ಪದೇ ಪದೇ ದಾಳಿ ಮಾಡುವ ನಾಯಿಗಳಿಗೆ ‘ಜೀವಾವಧಿ ಶಿಕ್ಷೆ’: ಯು.ಪಿ. ಸರ್ಕಾರದ ವಿಶಿಷ್ಟ ಆದೇಶ

ಲಕ್ನೋ: ಯಾವುದೇ ಪ್ರಚೋದನೆಯಿಲ್ಲದೆ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಮನುಷ್ಯರಿಗೆ ಕಚ್ಚುವಂತಹ ಉತ್ತರ ಪ್ರದೇಶದ ಬೀದಿ ನಾಯಿಗಳಿಗೆ ಜೀವಾವಧಿ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಲಿದೆ. ಕೇಳಲು ವಿಚಿತ್ರವೆನಿಸಿದರೂ ಬೀದಿ ನಾಯಿಗಳ ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಆದೇಶವನ್ನು ಉತ್ತರ ಪ್ರದೇಶ ರಾಜ್ಯ ಸರಕಾರ ಹೊರಡಿಸಿದೆ

ಮೊದಲ ಬಾರಿ ಕಚ್ಚುವಂತಹ ನಾಯಿಯನ್ನು 10 ದಿನಗಳ ಕಾಲ ಆಶ್ರಯ ಕೇಂದ್ರದಲ್ಲಿ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆ, ಲಸಿಕೆಗಳನ್ನು ನೀಡಲಾಗುವುದಲ್ಲದೆ ಅವುಗಳ ವರ್ತನೆಯನ್ನು ಪರಿಶೀಲಿಸಲಾಗುತ್ತದೆ. 10 ದಿನ ಕಳೆಯುತ್ತಿದ್ದಂತೆಯೇ ಮೈಕ್ರೋ ಚಿಪ್ಗಳನ್ನು ಅಳವಡಿಸಿ ಸ್ವಸ್ಥಾನಕ್ಕೆ ಮರಳಿ ಬಿಡಲಾಗುತ್ತದೆ. ಈ ಮೈಕ್ರೋಚಿಪ್ಗ್ಳಲ್ಲಿ ನಾಯಿಗಳ ವಿವರದ ಜತೆಗೆ ಅವುಗಳ ಸಂಚಾರದ ಮಾಹಿತಿಯೂ ಲಭ್ಯವಾಗುತ್ತದೆ. ಆಶ್ರಯ ಕೇಂದ್ರದಿಂದ ಮರಳಿದ ಬಳಿಕ ತನ್ನ ತಪ್ಪನ್ನು ಪುನರಾವರ್ತಿಸುವ ನಾಯಿಯನ್ನು ಜೀವನ ಪರ್ಯಂತ ಆಶ್ರಯ ಕೇಂದ್ರದಲ್ಲಿ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲು ಹೊಡೆಯುವುದು ಸೇರಿ, ನಾಯಿಯನ್ನು ಯಾರಾದರೂ ಪ್ರಚೋದಿಸಿ ಕಚ್ಚಿಸಿಕೊಂಡಿದ್ದರೆ ನಾಯಿಗಳಿಗೆ ಶಿಕ್ಷಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾಯಿ ಪ್ರಚೋದನೆಯಿಲ್ಲದೆ ದಾಳಿ ನಡೆಸಿದೆಯೇ ಎಂದು ನಿರ್ಧರಿಸಲು ಪಶುವೈದ್ಯ, ಪ್ರಾಣಿ ವರ್ತನೆ ಅರ್ಥೈಸಿಕೊಳ್ಳಬಲ್ಲ ತಜ್ಞ ಮತ್ತು ಪಾಲಿಕೆ ನೌಕರರನ್ನುಳ್ಳ 3 ಸದಸ್ಯರ ಸಮಿತಿ ರಚಿಸಲಾಗುತ್ತದೆ.
ಒಂದಕ್ಕಿಂತ ಹೆಚ್ಚು ಬಾರಿ ಕಚ್ಚಿ ಜೀವಾವಧಿ ಶಿಕ್ಷೆಗೆ ತುತ್ತಾದ ನಾಯಿಗಳ ಬಿಡುಗಡೆಗೂ ಶ್ವಾನ ಪ್ರಿಯರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಶ್ರಯ ಕೇಂದ್ರದಲ್ಲಿರುವ ಬೀದಿ ನಾಯಿಗಳನ್ನು ಮನೆಯಿಂದ ಹೊರಕ್ಕೆ ಬಿಡುವುದಿಲ್ಲ ಎಂಬ ಮುಚ್ಚಳಿಕೆಯೊಂದಿಗೆ ದತ್ತು ಪಡೆಯಲು ಅವಕಾಶ ನೀಡಲಾಗಿದೆ. ಮುಚ್ಚಳಿಕೆ ಮೀರಿ ನಾಯಿಯನ್ನು ಹೊರಬಿಟ್ಟರೆ, ನಾಯಿಯ ಜತೆಗೆ ದತ್ತು ಪಡೆದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಈ ಕುರಿತ ಆದೇಶದ ಪ್ರತಿಯನ್ನು ಸೆ. 10ರಂದೇ ಕಳುಹಿಸಿಕೊಡಲಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎಲ್ಲ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್ನ ಮೊದಲ ಆದೇಶ ಹೊರಬಿದ್ದ ಕೆಲವು ವಾರಗಳಲ್ಲೇ ಉತ್ತರಪ್ರದೇಶ ಸರಕಾರ ಈ ಆದೇಶ ಹೊರಡಿಸಿದೆ. ಸದ್ಯ ಆಕ್ರಮಣಕಾರಿ, ರೇಬಿಸ್ಪೀಡಿತ ನಾಯಿಗಳನ್ನಷ್ಟೇ ಆಶ್ರಯ ಕೇಂದ್ರದಲ್ಲಿರಿಸಲು ಸುಪ್ರೀಂ ಸೂಚಿಸಿದೆ.