ತ್ರಿವಳಿ ತಲಾಖ್ ನಿಷೇಧವಿದ್ದರೂ ಪತ್ನಿಗೆ ಮೊಬೈಲ್ ಮೂಲಕ ತಲಾಖ್: ಪಡುಬಿದ್ರಿಯಲ್ಲಿ ಪ್ರಕರಣ ದಾಖಲು

ಪಡುಬಿದ್ರಿ : ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ, ಉಡುಪಿಯಲ್ಲಿ ತಲಾಖ್ ಪ್ರಕರಣವೊಂದು ವರದಿಯಾಗಿದ್ದು. ವಿದೇಶದಲ್ಲಿರುವ ಪತಿ ಮೊಬೈಲ್ ಫೋನ್ ಮೂಲಕವೇ ಹೆಂಡತಿಗೆ ತಲಾಖ್ ನೀಡಿದ್ದಾನೆ. ಈ ಕುರಿತಂತೆ ಇದೀಗ ಸಂತ್ರಸ್ಥೆ ಮಹಿಳೆ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದಾರೆ. ಪತಿಯ ಮನೆಮಂದಿಯೂ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರ್ಮಾಳು ತೆಂಕ ಗ್ರಾಮದ ನಿವಾಸಿ ಸುಹಾನಾ ದೂರು ನೀಡಿದ್ದು ಎರ್ಮಾಳು ಗುಜ್ಜಿ ಹೌಸ್ನ ಮುಬೀನ್ ಶೇಖ್ ಎಂಬಾತನೊಂದಿಗೆ 2024ರ ಅಕ್ಟೋಬರ್ನಲ್ಲಿ ವಿವಾಹವಾಗಿದ್ದು ಒಂದು ತಿಂಗಳ ಬಳಿಕ ಗಂಡನ ಮನೆಯವರು ವರದಕ್ಷಿಣೆಗಾಗಿ ಪೀಡಿಸಲು ತೊಡಗಿದ್ದಾರೆ. ಪತಿ ಜು. 15ರಂದು ತಲಾಖ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮಾವ ಉಮ್ಮರ್ ಸಾಹೇಬ್, ಅತ್ತೆ ಅಬೀದ, ಮೈದುನ ಮುಕ್ತಾರ್, ನಾದಿನಿ ರಿಹಾನ, ರಶೀನ್ ಹಾಗೂ ರಿಹಾನಳ ಗಂಡ ಶಾಹೀದ್ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ತಂದೆ ಒಂದು ದಿನ ನೋಡಲು ಬಂದಿದ್ದಾಗ ರಶೀನ್ ಅವರಿಗೆ ಹೊಡೆದಿದ್ದಾಳೆ. ಕಳೆದ ಡಿಸೆಂಬರ್ನಲ್ಲಿ ಪತಿ ವಿದೇಶಕ್ಕೆ ಹೋದ ಬಳಿಕ ಮನೆಯವರಿಂದ ಕಿರುಕುಳ ಮತ್ತಷ್ಟು ಹೆಚ್ಚಾಯಿತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
