“ದಸರೆ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಾಂಧಿ ಪಥ – ಮೊದಲ ಬಾರಿಗೆ HAL ಭಾಗಿ

ಮೈಸೂರು : ವಿಜಯದಶಮಿ ದಿನ ಅರಮನೆಯಿಂದ ಹೊರಡುವ ಮೆರವಣಿಗೆಯಲ್ಲಿ ಈ ಬಾರಿ 50 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಗಾಂಧಿ ಸ್ಮರಣೆ, ಭಾರತದ ಮೊದಲ ಲಿಫ್ಟ್ ಸೇತುವೆ , ಬ್ರ್ಯಾಂಡ್ ಬೆಂಗಳೂರು ಯೋಜನೆ ಹಾಗೂ ಬಸವಣ್ಣನವರ ಬಾಗೇವಾಡಿಯ ವೈಭವ ಸಾರುವ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆ ಆಗಲಿವೆ.

ನಾಡಹಬ್ಬ ದಸರೆಯ ಅಂತಿಮ ದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ಅಶ್ವಾರೋಹಿ, ಪೊಲೀಸ್ ತಂಡ, ಎನ್ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡಗಳೂ ಭಾಗವಹಿಸಲಿವೆ. ಈ ಬಾರಿ ಮೈಸೂರು ಸೇರಿದಂತೆ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳು ಮತ್ತು ವಿವಿಧ ಇಲಾಖೆ, ಕೇಂದ್ರ ಸರಕಾರದ್ದು ಸೇರಿದಂತೆ ಒಟ್ಟು 50 ಸ್ತಬ್ಧಚಿತ್ರಗಳು ಇರಲಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ಮೈಸೂರಿನ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಪಂಗಳು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಕೆಎಂಎಫ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿಸ್ತಬ್ಧ ಚಿತ್ರಗಳು ನಿರ್ಮಾಣವಾಗಲಿದ್ದು, 10 ದಿನದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರು, ಸಾರ್ವಜನಿಕರನ್ನು ಆಕರ್ಷಿಸಲು ಉತ್ತಮ ರೀತಿಯಲ್ಲಿಸ್ತಬ್ಧಚಿತ್ರ ತಯಾರಿಸಲಾಗುತ್ತಿದೆ. ಆಯಾ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ, ಐತಿಹಾಸಿಕ ವಿಶೇಷತೆಯನ್ನೊಳಗೊಂಡ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಸಮಿತಿ ತೀರ್ಮಾನಿಸಿದೆ.
ಈ ಬಾರಿ ‘ಗಾಂಧಿ’ ಸ್ಮರಣೆ:
ಈ ಬಾರಿ ಗಾಂಧಿ ಜಯಂತಿ ದಿನವೇ (ಅ. 2ರಂದು) ವಿಜಯದಶಮಿ ಬಂದಿದೆ. ಹೀಗಾಗಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ ಸ್ಥಳ, ಸಭೆ ಮಾಡಿರುವ ಘಟನಾವಳಿಗಳಿದ್ದರೆ ಅದಕ್ಕೆ ಪ್ರಾಮುಖ್ಯತೆ ನೀಡಲು ಸಮಿತಿ ಸೂಚನೆ ನೀಡಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಬದನವಾಳು ಗ್ರಾಮಕ್ಕೆ ಗಾಂಧೀಜಿ 1927ರಲ್ಲಿಭೇಟಿ ನೀಡಿದ್ದರು. ಮೂರು ದಿನಗಳ ಇಲ್ಲಿ ವಾಸ್ತವ್ಯ ಹೂಡಿ ಸುತ್ತಲಿನ ಜನರಿಗೆ ಗುಡಿ ಕೈಗಾರಿಕೆ ಆರಂಭಿಸಲು ಪ್ರೇರಣೆ ನೀಡಿದ್ದರು. ಹಾಗಾಗಿ ಮೈಸೂರು, ಮಂಡ್ಯ ಜಿಲ್ಲೆಯ ಸ್ತಬ್ಧಚಿತ್ರ ಈ ಬಗ್ಗೆ ಬೆಳಕು ಚೆಲ್ಲಲಿವೆ.
‘ಶಕ್ತಿ’ ಗಿನ್ನೆಸ್ ದಾಖಲೆ
ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ 500 ಕೋಟಿ ಮಹಿಳೆಯರು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿಪ್ರಯಾಣ ಬೆಳೆಸಿದ್ದಾರೆ. ಇದು ಗಿನ್ನೆಸ್ ದಾಖಲೆಯೂ ಆಗಿದೆ. ಹೀಗಾಗಿ ಈ ಬಾರಿ ಕೆಎಸ್ಆರ್ಟಿಸಿ ವತಿಯಿಂದ ‘ಶಕ್ತಿ’ ಯೋಜನೆ 500 ಕೋಟಿ ಟಿಕೆಟ್ ನೀಡಿರುವ ಬಗ್ಗೆ ಮಾಹಿತಿ ನೀಡುವ ಸ್ತಬ್ಧಚಿತ್ರ ಇರಲಿದೆ. ಇದರೊಂದಿಗೆ ಧಾರವಾಡದಿಂದ ‘ರಾಷ್ಟ್ರಧ್ವಜ ತಯಾರಿಕೆ’ ಬಗ್ಗೆ ತಿಳಿಸುವ ಹಾಗೂ ವೀರ ಮದಕರಿ ನಾಯಕನ ಸಾಹಸ ಸಾರಿರುವ ಸ್ತಬ್ಧಚಿತ್ರವೂ ಸಿದ್ಧವಾಗುತ್ತಿದೆ.
‘ಶಿವಪುರ ಧ್ವಜ ಸತ್ಯಾಗ್ರಹ’
ಇದೇ ಮೊದಲ ಬಾರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸ್ತಬ್ಧಚಿತ್ರ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿಸಾಗಿಬರಲಿದೆ. ಏರೋನಾಟಿಕ್ನ ನಾನಾ ಮಾಡೆಲ್ಗಳನ್ನು ಪರಿಚಯಿಸಲಾಗುತ್ತಿದೆ. ಇದರೊಂದಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸ್ತಬ್ಧಚಿತ್ರವೂ ಇದೇ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ. ರಾಮೇಶ್ವರಂನಲ್ಲಿಇತ್ತೀಚೆಗೆæ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಭಾರತದ ಮೊದಲ ಲಿಫ್ಟ್ ಸೇತುವೆ, ಎಚ್ಎಂಟಿ, ಲಿಡ್ಕರ್, ರೈಲ್ವೆ, ಕೆಎಂಎಫ್, ಆರೋಗ್ಯ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ತಲಾ ಒಂದು ಸ್ತಬ್ಧಚಿತ್ರ ಇರಲಿವೆ.
ಹಾವೇರಿಯಿಂದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ, ಮಂಡ್ಯದಿಂದ ಶಿವಪುರ ಧ್ವಜ ಸತ್ಯಾಗ್ರಹ ಕುರಿತ ಸ್ತಬ್ಧಚಿತ್ರವೂ ಇರಲಿದೆ. ಉಡುಪಿ ‘ಸ್ವಚ್ಛ ಉಡುಪು’, ಮೈಸೂರು ಮಹಾನಗರ ಪಾಲಿಕೆಯ ಸ್ವಚ್ಛ ಮೈಸೂರು, ದಾವಣಗೆರೆಯಿಂದ ‘ರಂಗಯ್ಯನ ದುರ್ಗಾ’, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಕೊಡಗಿನಿಂದ ಚಾರಣ ತಾಣಗಳ ಮಾಹಿತಿ ನೀಡುವ ಸ್ತಬ್ಧಚಿತ್ರಗಳೂ ಪ್ರಮುಖ ಆಕರ್ಷಣೆಯಾಗಿವೆ.