ಧರ್ಮಶಾಲಾದ ಬೆಟ್ಟದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಮೋಜು

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಇಂಡಿಯನ್ ಪ್ರೀಮಿಯರ್ ಲೀಗ್ 2025 ಟೂರ್ನಿ ಅನ್ನು ಒಂದು ವಾರ ಸ್ಥಗಿತಗೊಳಿಸಲಾಗಿದೆ. ಗುರುವಾರ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ಭದ್ರತಾ ಕಾರಣಗಳಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ವಿದ್ಯುತ್ ಕಡಿತಗೊಂಡ ಕಾರಣ, ಆಟಗಾರರನ್ನು ಹೋಟೆಲ್ಗೆ ಸ್ಥಳಾಂತರಿಸಲಾಯಿತು ಮತ್ತು ಕ್ರೀಡಾಂಗಣದಲ್ಲಿದ್ದ ಎಲ್ಲರನ್ನೂ ತಕ್ಷಣವೇ ಕಳುಹಿಸಲಾಯಿತು. ಶುಕ್ರವಾರ ಸಂಜೆ ಎರಡೂ ತಂಡಗಳ ಆಟಗಾರರು ವಿಶೇಷ ರೈಲಿನ ಮೂಲಕ ದೆಹಲಿ ತಲುಪಿದರು.
ಬೆಟ್ಟದ ಮೇಲೆ ಆಟಗಾರರ ಮೋಜು:
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ರದ್ದಾದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಧರ್ಮಶಾಲಾದ ಬೆಟ್ಟಗಳಲ್ಲಿ ಸಮಯ ಕಳೆದರು ಎಂದು ಹೇಳಲಾಗುತ್ತಿದೆ. ಕೆಎಲ್ ರಾಹುಲ್ ಮತ್ತು ಫಾಫ್ ಡು ಪ್ಲೆಸಿಸ್ ತಂಡದ ಇತರ ಆಟಗಾರರೊಂದಿಗೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಅವರು ಧರ್ಮಶಾಲಾ ಬಳಿಯ ನದಿಯಲ್ಲಿ ಮೋಜು ಮಾಡುತ್ತಿದ್ದರು. ಒರ್ವ ಎಕ್ಸ್ ಬಳಕೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಆಟಗಾರರೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡರು. ಆದರೆ, ಆ ವಿಡಿಯೋ ಪಂದ್ಯಕ್ಕೂ ಮುನ್ನವೋ ಅಥವಾ ನಂತರದದ್ದೋ ಎಂಬುದು ಸ್ಪಷ್ಟವಾಗಿಲ್ಲ.
ಈ ವಿಡಿಯೋಕ್ಕೆ, ‘‘ನಿನ್ನೆಯ ಐಪಿಎಲ್ ಪಂದ್ಯ ರದ್ದಾದ ನಂತರ ಧರ್ಮಶಾಲಾದಲ್ಲಿ ಪ್ರಕೃತಿಯನ್ನು ಆನಂದಿಸುತ್ತಿರುವ ಕೆಎಲ್ ರಾಹುಲ್ ಮತ್ತು ತಂಡ. ಪಾಕಿಸ್ತಾನದ ಹೇಡಿತನದ ದಾಳಿಗೆ ಹೆದರುವುದಿಲ್ಲ – ನಮ್ಮ ಸಶಸ್ತ್ರ ಪಡೆಗಳಿಗೆ ಹೇಗೆ ತಿರುಗೇಟು ನೀಡಬೇಕೆಂದು ನಿಖರವಾಗಿ ತಿಳಿದಿದೆ’’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ವಿಶೇಷ ರೈಲಿನಲ್ಲಿ ದೆಹಲಿಗೆ ಬಂದ ಆಟಗಾರರು:
ಪಾಕಿಸ್ತಾನದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ, ಉತ್ತರ ಭಾರತದ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ. ಇದರಲ್ಲಿ ಧರ್ಮಶಾಲಾದ ಕಾಂಗ್ರಾ ವಿಮಾನ ನಿಲ್ದಾಣವೂ ಸೇರಿದೆ. ಈ ಕಾರಣಕ್ಕಾಗಿ, ಆಟಗಾರರನ್ನು ವಿಮಾನದ ಮೂಲಕ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಧರ್ಮಶಾಲಾದಲ್ಲಿ ಹಾಜರಿದ್ದ ಆಟಗಾರರು, ಸಹಾಯಕ ಸಿಬ್ಬಂದಿ, ವೀಕ್ಷಕ ವಿವರಣೆಗಾರರು ಮತ್ತು ಇತರ ಎಲ್ಲಾ ಐಪಿಎಲ್ ಸಿಬ್ಬಂದಿಯನ್ನು ಸ್ಥಳಾಂತರಿಸಲು ಭಾರತೀಯ ರೈಲ್ವೆ ವಿಶೇಷ ರೈಲನ್ನು ವ್ಯವಸ್ಥೆ ಮಾಡಿತು. ಎಲ್ಲರೂ ಒಂದೇ ರೈಲಿನಲ್ಲಿ ದೆಹಲಿ ತಲುಪಿದರು.
ಲೀಗ್ ಒಂದು ವಾರ ಮುಂದೂಡಲಾಗಿದೆ:
ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ ಅನ್ನು ಒಂದು ವಾರ ಮುಂದೂಡಲಾಗಿದೆ. ಮುಂದಿನ ವಾರ ಐಪಿಎಲ್ನ ಹೊಸ ವೇಳಾಪಟ್ಟಿ ಬಿಡುಗಡೆಯಾಗಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಬಿಸಿಸಿಐ ಐಪಿಎಲ್ನ ಫ್ರಾಂಚೈಸಿಗಳು, ಪ್ರಸಾರಕರು ಮತ್ತು ಪ್ರಾಯೋಜಕರೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲಿ ಭದ್ರತೆಯ ಬಗ್ಗೆ ಎಚ್ಚರಿಕೆ ನೀಡಲಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಅಂದಿನಿಂದ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.