ಕೊಲೆಯನ್ನು ಒಪ್ಪಿಕೊಂಡ ಡಾಕ್ಟರ್: ‘ವಿಚ್ಛೇದನ ನೀಡಿದರೆ ಆಸ್ತಿಯಲ್ಲಿ ಪಾಲು ಸಿಗಲ್ಲ ಎಂಬ ಭಯದಿಂದ ಕೃತಿಕಾಳನ್ನು ಪೂರ್ವನಿಯೋಜಿತವಾಗಿ ಹತ್ಯೆ ಮಾಡಿದೆ’

ಬೆಂಗಳೂರು : ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿದ್ದ ಮಾರತಹಳ್ಳಿ ವೈದ್ಯೆ ಡಾ. ಕೃತಿಕಾ ಎಂ. ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗೆ 3 ಪ್ರಮುಖ ಕಾರಣಗಳಿದ್ದವು ಎಂದು ಮಹೇಂದ್ರ ಒಪ್ಪಿಕೊಂಡಿದ್ದು, ಆಸ್ತಿ, ಅನೈತಿಕ ಸಂಬಂಧ ಮತ್ತು ಕೃತಿಕಾಳ ಆರೋಗ್ಯ ಸಮಸ್ಯೆಗಳೇ ಕೊಲೆಗೆ ಪ್ರೇರಣೆಯಾಗಿವೆ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆಯ ವೇಳೆ, ಡಾ. ಮಹೇಂದ್ರ ರೆಡ್ಡಿ ಕೊಲೆಯನ್ನು ಪೂರ್ವನಿಯೋಜಿತವಾಗಿ (ಪ್ರೀ-ಪ್ಲಾನ್) ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆಸ್ತಿ ವಿವಾದವೇ ಕೊಲೆಗೆ ಮುಖ್ಯ ಕಾರಣ ಎಂದು ಆತ ಹೇಳಿದ್ದಾನೆ. ಕೃತಿಕಾಗೆ ವಿಚ್ಛೇದನ (ಡಿವೋರ್ಸ್) ನೀಡಿದರೆ, ಆಸ್ತಿಯಲ್ಲಿ ನನಗೆ ಪಾಲು ಸಿಗುತ್ತಿರಲಿಲ್ಲ. ಹಾಗಾಗಿ ನಾನು ಡಿವೋರ್ಸ್ ನೀಡಲಿಲ್ಲ. ವಿಚ್ಛೇದನ ನೀಡಿದರೆ ಸಮಾಜದಲ್ಲಿ ಮರ್ಯಾದೆ ಕೂಡ ಹೋಗುತ್ತದೆ ಎಂಬ ಭಯವೂ ಇತ್ತು’ ಎಂದು ಮಹೇಂದ್ರ ಪೊಲೀಸರಿಗೆ ತಿಳಿಸಿದ್ದಾನೆ.
ಆಕೆಗೆ ಚಿಕಿತ್ಸೆ ನೀಡುವುದೇ ಹಿಂಸೆಯಾಗ್ತಿತ್ತು:
ಮಹೇಂದ್ರನ ಹೇಳಿಕೆಯ ಪ್ರಕಾರ, ಕೃತಿಕಾಳ ಅನಾರೋಗ್ಯದ ಕಾರಣದಿಂದಲೂ ಆತ ಹಿಂಸೆ ಅನುಭವಿಸುತ್ತಿದ್ದ. ‘ಡಾ. ಕೃತಿಕಾ ಎಂ. ರೆಡ್ಡಿ ಅವರ ಆರೋಗ್ಯ ಸರಿ ಇರಲಿಲ್ಲ. ದಿನಪೂರ್ತಿ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಂಡು ಬಂದ ಮೇಲೆ, ಸಂಜೆ ಮನೆಯಲ್ಲಿ ಇವಳನ್ನೂ ನೋಡಿಕೊಳ್ಳುವುದು ನನಗೆ ಹಿಂಸೆಯಾಗುತ್ತಿತ್ತು. ಕೃತಿಕಾಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದ ವಿಷಯವನ್ನು ಆಕೆಯ ಕುಟುಂಬದವರು ಮದುವೆಯ ಸಮಯದಲ್ಲಿ ಮುಚ್ಚಿಟ್ಟಿದ್ದರು ಎಂದು ಮಹೇಂದ್ರ ಆರೋಪಿಸಿದ್ದಾನೆ. ಆಕೆಯ ಚಿಕಿತ್ಸೆಯ ಬಗ್ಗೆಯೂ ತನಗೆ ತಿಳಿದಿತ್ತು ಎಂದಿದ್ದಾನೆ.
ಅಕ್ರಮ ಸಂಬಂಧದ ಬಗ್ಗೆಯೂ ಒಪ್ಪಿಕೊಂಡ ಡಾಕ್ಟರ್:
ಕೊಲೆಗೆ ಆಸ್ತಿ ಮತ್ತು ಆರೋಗ್ಯದ ಸಮಸ್ಯೆಗಳ ಜೊತೆಗೆ ಆರೋಪಿ ಮಹೇಂದ್ರನಿಗೆ ಅನೈತಿಕ ಸಂಬಂಧ ಇರುವುದಾಗಿ ಕೂಡ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆದರೂ, ಅನೈತಿಕ ಸಂಬಂಧಕ್ಕೋಸ್ಕರ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ತನಗೆ ಫೆಲೋಶಿಪ್ ರೂಪದಲ್ಲಿ ಪ್ರತಿ ತಿಂಗಳು ಸುಮಾರು 70 ರಿಂದ 80 ಸಾವಿರ ರೂ. ಆದಾಯ ಬರುತ್ತಿತ್ತು ಎಂದೂ ಮಾಹಿತಿ ನೀಡಿದ್ದಾನೆ.
ಇಷ್ಟೆಲ್ಲಾ ತನಿಖೆಯಾಗುತ್ತೆ ಅಂದಿದ್ದರೆ ಕೊಲೆ ಮಾಡ್ತಿರಲಿಲ್ಲ:
ಕೊಲೆಯ ತನಿಖೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಹೇಂದ್ರ, ‘ಅನಸ್ತೇಷಿಯಾ (ಮಂಪರು ಮದ್ದು) ಕೊಟ್ಟು ಸಾಯಿಸಿದರೆ, ಪೊಲೀಸರ ತನಿಖೆಯಲ್ಲಿ ಗೊತ್ತಾಗುವುದಿಲ್ಲ, ಸಾವಿನ ನಿಖರ ಕಾರಣ ಹೊರಬರುವುದಿಲ್ಲ ಎಂದು ಭಾವಿಸಿದ್ದೆ. ಆದರೆ, ಪೊಲೀಸರು ಇಷ್ಟು ತಾಂತ್ರಿಕವಾಗಿ (ಟೆಕ್ನಿಕಲ್ ಆಗಿ) ಮತ್ತು ಆಳವಾಗಿ (ಡೀಪ್ ಆಗಿ) ತನಿಖೆ ನಡೆಸುತ್ತಾರೆ ಎಂದು ಗೊತ್ತಿರಲಿಲ್ಲ. ಈ ಮಟ್ಟದ ತನಿಖೆಯಾಗುತ್ತದೆ ಎಂದು ತಿಳಿದಿದ್ದರೆ ನಾನು ಕೊಲೆಯೇ ಮಾಡುತ್ತಿರಲಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾನೆ. ಪೊಲೀಸರ ತಾಂತ್ರಿಕ ತನಿಖೆಯು ಆರೋಪಿಯನ್ನು ಕಂಬಿಗಳ ಹಿಂದೆ ತಳ್ಳಲು ಪ್ರಮುಖ ಪಾತ್ರ ವಹಿಸಿದೆ ಎಂದು ಸಾಬೀತಾಗಿದೆ.