ರಾಜ್ಯಪಾಲರಿಂದ ಪದವಿ ನಿರಾಕರಣೆ –ಜೀನ್ ಜೋಸೆಫ್ ಪಿಎಚ್ಡಿ ಪದವಿ ವಿವಾದ

ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದ ಸಂದರ್ಭದಲ್ಲಿ ಪಿಎಚ್ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿಯವರಿಂದ ತಮ್ಮ ಪದವಿ ಪಡೆಯಲು ನಿರಾಕರಿಸಿದರು. ರಾಜ್ಯಪಾಲ ಆರ್.ಎನ್ ರವಿ ಬದಲಿಗೆ, ಉಪಕುಲಪತಿ ಎನ್ ಚಂದ್ರಶೇಖರ್ರಿಂದ ಪದವಿ ಪಡೆದಿದ್ದಾಳೆ.
‘ರಾಜ್ಯಪಾಲರು ತಮಿಳುನಾಡು ಮತ್ತು ತಮಿಳರ ವಿರುದ್ಧ ಕೆಲಸ ಮಾಡುತ್ತಿರುವುದರಿಂದ, ನಾನು ಅವರಿಂದ ಪದವಿಯನ್ನು ಪಡೆಯಲು ಒಪ್ಪಲಿಲ್ಲ. ರಾಜ್ಯಪಾಲರ ಬದಲಾಗಿ, ನಾನು ಉಪಕುಲಪತಿಗಳಿಂದ ನನ್ನ ಪಿಎಚ್ಡಿ ಪದವಿಯನ್ನು ಪಡೆದಿದ್ದೇನೆ’ ಎಂದು ನಾಗರ್ಕೋಯಿಲ್ನ ಜೀನ್ ಜೋಸೆಫ್ ಹೇಳಿದ್ದಾರೆ.

ಡಿಎಂಕೆ ನಾಯಕನ ಪತ್ನಿ ಜೀನ್ ಜೋಸೆಫ್
ಪಿಎಚ್ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಡಿಎಂಕೆ ನಾಗರಕೋಯಿಲ್ ಕಾರ್ಪೊರೇಷನ್ ಉಪ ಕಾರ್ಯದರ್ಶಿ ಎಂ ರಾಜನ್ ಅವರ ಪತ್ನಿ ಎಂದು ತಿಳಿದುಬಂದಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರನ್ನು ನಿರ್ಲಕ್ಷ್ಯಿಸಲು ಮೊದಲೇ ಯೋಜಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಅವರು ರಾಜ್ಯಪಾಲರನ್ನು ನಿರ್ಲಕ್ಷ್ಯಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ರಾಜ್ಯಪಾಲ- ತಮಿಳುನಾಡು ಸರ್ಕಾರದ ನಡುವಿನ ಸಂಘರ್ಷ :
ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಮತ್ತು ಸಿಎಂ ಎಂ ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಡಿಎಂಕೆ ಸರ್ಕಾರದ ನಡುವಿನ ಸಂಘರ್ಷವು ಹಲವಾರು ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದೆ. ರಾಜ್ಯಪಾಲ ಆರ್ ಎನ್ ರವಿ ಮಧುರೈನ ಒಂದು ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ‘ಕಂಬ ರಾಮಾಯಣಂ’ ಕವಿಯ ಗೌರವಕ್ಕಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಕೇಳಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು.
ಡಿಎಂಕೆ, ಕಾಂಗ್ರೆಸ್, ಮತ್ತು ಇತರ ಪ್ರತಿಪಕ್ಷಗಳು ಇದನ್ನು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವೆಂದು ಟೀಕಿಸಿದ್ದವು. ರವಿ ಅವರನ್ನು ಗವರ್ನರ್ ಹುದ್ದೆಯಿಂದ ತೆಗೆದುಹಾಕುವಂತೆಯೂ ಆಗ್ರಹಿಸಿದ್ದರು.ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಾಡಬೇಕೆಂದು ರವಿ ಸಲಹೆ ನೀಡಿದ್ದರು ಆದರೆ,ಸರ್ಕಾರವು ಈ ಸಲಹೆಯನ್ನು ತಿರಸ್ಕರಿಸಿತ್ತು.ಇದಕ್ಕೆ ಪ್ರತಿಕ್ರಿಯೆಯಾಗಿ, ರವಿ ಭಾಷಣವನ್ನು ಓದದೇ ಸದನದಿಂದ ಹೊರನಡೆಯುವ ಮೂಲಕ ಸುದ್ದಿಯಾಗಿದ್ದರು.
ರವಿ ತಮಿಳುನಾಡಿನ ಬದಲಿಗೆ ‘ತಮಿಳಗಂ’ ಎಂಬ ಹೆಸರನ್ನು ಬಳಸಿದ್ದಕ್ಕಾಗಿಯೂ ವಿವಾದ ಉಂಟಾಗಿತ್ತು,ಇದನ್ನು ಸ್ಟಾಲಿನ್ ಸರ್ಕಾರವು ರಾಜ್ಯದ ಗುರುತಿಗೆ ಅವಮಾನ ಎಂದು ಟೀಕಿಸಿತ್ತು. ರಾಜ್ಯಪಾಲರ ಈ ರೀತಿಯ ಹಲವು ನಡೆಗಳು ರಾಜಕೀಯವಾಗಿ ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.