ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ನ್ಯಾಯಾಲಯದ ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುವಿಕೆ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವುಗಳ ಮೇಲೆ ತಿರುವುಗಳು ಸಿಗುತ್ತಿದೆ. ಅನಾಮಿಕ ವ್ಯಕ್ತಿ ದೂರಿನ ಆಧಾರದ ತನಿಖೆ ನಡೆಸುತ್ತಿರುವ ಎಸ್ಐಟಿ (SIT) ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟ ಸಮೀಪ ಹಲವು ಪಾಯಿಂಟ್ಗಳಲ್ಲಿ ಉತ್ಖನನ ನಡೆಸಿತ್ತು.

6 ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಈಗಾಗಲೇ ಆ ಅಸ್ಥಿಪಂಜರವನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಾಧೀಶ ವಿಜಯ ಕುಮಾರ್ ರೈ ಬಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಮೊಕದ್ದಮೆಯ ಪ್ರತಿವಾದಿಯೊಬ್ಬರು ಹಿತಾಸಕ್ತಿ ಸಂಘರ್ಷದ ವಿಷಯವನ್ನು ಎತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಜಯ್ ಕುಮಾರ್ ಅವರು ಈ ಹಿಂದೆ ರಾಜ್ಯಸಭಾ ಸಂಸದ ಮತ್ತು ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಆದೇಶ ಹೊರಡಿಸಿದ್ದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ನ್ಯಾಯಧೀಶ ವಿಜಯ್ ಕುಮಾರ್ ರೈ ಬಿ ಮತ್ತು ಅರ್ಜಿದಾರರಾದ ಹರ್ಷೇಂದ್ರ ಕುಮಾರ್ ಅವರ ಕುಟುಂಬದ ನಡುವಿನ ಸಂಬಂಧವನ್ನು ಪತ್ರಕರ್ತ ನವೀನ್ ಸೂರಿಂಜೆ ಅವರು ಪ್ರಶ್ನಿಸಿದ ಬಳಿಕ ನ್ಯಾಯಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
ಮೊಕದ್ದಮೆಯಲ್ಲಿ 25 ನೇ ಪ್ರತಿವಾದಿ (ಟಿವಿ ಚಾನೆಲ್ನ ಪತ್ರಕರ್ತ ನವೀನ್ ಸೂರಿಂಜೆ) ತಮ್ಮ ವಕೀಲರ ಮೂಲಕ ಮೆಮೊ ಸಲ್ಲಿಸಿದ್ದರು. ಆಗಸ್ಟ್ 2 ರಂದು, ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ನಡೆಸುತ್ತಿರುವ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ, ಪ್ರತಿವಾದಿ 25 ರ ವಕೀಲರು ಪ್ರತಿವಾದಿಯು ನೀಡಿದ ಪತ್ರದೊಂದಿಗೆ ಮೆಮೊ ಸಲ್ಲಿಸಿದರು.
ಬೆಂಗಳೂರಿನ 10ನೇ ಹೆಚ್ಚುವರಿ ನಗರ ಮತ್ತು ಸಿವಿಲ್ ಸೆಷನ್ನ ನ್ಯಾಯಾಲಯದ ನ್ಯಾಯಾಧೀಶ ವಿಜಯ ಕುಮಾರ್ ಅವರು ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಸಲ್ಲಿಸಿದ ಪ್ರಕರಣವನ್ನು ಪ್ರಧಾನ ನಗರ ಸಿವಿಲ್ ಸೆಷನ್ಸ್ ನ್ಯಾಯಾಧೀಶರ ಮುಂದೆ ಇರಿಸಿದ್ದಾರೆ ಎಂದು ವರದಿಯಾಗಿದೆ.