ವೈರಲ್ ಫೋಟೋ ತಂದ ಆಪತ್ತು: ದೇವಾಲಯದ ಅರ್ಚಕನನ್ನು ರಸ್ತೆಯಲ್ಲಿ ಎಳೆದಾಡಿ ಥಳಿಸಿದ ಕಿಡಿಗೇಡಿಗಳು.

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್ವೊಂದರಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ನಡೆದಿದೆ.
ಕಾನ್ಪುರದ ಭೂತೇಶ್ವರ ದೇವಾಲಯದ ಅರ್ಚಕ ಪ್ರಶಾಂತ್ ಗಿರಿ ಮೇಲೆ ಸುಮಾರು 50 ರಿಂದ 60 ಜನರ ಗುಂಪೊಂದು ದಾಳಿ ನಡೆಸಿದೆ. ಅರ್ಚಕರನ್ನು ಅವರ ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ರಸ್ತೆಯಲ್ಲಿ ಧರಧರನೆ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.ಈ ವೇಳೆ ದೇವಾಲಯದಲ್ಲಿದ್ದ ಕೆಲವು ಮಹಿಳೆಯರು ಅರ್ಚಕರನ್ನು ಕಾಪಾಡಲು ಮುಂದಾದರು. ಅರ್ಚಕರ ಸುತ್ತಲೂ ಕುಳಿತು ಗುರಾಣಿಯಂತೆ ರಕ್ಷಣೆ ನೀಡಲು ಪ್ರಯತ್ನಿಸಿದರು. ಆದರೆ, ಉದ್ರಿಕ್ತ ಗುಂಪು ಅರ್ಚಕರನ್ನು ಉಳಿಸಲು ಬಂದ ಮಹಿಳೆಯರ ಮೇಲೆ ಕೂಡ ಹಲ್ಲೆ ನಡೆಸಿ, ಅವರನ್ನು ದೂಡಿ ಹಾಕಿ ಅರ್ಚಕನಿಗೆ ಹೊಡೆದಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಪಿನಿಂದ ಅರ್ಚಕರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ಗಾಯಗೊಂಡಿರುವ ಅರ್ಚಕರು ಈ ಬಗ್ಗೆ ದೂರು ನೀಡಿದ್ದು, “ತನ್ನನ್ನು ದೇವಾಲಯದಿಂದ ಹೊರಹಾಕಲು ನಡೆದ ಪಿತೂರಿ ಇದಾಗಿದೆ. ರೆಸ್ಟೋರೆಂಟ್ವೊಂದರಲ್ಲಿ ನಾನು ಕುಳಿತಿದ್ದ ಹಳೆಯ ಫೋಟೋವನ್ನು ಎಡಿಟ್ ಮಾಡಿ, ಅಲ್ಲಿ ಮಾಂಸಾಹಾರ ಇರುವಂತೆ ಬಿಂಬಿಸಲಾಗಿದೆ” ಎಂದು ಆರೋಪಿಸಿದ್ದಾರೆ. ಪೊಲೀಸರು ವೈರಲ್ ವಿಡಿಯೋ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
