ಢಾಕಾ ದೇವಾಲಯ ಧ್ವಂಸ: ಭಾರತ-ಬಾಂಗ್ಲಾದೇಶ ನಡುವೆ ರಾಜತಾಂತ್ರಿಕ ಜಟಾಪಟಿ – ‘ಉಗ್ರಗಾಮಿಗಳ ಒತ್ತಡಕ್ಕೆ ಮಣಿದ ಬಾಂಗ್ಲಾ’ ಎಂದ ಭಾರತ!

ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ದುರ್ಗಾ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ (ಜೂನ್ 26, 2025) ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಇದನ್ನು ಹಗುರವಾಗಿ ಪರಿಗಣಿಸಲಾಗದು ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯು ಕೇವಲ ಭೂ ಬಳಕೆಯ ವಿಷಯವಲ್ಲ, ಬದಲಾಗಿ ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆ ಎಂದು ಭಾರತ ಆರೋಪಿಸಿದೆ.

ಭಾರತದ ಆರೋಪಕ್ಕೆ ಬಾಂಗ್ಲಾ ಸೃಷ್ಟೀಕರಣ:
ಶುಕ್ರವಾರ (ಜೂನ್ 27, 2025) ಬಾಂಗ್ಲಾದೇಶ ಸರ್ಕಾರವು ಸ್ಪಷ್ಟೀಕರಣ ನೀಡಿದ್ದು, ರೈಲ್ವೆ ಹಳಿಯ ಬಳಿ ನಿರ್ಮಿಸಲಾದ ಅನಧಿಕೃತ ರಚನೆಗಳ ತೆರವಿನ ಭಾಗವಾಗಿ ದೇವಾಲಯವನ್ನು ಕೆಡವಲಾಗಿದೆ ಎಂದು ಹೇಳಿದೆ. ವಿಗ್ರಹವನ್ನು ಗೌರವಯುತವಾಗಿ ಹತ್ತಿರದ ನದಿಯಲ್ಲಿ ಮುಳುಗಿಸಿದ ಬಳಿಕ ದೇವಾಲಯವನ್ನು ತೆಗೆದುಹಾಕಲಾಗಿದೆ ಎಂದು ಬಾಂಗ್ಲಾದೇಶ ತಿಳಿಸಿದೆ. ಕಳೆದ ವರ್ಷದ ದುರ್ಗಾ ಪೂಜೆಯ ಸಂದರ್ಭದಲ್ಲಿ, ಹಿಂದೂ ಸಮುದಾಯವು ರೈಲ್ವೆ ಭೂಮಿಯಲ್ಲಿ ತಾತ್ಕಾಲಿಕ ಪೂಜಾ ಮಂಟಪ ನಿರ್ಮಿಸಿತ್ತು. ಪೂಜೆ ಮುಗಿದ ನಂತರ ತೆರವುಗೊಳಿಸುವ ಷರತ್ತಿನ ಮೇಲೆ ಅನುಮತಿ ನೀಡಲಾಗಿತ್ತು ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಉಗ್ರಗಾಮಿಗಳ ಒತ್ತಾಯದ ಮೇರೆಗೆ ದೇವಾಲಯ ಧ್ವಂಸ:
ಆದರೆ ಇದನ್ನು ಒಪ್ಪದ ಭಾರತ, ಈ ಬಗ್ಗೆ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ಉಗ್ರಗಾಮಿಗಳ ಒತ್ತಾಯದ ಮೇರೆಗೆ ದೇವಾಲಯ ಕೆಡವಲಾಗಿದೆ. ಭದ್ರತೆ ಒದಗಿಸುವ ಬದಲು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇದನ್ನು ಅಕ್ರಮ ಭೂ ಆಕ್ರಮಣದ ವಿಷಯವಾಗಿ ತಿರುಚಿದೆ ಎಂದು ಟೀಕಿಸಿದ್ದಾರೆ. ಹಿಂದೂ ಸಮುದಾಯ, ಅವರ ಆಸ್ತಿಗಳು ಮತ್ತು ಧಾರ್ಮಿಕ ಸ್ಥಳಗಳ ಸಂಪೂರ್ಣ ಸುರಕ್ಷತೆಯನ್ನು ಖಾತರಿಪಡಿಸುವುದು ಬಾಂಗ್ಲಾದೇಶದ ಜವಾಬ್ದಾರಿಯಾಗಿದೆ ಎಂದು ಭಾರತ ಎಚ್ಚರಿಸಿದೆ. ಈ ವಿಷಯವನ್ನು ಹಲವು ವೇದಿಕೆಗಳಲ್ಲಿ ಈ ಹಿಂದೆಯೂ ಎತ್ತಲಾಗಿದ್ದು, ಭಾರತವು ಈ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಈ ಘಟನೆಯು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದಾದ ಸೂಕ್ಷ್ಮ ವಿಷಯವಾಗಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
