ಸಬ್ಸ್ಕ್ರೈಬರ್ ಸಿಗಲಿಲ್ಲವೆಂದು ಕನಸಿನ ಸ್ಟುಡಿಯೋಗೆ ಬೆಂಕಿ

ಯಶಸ್ಸು ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ 27 ವರ್ಷದ ಯೂಟ್ಯೂಬರ್ ವಿಧಾಯಕ್ ಪ್ರಜಾಪತಿ, ತಮ್ಮ ಕನಸಿನ ಡಿಜಿಟಲ್ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳು ನಾಶವಾಗಿದ್ದು, ಯೂಟ್ಯೂಬರ್ ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದಾನೆ.

27 ವರ್ಷದ ಯುಟ್ಯೂಬರ್ ವಿಧಾಯಕ್ ಪ್ರಜಾಪತಿ ಎಂಬವರು ಮನೆಯೊಳಗಿದ್ದ ತಮ್ಮದೇ ಕನಸಿನ ಡಿಜಿಟಲ್ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕೆನ್ನಾಲಿಗೆಯಲ್ಲಿ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳು ನಾಶವಾಗಿವೆ.
ಜಾರ್ಖಂಡ್ನ ಗರ್ವಾ ಜಿಲ್ಲೆಯ ನಿವಾಸಿಯಾಗಿರುವ ವಿಧಾಯಕ್ ಪ್ರಜಾಪತಿ ತಾನೋರ್ವ ಯಶಸ್ವಿ ಯುಟ್ಯೂಬರ್ ಆಗಬೇಕೆಂಬ ಕನಸು ಕಂಡಿದ್ದರು. ಇದಕ್ಕಾಗಿ ಮನೆಯಲ್ಲಿಯೇ ಡಿಜಿಟಲ್ ಸ್ಟುಡಿಯೋ ನಿರ್ಮಿಸಿಕೊಂಡಿದ್ದರು. ಅತ್ಯಾಧುನಿಕ ಸ್ಟುಡಿಯೋ ನಿರ್ಮಿಸಲು ಪೂರ್ವಜರಿಂದ ಬಂದ ಆಸ್ತಿಯನ್ನು ಮಾರಾಟ ಮಾಡಿದ್ದರು. ಆಸ್ತಿ ಮಾರಾಟದ ಹಣದಿಂದ ಸ್ಟುಡಿಯೋ ನಿರ್ಮಿಸಿ, ಕಂಪ್ಯೂಟರ್ ಸೇರಿದಂತೆ ಬೇಕಾದ ಡಿಜಿಟಲ್ ಸಾಧನಗಳನ್ನ ಖರೀದಿಸಿದ್ದರು.

ಯುಟ್ಯೂಬ್ ಮೂಲಕ ಸಂಪಾದನೆ ಮಾಡುವ ವಿಧಾಯಕ್ ಕನಸು ನನಸಾಗಲಿಲ್ಲ. ಹಲವು ತಿಂಗಳು ನಿರಂತರವಾಗಿ ಕೆಲಸ ಮಾಡಿದರೂ ನಿರೀಕ್ಷಿತ ಆದಾಯ, ಲೈಕ್ಸ್, ಶೇರ್ ಮತ್ತು ಸಬ್ಸ್ಕ್ರೈಬರ್ ಗಳಿಸುವಲ್ಲಿ ವಿಧಾಯಕ್ಗೆ ಹಿನ್ನಡೆಯುಂಟಾಗಿತ್ತು. ಈ ವಿಫಲದಿಂದ ವಿಧಾವಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ಕಳೆದ ಒಂದು ವಾರದಿಂದ ವಿಧಾಯಕ್ ಪ್ರಜಾಪತಿ ಮನೆಯಲ್ಲಿ ಏಕಾಂಗಿಯಾಗಿದ್ದರು. ಹಾಗಾಗಿ ಮಾನಸಿಕ ಖಿನ್ನತೆ ಮತ್ತಷ್ಟು ಹೆಚ್ಚಳವಾಗಿತ್ತು. ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಡಿಜಿಟಲ್ ಸ್ಟುಡಿಯೋದಲ್ಲಿ ತಮ್ಮನ್ನು ಲಾಕ್ ಮಾಡಿಕೊಂಡಿದ್ದಾರೆ. ನಂತರ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ನಿವಾಸಿ ಪ್ರಕಾಶ್ ಕುಮಾರ್ ಅರುಣ್ ಹೇಳುತ್ತಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಕ್ಕದ ಕಟ್ಟಡದ ಮೂಲಕ ಒಳಹೋದ ಪೊಲೀಸರು, ಮೆನಯೊಳಗೆ ಸಿಲುಕಿದ್ದ ವಿಧಾಯಕ್ ಕುಟುಂಬಸ್ಥರನ್ನು ರಕ್ಷಣೆ ಮಾಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪ್ರಮಾಣದ ಗಾಯಗಳಾಗಿವೆ. ಸ್ಟುಡಿಯೋದಲ್ಲಿದ್ದ ದುಬಾರಿ ಬೆಲೆಯ ಕಂಪ್ಯೂಟರ್, ಮೈಕ್, ಸ್ಪೀಕರ್, ಲೈಟ್ಸ್ ಎಲ್ಲವೂ ಸುಟ್ಟು ಕರಕಲಾಗಿವೆ.
ವಿಧಾಯಕ್ ಕಷ್ಟಪಟ್ಟು ದುಡಿಯಬೇಕು ಎಂಬ ಕನಸು ಕಂಡಿದ್ದನು. ಅದಕ್ಕಾಗಿ ಕನಸಿನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದನು. ನಿರೀಕ್ಷಿತ ಗೆಲುವು ಸಿಗದ ಹಿನ್ನೆಲೆ ಈ ರೀತಿ ಮಾಡಿಕೊಂಡಿದ್ದಾನೆ. ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಖಿನ್ನತೆಯೇ ಈ ಘಟನೆಗೆ ಕಾರಣ ಎಂದು ಸಂಬಂಧಿಕರು ಹೇಳುತ್ತಾರೆ. ರಕ್ಷಣಾ ಸಮಯದಲ್ಲಿ ವಿಧಾಯಕ್ ಕಟ್ಟಡದಿಂದ ಜಿಗಿದು ಓಡಿ ಹೋಗಿದ್ದಾನೆ ಎಂದು ವರದಿಯಾಗಿದೆ