ಅದಾನಿ ಕೈಯಲ್ಲಿ ಧಾರಾವಿ ಭವಿಷ್ಯ: ಕೊಳಗೇರಿ ಉಳಿಯುತ್ತದಾ? ಇಲ್ಲವೇ ಸಿಟಿಯ ಹೊಸ ರೂಪ ಪಡೆಯುತ್ತಾ ? ಧಾರಾವಿ

ಧಾರಾವಿ:ಏಷ್ಯಾದ ಅತೀದೊಡ್ಡ ಕೊಳಗೇರಿ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮುಂಬಯಿಯ ಧಾರಾವಿಗೆ ಈ ಕುಖ್ಯಾತಿ ಕಳೆಯುವ ದಿನ ಸನ್ನಿಹಿತವಾಗುತ್ತಿದೆ. ಕೊಳಗೇರಿಯನ್ನು ಮರು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಯಡಿ ಲಕ್ಷಾಂತರ ಜನರನ್ನು ಧಾರಾವಿಯಿಂದ ಬೇರೆ ಬೇರೆ ಪ್ರದೇ ಶಗಳಿಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರಕಾರ ನಿರ್ಣಯಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಧಾರಾವಿ ಮರುಅಭಿವೃದ್ಧಿ ಯೋಜನೆ ಮತ್ತು ಸ್ಥಳಾಂತರಕ್ಕೆ ಜನರ ವಿರೋಧವೇಕೆ? ಎಂಬ ಕುರಿತು ಬೆಳಕು ಚೆಲ್ಲಲಾಗಿದೆ.
ಏಷ್ಯಾದ ಅತೀದೊಡ್ಡ ಕೊಳಗೇರಿಯಿದು
ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯ ಹೃದಯಭಾಗದಲ್ಲಿ ಸುಮಾರು 590 ಎಕ್ರೆ ವ್ಯಾಪ್ತಿಯಲ್ಲಿ ಧಾರಾವಿ ಸ್ಥಿತವಾಗಿದೆ. ಒಂದಾ ನೊಂದು ಕಾಲದಲ್ಲಿ ಮೀನುಗಾರರಿಗೆ ನೆಲೆ ಯಾಗಿದ್ದ ಪುಟ್ಟ ಗ್ರಾಮವಾಗಿದ್ದ ಧಾರಾವಿ, 1,800ರ ಅನಂತರ ಜನಸಂಖ್ಯೆಯಲ್ಲಿ ವ್ಯಾಪಕ ಏರಿಕೆ ಕಾಣಲಾರಂಭಿಸಿತು. ಪ್ರಸಕ್ತ ಈ ಕೊಳಗೇರಿಯಲ್ಲಿ ಬರೋ ಬ್ಬರಿ 10 ಲಕ್ಷ ಮಂದಿ ಇಲ್ಲಿನ ಇಕ್ಕಟ್ಟು ಗಲ್ಲಿಗಳಲ್ಲಿ, ಪುಟ್ಟ ಗೂಡಿನಂಥ ಕೋಣೆಗಳಲ್ಲಿ ಜೀವಿಸುತ್ತಿದ್ದಾರೆ. ಅಂದರೆ ಪ್ರತೀ ಚದರ ಕಿ.ಮೀ. ಪ್ರದೇಶದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ಜೀವನ ಸಾಗಿಸು ತ್ತಿದ್ದಾರೆ. ಈ ಕೊಳಗೇರಿಯು ಕೇವಲ ವಸತಿ ಪ್ರದೇಶವಾಗಿರದೆ, ಚರ್ಮೋದ್ಯಮ, ಕುಂಬಾರಿಕೆ ಸೇರಿದಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ನೆಲೆಯಾಗಿದ್ದು, ಇಲ್ಲಿನ ವಾರ್ಷಿಕ ವಹಿವಾಟು 8,600 ಕೋಟಿ ರೂ.ಗಳನ್ನು ಮೀರುತ್ತದೆ.

ಧಾರಾವಿ ಮರು ಅಭಿವೃದ್ಧಿ ಯೋಜನೆ
ಹಾಂಗ್ ಕಾಂಗ್ನ ತೈ ಹಾಂಗ್ ಕೊಳಗೇರಿಯ ಮರು ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು 2004ರಲ್ಲಿ ಈ ಯೋಜನೆಗೆ ಪ್ರಸ್ತಾವನೆಯಾಗಿತ್ತು. ಆದಾಗ್ಯೂ ಸುಮಾರು 2 ದಶಕಗಳ ಬಳಿಕ ಅಂದರೆ, 2022ರಲ್ಲಿ ಈ ಯೋಜನೆಯ ಟೆಂಡರ್ ಅದಾನಿ ಸಮೂಹದ ಪಾಲಾಯಿತು (5069 ಕೋಟಿ ರೂ.) ಮತ್ತು ನವಭಾರತ್ ಮೆಗಾ ಡೆವಲಪರ್ ಪ್ರೈ.ಲಿ.(ಎನ್ಎಂಡಿಪಿಎಲ್) ಮುಖಾಂತರ 2023ರಿಂದ ಈ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆಯಲ್ಲಿ ಅದಾನಿ ಸಮೂಹ ಶೇ.80 ಪಾಲನ್ನು ಹೊಂದಿದ್ದರೆ, ಮಹಾರಾಷ್ಟ್ರ ಸರಕಾರದ ಕೊಳಗೇರಿ ಮರುಅಭಿವೃದ್ಧಿ ಪ್ರಾಧಿಕಾರ ಶೇ.20 ಪಾಲು ಹೊಂದಿದೆ.
ಆರ್ಹರಿಗೆ ಲಭಿಸಲಿದೆ ಉಚಿತ ಮನೆಗಳು
ಈ ಯೋಜನೆಯಡಿ, ಜ.1,2000ಕ್ಕಿಂತ ಮುಂಚಿನಿಂದಲೂ ಧಾರಾವಿಯಲ್ಲಿ ವಾಸಿಸುತ್ತಿರುವ ಆರ್ಹ ಕುಟುಂಬಗಳಿಗೆ ಧಾರಾವಿ ಪ್ರದೇಶದಲ್ಲೇ ಉಚಿತವಾಗಿ ಮನೆಗಳನ್ನು ನೀಡಲಾಗುತ್ತಿದೆ. 350 ಚ.ಅಡಿಯ ಈ ಫ್ಲಾಟ್ಗಳು ಅಡುಗೆಮನೆ, ಶೌಚಾಲಯಗಳನ್ನೂ ಒಳಗೊಂಡಿರುತ್ತವೆ. ಆದಾಗ್ಯೂ ಯೋಜನೆಗೆ ಅನರ್ಹರಾದ ನಿವಾಸಿಗಳಿಗೆ ಮುಂಬಯಿ ಆಸುಪಾಸಿನ ದೇವ ನಾರ್, ಕುರ್ಲಾ, ವಢಾಲಾ ಮುಂತಾದ ಪ್ರದೇಶಗಳಲ್ಲಿ ಕಡಿಮೆ ಬಾಡಿಗೆಗೆ ವಸತಿ ಕಲ್ಪಿಸಲು ಯೋಜಿಸಲಾಗಿದೆ.
2004ರಿಂದಲೂ ಕುಂಟುತ್ತಿತ್ತು ಈ ಯೋಜನೆ!
1997ರಲ್ಲೇ ಧಾರಾವಿಯ ಮರುಅಭಿವೃದ್ಧಿಗೆ ಧ್ವನಿ ಕೇಳಿಬರಲಾರಂಭಿಸಿತ್ತು. 2004ರಲ್ಲಿ ಅಂದಿನ ಕಾಂಗ್ರೆಸ್ ಸರಕಾರವು ಧಾರಾವಿ ಮರು ಅಭಿವೃದ್ಧಿಗೆ ಪ್ರಾಧಿಕಾರವೊಂದನ್ನು ರಚಿಸುವ ಮೂಲಕ, ಮೊದಲ ಹೆಜ್ಜೆಯನ್ನಿಟ್ಟಿತು. ಆದರೆ 2022ರ ವರೆಗೆ ಈ ಯೋಜನೆಗೆ ಚಾಲನೆ ದೊರೆಯಲೇ ಇಲ್ಲ. 2007, 2009, 2011,2016ರಲ್ಲಿ ಈ ಬಗ್ಗೆ ಕರೆಯಲಾದ ಟೆಂಡರ್ಗಳೆಲ್ಲವೂ ವಿಫಲವಾದವು. 2018ರಲ್ಲಿ ದುಬಾೖ ಮೂಲದ ಸೆಕ್ಲಿಂಗ್ ಟೆಕ್ನಾಲಜೀಸ್ 7200 ಕೋಟಿ ರೂ.ಗೆ ಟೆಂಡರ್ನ್ನು ತನ್ನದಾಗಿಸಿಕೊಂಡರೂ, ಕೋವಿಡ್-19 ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಆರ್ಥಿಕ ತಡೆಗಳಿಂದಾಗಿ 2020ರಲ್ಲಿ ರದ್ದಾಯಿತು. ಬಳಿಕ 2022ರಲ್ಲಿ ಮಹಾಯುತಿ ಸರಕಾರದ ಅವಧಿಯಲ್ಲಿ ಕರೆಯಲಾದ ಮರು ಟೆಂಡರ್ ಅದಾನಿ ಸಮೂಹದ ಪಾಲಾಯಿತು.

ಯೋಜನೆಯ ಸುತ್ತ ವಿವಾದದ ಹುತ್ತ
- ಕಾನೂನು ಸಮಸ್ಯೆ: 2018ರಲ್ಲಿ ಈ ಯೋಜನೆಯ ಟೆಂಡರ್ ಪಡೆದಿದ್ದ ಸೆಕ್ಲಿಂಗ್ ಟೆಕ್ನಾಲಜೀಸ್ ತಾನು ಪಡೆದ ಟೆಂಡರ್ನ್ನು 2020ರಲ್ಲಿ ರದ್ದು ಮಾಡಿದ್ದು ಅನ್ಯಾಯ ಎಂದು ಬಾಂಬೆ ಹೈಕೋರ್ಟ್ಗೆ ದಾವೆ ಹೂಡಿತು. ಆದರೆ ಅದಾನಿ ಅವರು ಪಡೆದ ಟೆಂಡರ್ ಕಾನೂನುಬದ್ಧವಾಗಿದೆ ಎಂದು ತೀರ್ಪನ್ನಿತ್ತಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಸರಕಾರ ಮತ್ತು ಅದಾನಿ ಸಮೂಹದಿಂದ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿರೂ, ಯೋಜನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.
2.ರಾಜಕೀಯ ಕಚ್ಚಾಟ: ಮಹಾರಾಷ್ಟ್ರದ ಎನ್ಡಿಎ ಸರಕಾರವು ಧಾರಾವಿ ಪ್ರದೇಶವನ್ನು ಉದ್ಯಮಿ ಗೌತಮ್ ಅದಾನಿಗೆ ಉಡುಗೊರೆಯಾಗಿ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಕಾಂಗ್ರೆಸ್ ನಾಯಕ ಈ ಯೋಜನೆಯನ್ನು “ಮೋದಾನಿ ಯೋಜನೆ’ಯೆಂದೂ ಕರೆದರು. ತಾವು ಅಧಿಕಾರಕ್ಕೇರಿದರೆ, ಈ ಯೋಜನೆಗೆ ತಡೆಯಾಜ್ಞೆ ತರುವುದಾಗಿ ಉದ್ಧವ್ ಬಣದ ಶಿವಸೇನೆಯು ವಿಧಾನಸಭೆ ಚುನಾವಣೆ ವೇಳೆ ಭರವಸೆಯನ್ನೂ ನೀಡಿತ್ತು.
3.ಸ್ಥಳಾಂತರಕ್ಕೆ ಜನರ ವಿರೋಧ: ಅರ್ಹ ಕುಟುಂಬಗಳಿಗೆ ಮಾತ್ರ ಧಾರಾವಿಯಲ್ಲಿ ಪುನರ್ವಸತಿ ಕಲ್ಪಿಸಿ, ಉಳಿದವರನ್ನು ಒಕ್ಕಲೆಬ್ಬಿಸಲು ಸರಕಾರ ಮುಂದಾಗಿದೆ ಎಂಬುದು ಜನರ ಆರೋಪ. ಇದಕ್ಕೆ ತುಪ್ಪ ಸುರಿಯುವಂತೆ ಅಪಾಯಕಾರಿಯಾದ ದೇವನಾರ್ ಘನತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ಹಾಗೂ ಪ್ರವಾಹ ಭೀತಿಯಿರುವ ಖಾಲಿ ಉಪ್ಪು ತಯಾರಿಕಾ ಪ್ರದೇಶಗಳಿಗೆ ಅನರ್ಹರಿಗೆ ವಸತಿ ಸಮುತ್ಛಯ ನಿರ್ಮಿಸಿಕೊಡಲು ಮುಂದಾಗಿರುವ ಸರಕಾರದ ನಡೆ ಹಲವರ ಕಣ್ಣು ಕೆಂಪಗಾಗಿಸಿದೆ. ಅಲ್ಲದೆ ಧಾರಾ ವಿಯಂತಹ ದೊಡ್ಡ ಆರ್ಥಿಕ ವಲಯದಿಂದ ಮುಂಬಯಿ ಹೊರವಲಯಕ್ಕೆ ಸ್ಥಳಾಂತರವಾಗುತ್ತಿ ರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಘನ ತ್ಯಾಜ್ಯ ಇರುವ ದೇವನಾರ್ಗೆ 1 ಲಕ್ಷ ಜನ
ಧಾರಾವಿ ಮರುಅಭಿವೃದ್ಧಿ ಯೋಜನೆಯ ಸುಮಾರು 50,000ದಿಂದ 1 ಲಕ್ಷ ಅನರ್ಹರನ್ನು ದೇವನಾರ್ ಪ್ರದೇಶಕ್ಕೆ ಸ್ಥಳಾಂತರಿಸಲು ಮಹಾರಾಷ್ಟ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಆದರೆ ದೇವನಾರ್ ಘನತ್ಯಾಜ್ಯ ಘಟಕವು ದೇಶದಲ್ಲೇ ಅತ್ಯಂತ ಹಳೆಯ ತ್ಯಾಜ್ಯ ಘಟಕಗಳಲ್ಲೊಂದು. ಸುಮಾರು 311 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ತ್ಯಾಜ್ಯ ಘಟಕವು ತನ್ನೊಡಲಲ್ಲಿ ವಿಷವನ್ನೇ ತುಂಬಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಅಪಾಯಕಾರಿಯಾದ ವೈದ್ಯಕೀಯ ತ್ಯಾಜ್ಯಗಳು ಸೇರಿದಂತೆ ಪ್ರತೀ ದಿನವೂ 500-700 ಟನ್ ತ್ಯಾಜ್ಯ ಈ ಪ್ರದೇಶಕ್ಕೆ ಬಂದು ಬೀಳುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಅನುಸಾರ ಈ ಪ್ರದೇಶದಲ್ಲಿ ಪ್ರತೀ ಘಂಟೆಗೆ 6,202 ಕೆ.ಜಿ. ಮಿಥೇನ್ ಅನಿಲ ಹೊರಹೊಮ್ಮುತ್ತದೆ. ಇನ್ನುಳಿದ ಅಪಾಯಕಾರಿ ಅನಿಲಗಳಿಗೂ ಇಲ್ಲಿ ಬರವಿಲ್ಲ. ಆದ್ದರಿಂದಲೇ ಈ ಪ್ರದೇಶದ ಆಸುಪಾಸಿನಲ್ಲಿ ವಾಸಿಸುತ್ತಿರುವ ಕುಟುಂಬಗಳು ಕ್ಷಯ ರೋಗದಂತಹ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿವೆ ಎಂದು ಸಮೀಕ್ಷೆಗಳು ಕಂಡುಕೊಂಡಿವೆ. ಚಾಲ್ತಿಯಲ್ಲಿಲ್ಲದ ತ್ಯಾಜ್ಯ ಸಂಗ್ರಹ ಘಟಕಗಳಿಂದಲೇ ಕನಿಷ್ಠ 100 ಮೀ. ದೂರದಲ್ಲಿ ವಾಸಿಸಬೇಕು ಎಂಬುದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ. ಆದರೆ ಈಗಲೂ ಸಕ್ರಿಯವಾಗಿರುವ ದೇವನಾರ್ ತ್ಯಾಜ್ಯ ಘಟಕ ಪ್ರದೇಶಕ್ಕೆ ಜನರನ್ನು ಸ್ಥಳಾಂತರಿಸುವುದು, ಜನರ ಜೀವದೊಂದಿಗಿನ ಸರಕಾರದ ಚೆಲ್ಲಾಟ ಎಂಬುದು ತಜ್ಞರ ಅಭಿಪ್ರಾಯ.
ಸ್ಥಳಾಂತರಕ್ಕೆ ಮಹಾರಾಷ್ಟ್ರ ಸರಕಾರ ಸಮರ್ಥನೆ
ಈ ಯೋಜನೆಯು ರಾಜಕೀಯ ಜಟಾಪಟಿಗಳಿಗೆ ಕಾರಣವಾಗಿದ್ದರೂ, ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿಯೇ ನಡೆದಿದೆ ಎಂಬುದು ಸರಕಾರದ ವಾದ. ಇದರೊಟ್ಟಿಗೆ ಮುಂಬಯಿಯಲ್ಲಿ ಸ್ಥಳಾ ವಕಾಶದ ಕೊರತೆಯನ್ನು ಮುಂದಿಟ್ಟಿರುವ ಸರಕಾರ ಮತ್ತೆಲ್ಲೂ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲವೆಂದು ಸ್ಥಳಾಂತರದ ವಿರುದ್ಧ ಎದುರಾಗಿರುವ ಜನಾಕ್ರೋಶದ ಎದುರು ಅಳಲು ತೋಡಿಕೊಂಡಿದೆ. ಜತೆಗೆ ಉಪ್ಪಿನ ತಯಾರಿಕಾ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಸಂಭವಿಸಿಲ್ಲ ಎಂದೂ ಸಮರ್ಥಿಸಿಕೊಂಡಿದೆ.