ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ವಿಡಿಯೋ: ಮಡಿಕೇರಿಯಲ್ಲಿ ಮೂವರು ಯುವಕರ ಬಂಧನ, ಬಿಜೆಪಿ ಪ್ರತಿಭಟನೆ

ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಪದ ಪ್ರಯೋಗಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಮೂವರು ಯುವಕರನ್ನ ಮಡಿಕೇರಿ ನಗರ ಪೊಲೀಸರು (Madikeri City Police) ಬಂಧಿಸಿದ್ದಾರೆ.

ಮಡಿಕೇರಿಯ ರಾಣಿಪೇಟೆ ನಿವಾಸಿ ಎಂ.ಇ ಫಹಾದ್, ತ್ಯಾಗರಾಜ ಕಾಲೋನಿಯ ಎಂ.ಹೆಚ್ ಬಸಿಲ್ ಹಾಗೂ ಎಂ.ಎಂ ಸಮೀರ್ ಬಂಧಿತ ಆರೋಪಿಗಳು.

ನಗರದ ಸ್ಪೈಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು, ಪ್ರಧಾನಿ ಮೋದಿ ಕುರಿತಾಗಿ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿ ವೀಡಿಯೋ ಮಾಡಿದ್ದರು. ಇದನ್ನ ಸೋಷಿಯಲ್ ಮೀಡಿಯಾದಲ್ಲೂ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆಗ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ನಗರ ಠಾಣೆಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ನಡುವೆ ಇಂದು ಮಡಿಕೇರಿ ನಗರದ ಇಂದಿರಾಗಾಂಧಿ ಸರ್ಕಲ್ ಬಳಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಮೂವರು ಆರೋಪಿಗಳನ್ನ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಷ್ಟೇ ಅಲ್ಲದೇ ಮೂವರು ಯುವಕರು ಕೆಲಸ ಮಾಡುತ್ತಿದ್ದ ಸ್ಪೈಸ್ ಅಂಗಡಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರದ ಪೊಲೀಸರು ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಿಸಿದ್ದರಿಂದ ಅನಾಹುತ ತಪ್ಪಿತು. ಇನ್ನೂ ಅಂಗಡಿಗೆ ನುಗ್ಗಲು ಯತ್ನಿಸಿದ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ಬಳಿಕ ಮತ್ತಷ್ಟು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಇನ್ನೂ ಘಟನೆ ಕುರಿತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ನಿಂದಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರ ಹಿಂದೆ ಯಾರಿದ್ದಾರೆ? ಯಾರು ಈ ರೀತಿ ಮಾಉತನಾಡುವಂತೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬುದನ್ನ ಪತ್ತೆ ಮಾಡಿ ಬಂಧಿಸಬೇಕು. ಘಟನೆ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.