ಛತರಪುರದಲ್ಲಿ ವೈದ್ಯರ ಹಲ್ಲೆ ಆರೋಪ: ಸೇವೆಯಿಂದ ವಜಾ, ಅಮಾನತು

ಛತರಪುರ: ಮಧ್ಯಪ್ರದೇಶದ ಛತರಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 70 ವರ್ಷದ ವ್ಯಕ್ತಿಯನ್ನು ಇಬ್ಬರು ಎಳೆದುಕೊಂಡು ಹೋಗುತ್ತಿದ್ದ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಿದೆ.
ಇದರ ಬೆನ್ನಲ್ಲೇ, ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ರಾಜೇಶ್ ಮಿಶ್ರಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಸರ್ಜನ್ ಜಿ.ಎಲ್.
ಅಹಿರ್ವಾರ್ ಅವರನ್ನು ಅಮಾನತು ಮಾಡಲಾಗಿದೆ.
ನೌಗಾಂವ್ ಪಟ್ಟಣದ ಉದ್ಧವ್ ಸಿಂಗ್ ಜೋಶಿ ಅವರು ಏ. 17ರಂದು ತಮ್ಮ ಪತ್ನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಛತರಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
‘ನಾನು ಸುಮಾರು ಹೊತ್ತು ಸಾಲಿನಲ್ಲಿ ನಿಂತಿದ್ದೆ. ನನ್ನ ಸರದಿ ಬಂದಾಗ ಡಾ. ರಾಜೇಶ್ ಮಿಶ್ರಾ ನನಗೆ ಅಡ್ಡಿಪಡಿಸಿದರು. ಅಲ್ಲದೆ, ನನ್ನ ಕಪಾಳಕ್ಕೆ ಹೊಡೆದು, ಒದ್ದರು’ ಎಂದು ಜೋಶಿ ಆರೋಪಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಜೋಶಿ ಅವರ ಕೈಗಳನ್ನು ಹಿಡಿದು, ಎಳೆದೊಯ್ಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಸಂಬಂಧ 24 ಗಂಟೆಯಲ್ಲಿ ವಿವರಣೆ ನೀಡುವಂತೆ ಸೂಚಿಸಿ ಆರೋಗ್ಯ ಇಲಾಖೆಯು, ಮಿಶ್ರಾ ಅವರಿಗೆ ನೋಟಿಸ್ ನೀಡಿತ್ತು.
ಆದರೆ, ಜೋಶಿ ಅವರ ಆರೋಪ ಅಲ್ಲಗಳೆದ ಸರ್ಜನ್ ಜಿ.ಎಲ್. ಅಹಿರ್ವಾರ್, ‘ಅಂದು ಆಸ್ಪತ್ರೆಯಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಜೋಶಿ ಅವರು ಸಾಲನ್ನು ಬಿಟ್ಟು ಬಂದಿದ್ದಕ್ಕಾಗಿ ಡಾ. ಮಿಶ್ರಾ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಹೇಳಿದ್ದಾರೆ