಭ್ಯರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೋಂದಣಿ ಮಾಡಿದ ಒಟ್ಟು ಅಭ್ಯರ್ಥಿಗಳ ಪೈಕಿ ಶೇ. 50 ರಷ್ಟು ಅಭ್ಯರ್ಥಿಗಳು ಮಾತ್ರ 3ನೇ ಪರೀಕ್ಷೆಗೆ ಹಾಜರಾಗಿದ್ದರು.
ಈ ಮೂಲಕ 3ನೇ ಪರೀಕ್ಷೆಯ ಅಗತ್ಯತೆ ಬಗ್ಗೆ ಪ್ರಶ್ನೆ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎಸೆಸೆಲ್ಸಿ 3ನೇ ಸಮಾಜ ಪರೀಕ್ಷೆಗೆ 1,211 ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. ಈ ಪೈಕಿ 538 ಮಂದಿ ಮಾತ್ರ ಪರೀಕ್ಷೆ ಬರೆದಿದ್ದಾರೆ. ತೃತೀಯ ಭಾಷಾ ಪರೀಕ್ಷೆಗೆ 1,112 ಅಭ್ಯರ್ಥಿಗಳು ನೋಂದಣಿ ಮಾಡಿದ್ದರೆ, 477 ಮಂದಿ ಗೈರಾಗಿದ್ದರು. ಗಣಿತಕ್ಕೆ 1,477 ಮಂದಿ ನೋಂದಣಿ ಮಾಡಿದ್ದರೂ, 597 ಮಂದಿ ಮಾತ್ರ ಹಾಜರಾಗಿದ್ದರು.
ದ.ಕ. ಡಿಡಿಪಿಐ ಗೋವಿಂದ ಮಡಿ ವಾಳ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಶುಲ್ಕ ಪಾವತಿ ಮಾಡಿ ಎಸೆಸೆಲ್ಸಿ ಮೊದಲ ಪರೀಕ್ಷೆಗೆ ಹಾಜರಾದ ಎಲ್ಲ ರೆಗ್ಯುಲರ್ ಅಭ್ಯರ್ಥಿಗಳಿಗೆ ದ್ವಿತೀಯ ಹಾಗೂ ಮೂರನೇ ಪರೀಕ್ಷೆ ಉಚಿತ. ಹಾಗಾಗಿ ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲರನ್ನೂ ನೋಂದಣಿ ಮಾಡುವಂತೆ ಶಿಕ್ಷಕರಿಗೆ ತಿಳಿಸಲಾಗಿತ್ತು. ಹಾಲ್ ಟಿಕೆಟ್ ಅನ್ನು ಕೆಲವು ಶಿಕ್ಷಕರು ಅಭ್ಯರ್ಥಿಯ ಮನೆಗೆ ಹೋಗಿ ನೀಡಿದ್ದರು. ಆದರೆ ಈ ಪೈಕಿ 3ನೇ ಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಅಂಕ ಅಧಿಕ ಬೇಕಾದವರು ಅವರಾಗಿಯೇ ಅರ್ಜಿ ಹಾಕಿ ಪರೀಕ್ಷೆ ಬರೆದಿದ್ದಾರೆ ಎಂದರು.
