‘ಶರಬತ್ ಜಿಹಾದ್’ ಹೇಳಿಕೆಗೆ ದೆಹಲಿ ಹೈಕೋರ್ಟ್ ಕಿಡಿ: ಬಾಬಾ ರಾಮ್ದೇವ್ ವಿರುದ್ಧ ತೀವ್ರ ಅಸಮಾಧಾನ

ನವದೆಹಲಿ: ಜನಪ್ರಿಯ ಪಾನೀಯ ರೂಹ್ ಅಫ್ಘಾವನ್ನು ಗುರಿಯಾಗಿರಿಸಿಕೊಂಡು “ಶರಬತ್ ಜಿಹಾದ್ “ನಂತಹ ಪದಗಳನ್ನು ಬಳಸಿದ ಬಾಬಾ ರಾಮ್ ದೇವ್ ವಿರುದ್ಧ ದೆಹಲಿ ಹೈಕೋರ್ಟ್ ಮಂಗಳವಾರ (ಏ.22) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಮ್ ದರ್ದ್ ನ್ಯಾಶನಲ್ ಫೌಂಡೇಶನ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬಾಬಾ ರಾಮ್ ದೇವ್ ರೂಹ್ ಅಫ್ಲಾ ಕುರಿತು ನೀಡಿದ ಅಸಮರ್ಥನೀಯ ಹೇಳಿಕೆ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿರುವುದಾಗಿ ಹೇಳಿದೆ.
ರಾಮ್ ದೇವ್ ಹೇಳಿದ್ದೇನು?
ಇತ್ತೀಚೆಗೆ ಬಾಬಾ ರಾಮ್ ದೇವ್ ಪತಂಜಲಿಯ ರೋಸ್ ಶರಬತ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂದರ್ಭದಲ್ಲಿ, ನಿಮಗೆ ಶರಬತ್ ನೀಡುವ ಒಂದು ಕಂಪನಿ ಇದೆ. ಆದರೆ ಅದು ಗಳಿಸುವ ಹಣವನ್ನು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಭಾಷಣದಲ್ಲಿ ಬಾಬಾ ನೇರವಾಗಿ ಹಮ್ ದರ್ದ್ ಅಥವಾ ರೂಹ್ ಅಫ್ಜಾ ಪಾನೀಯದ ಹೆಸರನ್ನು ನೇರವಾಗಿ ಹೇಳಿಲ್ಲ. ಆದರೆ ಇದು ಜನಪ್ರಿಯ ರೂಹ್ ಅಫ್ಜಾವನ್ನೇ ಗುರಿಯಾಗಿರಿಸಿಕೊಂಡು ನೀಡಿದ ಹೇಳಿಕೆಯಾಗಿದೆ ಎಂಬುದು ಅರ್ಥಮಾಡಿಕೊಳ್ಳಬಹುದಾಗಿದೆ.
“ಒಂದು ವೇಳೆ ನೀವು ಆ ಶರಬತ್ ಕುಡಿದರೆ, ಮದರಸಾ ಮತ್ತು ಮಸೀದಿಗಳನ್ನು ಕಟ್ಟುತ್ತಾರೆ. ಆದರೆ ಒಂದು ವೇಳೆ ನೀವು ಈ (ಪತಂಜಲಿ ರೋಸ್ ಶರಬತ್) ಪಾನೀಯ ಕುಡಿದರೆ ಗುರುಕುಲ ನಿರ್ಮಿಸುತ್ತೇವೆ, ಪತಂಜಲಿ ಯೂನಿರ್ವಸಿಟಿಯನ್ನು ವಿಸ್ತರಿಸುತ್ತೇವೆ ಮತ್ತು ಭಾರತೀಯ ಶಿಕ್ಷಣ ಮಂಡಳಿ ಅಭಿವೃದ್ಧಿಯಾಗುತ್ತದೆ” ಎಂದು ಬಾಬಾ ರಾಮ್ ದೇವ್ ಹೇಳಿದ್ದರು.
ಇದೊಂದು ಲವ್ ಜಿಹಾದ್ ಇದ್ದಂತೆ, ಇದು ಕೂಡಾ ಒಂದು ರೀತಿ ಶರಬತ್ ಜಿಹಾದ್. ಈ ಶರಬತ್ ಜಿ*ಹಾದ್ ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಈ ಸಂದೇಶ ಎಲ್ಲರಿಗೂ ತಲುಪುವಂತಾಗಬೇಕು ಎಂದು ರಾಮ್ ದೇವ್ ಪರೋಕ್ಷವಾಗಿ ಹಮ್ ದರ್ದ್ ವಿರುದ್ಧ ಹೇಳಿಕೆ ನೀಡಿದ್ದರು.
ಬಾಬಾ ರಾಮ್ ದೇವ್ ಈ ಹೇಳಿಕೆಯ ವಿರುದ್ಧ ಹಮ್ ದರ್ದ್ ನ್ಯಾಶನಲ್ ಫೌಂಡೇಶನ್ ಇಂಡಿಯಾ ಹೈಕೋರ್ಟ್ ಮೆಟ್ಟಿಲೇರಿತ್ತು.