ಸಿಹಿಯ ಹಿಂದೆ ಸೈನೆಡ್: ಬೈಕ್ ಖರೀದಿಯ ನೆಪದಲ್ಲಿ ಯುವಕನ ಕೊಲೆ

ಬೆಂಗಳೂರು: ಫೇಸ್ ಬುಕ್ ನಲ್ಲಿ ಬೈಕ್ ಮಾರಾಟಕ್ಕೆ ಇಟ್ಟಿದ್ದ ಯುವಕನ್ನು ಗ್ರಾಹಕನ ಸೋಗಿನಲ್ಲಿ ಭೇಟಿ ಮಾಡಿ, ವಾಹನ ಖರೀದಿ ನೆಪದಲ್ಲಿ ಸಿಹಿ ಎಂದು ಸೈನೆಡ್ ತಿನ್ನಿಸಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಕಾಡುಗೋಡಿಯ ಕಾರ್ತಿಕ್ ದೌಲತ್ ಶಿಕ್ಷೆಗೆ ಒಳಗಾದ ಅಪರಾಧಿ. 2016ರ ಆಗಸ್ಟ್ 1ರಂದು ಪ್ರೇಸ್ಟಿಜ್ ಶಾಂತಿನಿಕೇತನ್ ಅಪಾರ್ಟ್ಮೆಂಟ್ನ ್ಲ್ಯಾಟ್ನಲ್ಲಿ ವಾಸವಾಗಿದ್ದ ಸೋಹನ್ ಹಲ್ದಾರ್ ಎಂಬಾತನ್ನು ಕೊಲೆ ಮಾಡಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್. ರವೀಂದ್ರ, ಅಪರಾಧಿ ಕಾರ್ತಿಕ್ ದೌಲತ್ಗೆ ಕಠಿಣ ಜೀವಾವಧಿ ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸೂರ್ಯನಾರಾಯಣ ವಾದ ಮಂಡಿಸಿದ್ದರು.
ಸೋಹನ್ ಹಲ್ದಾರ್, ಫೇಸ್ ಬುಕ್ ನಲ್ಲಿ ಎಟಿಎಂ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಕಾರ್ತಿಕ್, ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ದೇಶಕ್ಕೆ ಬೈಕ್ ಖರೀದಿ ಮಾಡುವುದಾಗಿ ಸೋಹನ್ಗೆ ಕರೆ ಮಾಡುತ್ತಾನೆ. ಮನೆ ವಿಳಾಸ ಪಡೆದ ಕಾರ್ತಿಕ್, ಕೊಲೆ ಮಾಡುವ ಉದ್ದೇಶದಿಂದ ಸಿಲ್ವರ್ ಪೊಟಾಶಿಯಂ ಸೈನೆಡ್ ಅನ್ನು ಖರೀದಿ ಮಾಡಿಕೊಂಡು ್ಲ್ಯಾಟ್ಗೆ ಹೋಗಿ ಸೋಹನ್ ಭೇಟಿ ಮಾಡಿ ಮಾತುಕತೆ ನಡೆಸುತ್ತಾನೆ. ಕೊನೆಗೆ ಬೈಕ್ ಖರೀದಿ ಖುಷಿಯಲ್ಲಿ ಸಿಹಿ ತಿನ್ನಿಸುವುದಾಗಿ ಹೇಳಿ ಸಕ್ಕರೆ ಎಂದುಹೇಳಿ ಸೈನೆಡ್ ಅನ್ನು ಸೋಹನ್ ಬಾಯಿಗೆ ಹಾಕಿ ಕೊಲೆ ಮಾಡುತ್ತಾನೆ.
ಬಳಿಕ ಮೊಬೈಲ್, ಆಕ್ಸಿಸ್ ಬ್ಯಾಂಕ್ ಎಟಿಎಂ ಕಾರ್ಡ್, ಕೆಟಿಎಂ ಬೈಕ್, ಆರ್ಸಿ ಕಾರ್ಡ್, ಕೀ, ಹೆಲ್ಮೆಟ್ ತೆಗೆದುಕೊಂಡು ಪರಾರಿಯಾಗಿದ್ದ. ಕದ್ದ ಎಟಿಎಂ ಕಾರ್ಡ್ ಬಳಸಿ 27 ಸಾವಿರ ರೂ. ವಿತ್ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಅಂದಿನ ಇನ್ಸ್ಪೆಕ್ಟರ್ ಎಚ್.ಎನ್. ಚಂದ್ರಪ್ಪ ನೇತೃತ್ವದ ತಂಡ ತನಿಖೆ ಕೈಗೊಂಡು ಕಾರ್ತಿಕ್ ದೌಲತ್ನನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ.