ಸಾಕಷ್ಟು ಒಳಹರಿವಿದ್ದರೂ ಹೊರರಾಜ್ಯದಿಂದ ದುಬಾರಿ ವಿದ್ಯುತ್ ಖರೀದಿ

ಬೆಂಗಳೂರು: ಅಗ್ಗದ ಕರೆಂಟ್ ಲಭ್ಯವಿದ್ದರೂ, ಇಂಧನ ಇಲಾಖೆಯ ಯೋಜನಾಬದ್ಧವಲ್ಲದ ಕ್ರಮಗಳಿಂದ ಅನಗತ್ಯವಾಗಿ ದುಬಾರಿ ಕರೆಂಟ್ ತಂದು ಪೂರೈಸಿದ ಪರಿಣಾಮ ಸರಕಾರದ ಬೊಕ್ಕಸಕ್ಕೆ ಸುಮಾರು 550ರಿಂದ 600 ಕೋಟಿ ರೂ. ನಷ್ಟ ಉಂಟಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಈಗ ಮುಂಗಾರು ಮಳೆ ಅಬ್ಬರಿಸುತ್ತಿದೆ.
ಇದರಿಂದ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ಮಾಣಿ ಸಹಿತ ಎಲ್ಲ ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುತ್ತಿದೆ. ಆದರೆ ಸ್ವತಃ ಇಂಧನ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಈಗಾಗಲೇ ಆ ಜಲಾಶಯಗಳಲ್ಲಿ ಇನ್ನೂ ಅಂದಾಜು 1,200 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವಷ್ಟು ನೀರಿನ ಲಭ್ಯತೆ ಇತ್ತು. ಇಲಾಖೆಯು ಅದನ್ನು ಬಳಕೆ ಮಾಡಲೇ ಇಲ್ಲ; ಬದಲಿಗೆ ಈ ಮೊದಲೇ ಒಪ್ಪಂದ ಮಾಡಿಕೊಂಡಂತೆ ಹೊರರಾಜ್ಯಗಳಿಂದ ಖರೀದಿಸಿ ಪೂರೈಸಲಾಯಿತು. ಇದು ನೂರಾರು ಕೋಟಿ ರೂ. ನಷ್ಟಕ್ಕೆ ಎಡೆಮಾಡಿಕೊಟ್ಟಿತು.
ಲೆಕ್ಕಾಚಾರ ಹೀಗಿದೆ
ಜಲ ವಿದ್ಯುತ್ ಉತ್ಪಾದನೆ ವೆಚ್ಚ ಪ್ರತಿ ಯೂನಿಟ್ಗೆ ಸರಬರಾಜು ಸೇರಿ 1.50 ರೂ. ಆಗಿದೆ. ಈಗ ಖರೀದಿಸಿ ಪೂರೈಸುತ್ತಿರುವ ವಿದ್ಯುತ್ ವೆಚ್ಚ ಪ್ರತಿ ಯೂನಿಟ್ಗೆ ಅಂದಾಜು 7 ರೂ. ಆಗಿದೆ. ಹೆಚ್ಚುವರಿಯಾಗುವ 5.50 ರೂ.ಗಳನ್ನು ಲಭ್ಯವಿದ್ದ ಜಲ ವಿದ್ಯುತ್ನೊಂದಿಗೆ ಲೆಕ್ಕಹಾಕಿದರೆ, ಅದು 650-680 ಕೋಟಿ ರೂ. ಆಗುತ್ತದೆ. ಇದರಲ್ಲಿ ಡೆಡ್ ಸ್ಟೋರೇಜ್ ಶೇ. 8ರಷ್ಟು ಕಡಿತಗೊಳಿಸಿದರೂ ಕನಿಷ್ಠ 550-600 ಕೋಟಿಯಷ್ಟು ಸಹಜವಾಗಿ ಇಲಾಖೆಗಾದ ನಷ್ಟ ಎಂದು ಇಂಧನ ತಜ್ಞರು ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲಾ ಶಯಗಳು ಭರ್ತಿಯಾಗುತ್ತವೆ ಅದು ಬೇಸಗೆ ಅಂತ್ಯಕ್ಕೆ ಅಂದರೆ ಮೇ ಮುಗಿಯುವ ಹೊತ್ತಿಗೆ ಜಲ ವಿದ್ಯುತ್ ಉತ್ಪಾದನೆಯಿಂದ ಖಾಲಿ ಆಗುತ್ತದೆ. ಮುಂಗಾರು ಹೊತ್ತಿಗೆ ಅದಕ್ಕೆ ಮತ್ತೆ ಒಳಹರಿವು ಬರುತ್ತದೆ. ಇದು ಒಂದು ಚಕ್ರ. ಕೆಲವು ಸಲ ಮುಂಗಾರು ಪ್ರವೇಶ ತಡವಾಗುವ ಮುನ್ಸೂಚನೆ ದೊರೆತರೆ, ಜೂನ್ ಅಂತ್ಯದವರೆಗೆ ಕಾದಿರಿಸಿದ ಉದಾಹರಣೆಗಳೂ ಇವೆ. ಆದರೆ ಈ ಸಲ ಭಾರತೀಯ ಹವಾಮಾನ ಇಲಾಖೆಯಿಂದ ಅಂತಹ ಯಾವುದೇ ಸೂಚನೆ ಇರಲಿಲ್ಲ.
ಸ್ವತಃ ಇಂಧನ ಇಲಾಖೆ ಎಐ ತಂತ್ರಜ್ಞಾನ ಆಧಾರಿತ ಮಾಹಿತಿ ಒದಗಿಸುವ “ಕ್ಯುನೆಕ್ಸ್ಟ್’ ಎಂಬ ಕಂಪೆನಿಯನ್ನು ನೇಮಿಸಿಕೊಂಡಿದೆ. ಅದು ಕೂಡ ಅಂತಹ ಯಾವುದೇ ಸುಳಿವು ನೀಡಿರಲಿಲ್ಲ. ಆದಾಗ್ಯೂ ಜಲ ವಿದ್ಯುತ್ನ ಸಮರ್ಪಕವಾಗಿ ಉಪಯೋಗ ಪಡೆದುಕೊಳ್ಳುವಲ್ಲಿ ಇಲಾಖೆ ವಿಫಲವಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸುತ್ತಾರೆ.
ಅಷ್ಟಕ್ಕೂ ಬೇಸಗೆಯಲ್ಲಿ ಉಂಟಾಗ ಬಹುದಾದ ಸಮಸ್ಯೆ ನೀಗಿಸಲು ಅಬ್ಬಬ್ಟಾ ಎಂದರೆ 300ರಿಂದ 500 ಮೆ.ವಾ. ಖರೀದಿಸಬಹುದಿತ್ತು. ಆದರೆ ದುಪ್ಪಟ್ಟು ಅಂದರೆ ಸಾವಿರ ಮೆ.ವಾ. ಖರೀದಿಸುವ ಅಗತ್ಯ ಇರಲಿಲ್ಲ. ಇನ್ನೂ ವಿಚಿತ್ರವೆಂದರೆ ಹೀಗೆ ಖರೀದಿಸಿದ ವಿದ್ಯುತ್ ಅನ್ನು ಈಗ ಅದೇ ಇಲಾಖೆಯು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ (ಯೂನಿಟ್ಗೆ 1ರಿಂದ 2 ರೂ.ಗೆ) ದರದಲ್ಲಿ ನೀಡುತ್ತಿದೆ!
ವಿದ್ಯುತ್ ಹೊರೆ ಮುನ್ಸೂಚನೆ ನೀಡುವ ಸಂಸ್ಥೆಗೂ ದುಡ್ಡು
ಕೃತಕ ಬುದ್ಧಿಮತ್ತೆಯಿಂದ ವಿದ್ಯುತ್ ಹೊರೆ ಪ್ರಮಾಣದ ಮುನ್ಸೂಚನೆ ನಿರ್ವಹಿಸುವ ಕಂಪೆನಿಯನ್ನು ಇಂಧನ ಇಲಾಖೆ ನೇಮಿಸಿಕೊಂಡಿದೆ. ಅದು ನೀಡುವ ಮಾಹಿತಿ ಆಧರಿಸಿ ಇಲಾಖೆಗೆ ಆಗುವ ನಿವ್ವಳ ಉಳಿತಾಯದಲ್ಲಿ ಪ್ರತಿ ತಿಂಗಳು ಇಂತಿಷ್ಟು ಪಾಲನ್ನು ಆ ಕಂಪೆನಿ ನೀಡಲಾಗುತ್ತಿದೆ. ಅದರಂತೆ ಮಾಸಿಕ ಕನಿಷ್ಠ 50 ಲಕ್ಷದಿಂದ 3 ಕೋಟಿ ಪಾವತಿಸಲಾಗುತ್ತಿದೆ. ಈಗ ಮುನ್ಸೂಚನೆ ನಡುವೆಯೂ ಇಲಾಖೆಗೆ ನಷ್ಟ ಉಂಟಾಗಿದೆ. ಹಾಗಿದ್ದರೆ ಆ ನಷ್ಟವನ್ನು ಕಂಪೆನಿಯಿಂದ ಭರಿಸಿಕೊಳ್ಳಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ವಿದ್ಯುತ್ ಖರೀದಿ ಯಾಕೆ?
– ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ ಮುಂತಾದ ಅಣೆಕಟ್ಟೆಗಳಲ್ಲಿ ಸಾಕಷ್ಟು ನೀರು
– ಇದರಿಂದ 120 ಕೋಟಿ ಯೂನಿಟ್ಗಳಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ
– ಇಂಧನ ಇಲಾಖೆಯ ಯೋಜನಾ ಬದ್ಧವಲ್ಲದ ಕ್ರಮದಿಂದ ಯಡವಟ್ಟು
– ಅಣೆಕಟ್ಟೆಗಳಲ್ಲಿರುವ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳದ ಇಲಾಖೆ
– ಮೊದಲೇ ಒಪ್ಪಂದ ಮಾಡಿಕೊಂಡ ಅನ್ವಯ ವಿದ್ಯುತ್ ಖರೀದಿ
– ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ