ಮಗು ರಕ್ಷಿಸಿದ ದಿಶಾ ಪಟಾನಿಯ ಸಹೋದರಿ ಖುಷ್ಬೂ ಪಟಾನಿ: ಮಾಜಿ ಸೇನಾ ಅಧಿಕಾರಿಯಿಂದ ಮಾನವೀಯತೆ ಮೆರೆದ ಸಾಹಸ

ಉತ್ತರಪ್ರದೇಶ : ಬಾಲಿವುಡ್ ನಟಿ ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ ಮಾಜಿ ಸೇನಾ ಅಧಿಕಾರಿ ಕೂಡ ಹೌದು. ಕಳೆದೆರಡು ದಿನಗಳಿಂದ ಆಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಆಕೆ ಪಾಳುಬಿದ್ದಿದ್ದ ಮನೆಯಲ್ಲಿ ಒಂದು ಮಗುವನ್ನು ಕಾಪಾಡಿದ್ದು.
ಈ ಬಗ್ಗೆ ವೀಡಿಯೋ ಮಾಡಿ ಖುಷ್ಬೂ ಹಂಚಿಕೊಂಡಿದ್ದರು.
ಉತ್ತರಪ್ರದೇಶದ ಬರೇಲಿಯಲ್ಲಿ ಖುಷ್ಬೂ ಪಟಾನಿ ವಾಸಿಸುತ್ತಿದ್ದಾರೆ. ಭಾನುವಾರ ತಮ್ಮ ನಿವಾಸ ಸಮೀಪ ಪಾಳುಬಿದ್ದ ಮನೆಯೊಂದರಲ್ಲಿ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ಕೂಡಲೇ ಅಲ್ಲಿಗೆ ಹೋಗಿ ನೋಡಿದ್ದಾರೆ. ಮುಖಕ್ಕೆ ಪೆಟ್ಟಾಗಿ ಮೈಯೆಲ್ಲಾ ಮಣ್ಣಾಗಿದ್ದ ಮಗುವನ್ನು ನೋಡಿ ಬೇಸರಗೊಂಡಿದ್ದಾರೆ. ಹಿಂದು ಮುಂದು ನೋಡದೇ ಆ ಮಗುವನ್ನು ರಕ್ಷಿಸಿ ಹೊರಗೆ ತಂದಿದ್ದಾರೆ.
ಅಳುತ್ತಿದ್ದ ಮಗು ಗಾಬರಿಗೊಳ್ಳದಂತೆ ಬಹಳ ತಾಳ್ಮೆಯಿಂದ ಸಮಾಧಾನ ಮಾಡಿ ತೆಗೆದುಕೊಂಡು ಬಂದಿದ್ದಾರೆ. ಮಡಿಲಿನಲ್ಲಿಟ್ಟುಕೊಂಡು ಲಾಲಿ ಹಾಡಿದ್ದಾರೆ. ಡಬ್ಬಿ ಸಹಾಯದಿಂದ ಹಾಲುಣಿಸಿದ್ದಾರೆ. ಈ ಮಗುವಿನ ಬಗ್ಗೆ ಮಾಹಿತಿ ಇರುವವರು ತಮ್ಮನ್ನು ಸಂಪರ್ಕಿಸಿ ಎಂದು ಹೇಳಿ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ. ಪುಟ್ಟ ಮಗುವನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಪೋಷಕರ ಬಗ್ಗೆ ಖುಷ್ಬೂ ಪಟಾನಿ ಅಸಮಾಧಾನ ಹೊರ ಹಾಕಿದ್ದಾರೆ. ನೀವೆಂತಹ ಪೋಷಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ನಮ್ಮ ದೇಶದಲ್ಲಿ ಹೆಣ್ಣು ಮಗುವನ್ನು ಉಳಿಸಿ. ಇನ್ನು ಎಷ್ಟು ದಿನ ಇದು ಹೀಗೆ ಮುಂದುವರೆಯುತ್ತದೆ. ನಾನು ಆ ಮಗು ಸರಿಯಾದ ವ್ಯಕ್ತಿಗಳ ಕೈಗೆ ಹೋಗುವಂತೆ ನೋಡಿಕೊಳ್ಳುತ್ತೇನೆ ಎಂದು ಖುಷ್ಬೂ ಪಟಾನಿ ವೀಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಬರೇಲಿ ಪೊಲೀಸರು, ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರನ್ನು ಪೋಸ್ಟ್ಗೆ ಟ್ಯಾಗ್ ಮಾಡಿದ್ದಾರೆ.
ಖುಷ್ಬೂ ಪಟಾನಿ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ಸಮಯದಲ್ಲಿ ಪುಟ್ಟ ಮಗುವನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಪೋಷಕರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.