ಕುಡಿಯುವ ನೀರಿನ ವಿಚಾರಕ್ಕೆ ವಾಗ್ವಾದ – ಮುರಿದುಬಿದ್ದ ಸಾಫ್ಟ್ವೇರ್ ಇಂಜಿನಿಯರ್ಗಳ ಮದುವೆ


ತುಮಕೂರು : ಬೇಸಗೆ ಆವರಿಸುತ್ತಿದ್ದಂತೆ ನೀರಿಗೆ ಹಾಹಾಕಾರವೂ ಎದ್ದಿದೆ. ಕೆಲವು ಕಡೆ ಕುಡಿಯುವ ನೀರಿಗೇ ತತ್ವಾರ ಇದೆ. ಆದರೆ ಇಲ್ಲೊಂದು ಕಡೆ ಕುಡಿಯುವ ನೀರಿನ ವಿಚಾರದಲ್ಲಿ ಉಂಟಾದ ವಾಗ್ವಾದ ಸಾಫ್ಟ್ವೇರ್ ಇಂಜಿನಿಯರ್ ಗಳಿಬ್ಬರ ಮದುವೆಯನ್ನೇ ನಿಲ್ಲಿಸಿಬಿಟ್ಟಿದೆ. ಎರಡು ಕುಟುಂಬಗಳ ನಡುವಿನ ಸಂಬಂಧಕ್ಕೇ ಎಳ್ಳುನೀರು ಬಿಟ್ಟಿದೆ.
ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು. ವಧು ವರರಿಬ್ಬರೂ ಎಂಜಿನಿಯರಿಂಗ್ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದಾರೆ. ಶನಿವಾರ ಆರತಕ್ಷತೆ ನಡೆದು ಭಾನುವಾರ ಬೆಳಗ್ಗೆ 10.30ರಿಂದ 11.30ರ ಸಮಯದಲ್ಲಿ ಮದುವೆ ಮುಹೂರ್ತ ನಡೆಯಬೇಕಿತ್ತು. ಈ ನಡುವೆ ಶನಿವಾರ ಸಂಜೆ ಆರತಕ್ಷತೆ ಮುಗಿಸಿಕೊಂಡು ಊಟಕ್ಕೆ ಹೋದ ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ ಎನ್ನುವ ವಿಚಾರದಲ್ಲಿ ತಗಾದೆ ಉಂಟಾಗಿದೆ.
ಇದೇ ವಿಚಾರ ಮುಂದಿಟ್ಟು ವಧು ಹಾಗೂ ವರನ ಕಡೆಯವರು ಮಾತಿನ ಚಕಮಕಿ ನಡೆಸಿದ್ದಾರೆ. ವರನ ಕಡೆಯವರು ವಧುವಿನ ಕಡೆಯವರನ್ನು ಹೀಯಾಳಿಸಿದ್ದರಿಂದ ಜಗಳ ವಿಕೋಪಕ್ಕೆ ಹೋಗಿತ್ತು. ನೀರಿನ ವಿಚಾರದಲ್ಲಿ ಎದ್ದ ವಾಗ್ವಾದ ಮದುವೆಯನ್ನೆರ ನಿಲ್ಲಿಸುವ ಹಂತಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ಎರಡೂ ಕುಟುಂಬದ ಹಿರಿಯರು ಸಂಧಾನ ನಡೆಸಿದ್ದರು.
ಭಾನುವಾರ ಬೆಳಗ್ಗೆಯೂ ಸಂಧಾನ ಪ್ರಯತ್ನಗಳು ಮುಂದುವರಿದಿತ್ತು. ಎರಡೂ ಕಡೆಯಿಂದಲೂ ವರ ಮತ್ತು ವಧುವನ್ನು ಒಪ್ಪಿಸುವ ಪ್ರಯತ್ನಗಳು ನಡೆದವು. ಆದರೆ ವರ ಮತ್ತು ವಧು ಇಬ್ಬರೂ ಅದನ್ನೇ ಪ್ರತಿಷ್ಠೆಯ ವಿಷಯವಾಗಿಸಿದ್ದರಿಂದ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಲಿಲ್ಲ. ಜಗಳ ಮರೆತು ಹಸೆಮಣೆ ಎರುವಂತೆ, ವಧೂ ವರರ ಪೋಷಕರು ಮನವೊಲಿಸಿದರೂ ಪ್ರಯೋಜನ ಆಗಲಿಲ್ಲ. ಭಾನುವಾರ ಮಧ್ಯಾಹ್ನ 12 ಗಂಟೆ ವರೆಗೂ ಸಂಧಾನ ನಡೆಯಿತಾದರೂ, ಕೊನೆ ವರೆಗೂ ವಧು ತನ್ನ ಪಟ್ಟು ಬಿಡದ ಕಾರಣ ಮದುವೆ ಮುರಿದು ಬಿತ್ತು.
