ಚೆಂಡು ಹೂವಿನ ಬೆಲೆಗೆ ಕುಸಿತ: : ರೈತರ ಆತಂಕ!

ಮುಳಬಾಗಿಲು: ಮಾರುಕಟ್ಟೆಯಲ್ಲಿ ಚೆಂಡು ಹೂವುಗಳ ಬೆಲೆ ಸಂಪೂರ್ಣವಾಗಿ ಕುಸಿದ ಪರಿಣಾಮವಾಗಿ ಮಾರಾಟಕ್ಕೆ ತಂದಿದ್ದ ಹೂಗಳ ಮೂಟೆಗಳು ಮಾರುಕಟ್ಟೆಯಲ್ಲಿಯೇ ರಾಶಿ ರಾಶಿಯಾಗಿ ಬಿದ್ದಿವೆ. ಚೆಂಡು ಹೂವಿನ ಬೆಲೆ ಕೇಳಿ ಇನ್ನೂ ಕೆಲವರು ತೋಟಗಳಲ್ಲಿಯೇ ಹೂವುಗಳನ್ನು ಬಿಟ್ಟಿದ್ದಾರೆ.
ತಾಲ್ಲೂಕಿನಲ್ಲಿ ಬಹುತೇಕ ರೈತರು ತಮಿಳುನಾಡಿನ ಚೆನ್ನೈ ಹಾಗೂ ನಂಗಲಿಯ ಹೂವಿನ ಮಾರುಕಟ್ಟೆಗಳನ್ನು ನಂಬಿ ನೂರಾರು ಎಕರೆ ಭೂಮಿಯಲ್ಲಿ ಚೆಂಡು ಹೂವನ್ನು ಬೆಳೆದಿದ್ದಾರೆ. ಆದರೆ ಹೂಗಳು ಸಮೃದ್ಧವಾಗಿ ಬಿಟ್ಟಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಕೆಲವರು ಹೂಗಳು ತೋಟಗಳಲ್ಲಿ ಕೊಳೆಯುವುದು ನೋಡಲಾರದೆ ಮಾರುಕಟ್ಟೆಗೆ ಸಾಗಿಸಿದರೆ, ಮತ್ತೆ ಕೆಲವರು ಹೂಗಳನ್ನು ಕೀಳುವ ಕೂಲಿಯೂ ಸಿಗಿವುದಿಲ್ಲ ಎಂದು ತೋಟಗಳಲ್ಲಿಯೇ ಬಿಟ್ಟಿದ್ದಾರೆ.
ಸಾಮಾನ್ಯವಾಗಿ ಹಬ್ಬಗಳ ಸಂದರ್ಭಗಳಲ್ಲಿ ಚೆಂಡು ಹೂಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಮುಂದೆಯೂ ಬೆಲೆ ಸಿಗಬಹುದು ಎಂದು ನಂಬಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹೂಗಳನ್ನು ಬೆಳೆಸಿದ್ದಾರೆ. ಹಬ್ಬಗಳ ನಂತರ ನೆಲಕಚ್ಚಿದ ಬೆಲೆ ಇದುವರೆಗೂ ಮತ್ತೆ ಮೇಲೇಳಲೇ ಇಲ್ಲ. ಒಂದು ಕೆಜಿ ₹3, ₹4ಕ್ಕೆ ಮಾರಾಟವಾದರೆ, ಒಂದು ಮೂಟೆ ಹೂವಿನ ಬೆಲೆ ಕೇವಲ ₹50ರಿಂದ ₹100ರಷ್ಟು ಬಿದ್ದಂತಾಗುತ್ತದೆ. ಇದೂ ಸಾಲದೆಂಬಂತೆ ಮಾರುಕಟ್ಟೆಗೆ ಹೂಗಳು ಹೆಚ್ಚಾದರೆ ಮಾರಾಟವೇ ಆಗುವುದಿಲ್ಲ.
ಹೂಗಳನ್ನು ನಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ನಂಬಿದ್ದ ರೈತರು ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಹೂಗಳು ಬೆಳೆಯಲು ಒಂದು ಎಕರೆ ಪ್ರದೇಶದಲ್ಲಿ ಕೂಲಿ, ಗೊಬ್ಬರ, ಔಷಧ, ಡ್ರಿಪ್ ಮತ್ತಿತರ ಎಲ್ಲಾ ಖರ್ಚುಗಳೂ ಸೇರಿ ಸುಮಾರು ₹60ರಿಂದ ₹70 ಸಾವಿರ ಖರ್ಚಾಗುತ್ತದೆ. ನಂತರ ಹೂಗಳನ್ನು ಕೀಳಲು ಒಬ್ಬರಿಗೆ ಸುಮಾರು ₹350ರಿಂದ ₹400 ಕೂಲಿ ನೀಡಬೇಕಾಗುತ್ತದೆ. ಹೀಗಾಗಿ, ಹೂ ಬೆಳೆಗಾರರು ಯಾಕಾದರೂ ಹೂ ಬೆಳೆದವೋ ಎಂದು ಕೊರಗುತ್ತಿದ್ದಾರೆ. ಇನ್ನು ಹೂಗಳಿಗೆ ಬೆಲೆಯೇ ಇಲ್ಲದೆ ಇರುವ ಪರಿಣಾಮ ತಾಲ್ಲೂಕಿನಾಧ್ಯಂತ ಹೂಗಳು ತೋಟಗಳಲ್ಲಿ ಕೊಳೆತು ಒಣಗುತ್ತಿರುವುದು ಒಂದೆಡೆಯಾದರೆ, ರಸ್ತೆ ಬದಿಗಳಲ್ಲಿ, ಮಾರುಕಟ್ಟೆಗಳ ಮುಂಭಾಗ ರಾಶಿ ರಾಶಿಯಾಗಿ ಬಿದ್ದಿದ್ದು ರೈತರ ಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ. ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಉದ್ದಕ್ಕೂ ಸುಮಾರು ನೂರಾರು ಮೂಟೆಗಳ ಹೂವುಗಳ ರಾಶಿ ಕಾಣಿಸಿಕೊಂಡರೆ, ನಂಗಲಿ ಹೂ ಮಾರುಕಟ್ಟೆಯ ಮುಂಭಾಗ ಮೂಟೆಮೂಟೆ ಹೂವುಗಳು ಕೊಳೆತು ನಾರುತ್ತಿವೆ. ‘ಲಾಭದ ಕನಸು ಕಂಡ ಬೆಲೆದ ಬೆಳೆ ನಷ್ಟವನ್ನುಂಟು ಮಾಡಿದೆ. ಮುಂದೇನು ಎನ್ನುವುದೇ ತಿಳಿಯದಂತಾಗಿದೆ ಎಂದು ರೈತ ಕೀಲಾಗಾಣಿ ಮಂಜುನಾಥ ಸ್ವಾಮಿ ಅಳಲು ತೋಡಿಕೊಂಡರು.