‘ಅಂಗವೈಕಲ್ಯ ಪಿಂಚಣಿ ಸ್ವಾರ್ಥವಲ್ಲ – ಸೈನಿಕರ ತ್ಯಾಗಕ್ಕೆ ಗೌರವ’: ಕೇಂದ್ರ ಸರ್ಕಾರದ 300 ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್

ನವದೆಹಲಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದನ್ನು ಪ್ರಶ್ನಿಸಿ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಸುಮಾರು 300 ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ. ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠವು ಸಶಸ್ತ್ರ ಪಡೆಗಳ ಸಿಬ್ಬಂದಿ ಅಂಗವೈಕಲ್ಯ ಪಿಂಚಣಿಗೆ ಅರ್ಹರು ಎಂದಿದೆ.

ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ಬದಲಿಗೆ ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕೆ ಸಲ್ಲಿಸಬೇಕಾದ ಗೌರವ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿದೆ. ಇಂತಹ ಪಿಂಚಣಿಯಿಂದ ಸೇವೆಯ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾದ ಯೋಧನಿಗೆ ನೆರವು, ಆರ್ಥಿಕ ಭದ್ರತೆ ಹಾಗೂ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ. ಇದು ಧೈರ್ಯ ಮತ್ತು ಶ್ರದ್ಧೆಯಿಂದ ದೇಶಕ್ಕಾಗಿ ದುಡಿದ ಸೈನಿಕರೆಡೆಗೆ ಪ್ರಭುತ್ವ ನಿರ್ವಹಿಸಬೇಕಾದ ಜವಾಬ್ದಾರಿಯುತ ಕ್ರಮ ಎಂದು ತಿಳಿಸಿದೆ.

ಅಂಗವೈಕಲ್ಯಕ್ಕೆ ತುತ್ತಾದ ಸೇನಾ ಸಿಬ್ಬಂದಿಯು ಸಂಘರ್ಷ ರಹಿತ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು ಎಂಬ ಒಂದೇ ಕಾರಣಕ್ಕೆ ಅವರಿಗೆ ಅಂಗವೈಕಲ್ಯ ಪಿಂಚಣಿ ನಿರಾಕರಿಸುವಂತಿಲ್ಲ. ಅತ್ಯಂತ ಕಠಿಣ ಹವಾಮಾನ ಮತ್ತು ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಲ್ಲಿ ಕಾಣಿಸಿಕೊಂಡ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ನ್ಯೂನತೆಗಳು ಸೇನಾ ಸೇವೆಯಿಂದ ಬಂದಿಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿ ವೈದ್ಯಕೀಯ ಮಂಡಳಿಯ (RMB) ಮೇಲಿದೆ ಎಂದು ಹೇಳಿದೆ.

ಸೇನಾ ಸಿಬ್ಬಂದಿಯ ನಿಯೋಜನೆಯ ಸ್ಥಳವನ್ನು ಆಧರಿಸಿ ಅವರ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸುವಂತಿಲ್ಲ ಎಂದ ನ್ಯಾಯಾಲಯ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು. ಸೇನೆಗೆ ಸಲ್ಲಿಸಿದ ಸೇವೆಯಿಂದಾಗಿ ಅರ್ಜಿದಾರ ಸೈನಿಕರಿಗೆ ಅಂಗವೈಕಲ್ಯ ಉಂಟಾಗಿಲ್ಲ. ಅವರು ಅಂಗವೈಕಲ್ಯ ಪಿಂಚಣಿಗೆ ಅರ್ಹರಲ್ಲ ಎಂದು ರಕ್ಷಣಾ ಸಚಿವಾಲಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಟಕರಮಣಿ ಸಚಿವಾಲಯದ ಪರವಾಗಿ ವಾದ ಮಂಡಿಸಿದ್ದರು.
