ನಾಯಿಯ ಕಣ್ಣು ಗುಡ್ಡೆ ಕಿತ್ತು ಕ್ರೌರ್ಯ: ಮುಂಬೈನಲ್ಲಿ ಅಮಾನವೀಯ ಘಟನೆ

ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲ ಎಂಬಂತಾಗಿದೆ. ಇಲ್ಲೊಬ್ಬ ಮೂಕ ಪ್ರಾಣಿಯ ಮೇಲೆ ಮಾನವೀಯ ಸಮಾಜ ತಲೆತಗ್ಗಿಸುವಂತಹ ರಾಕ್ಷಸೀಯ ಕೃತ್ಯವೆಸಗಿದ್ದಾನೆ. ಬೀದಿ ನಾಯಿಯನ್ನು ಕೊಂಡ ಕಿರಾತಕನೋರ್ವ ಅದರ ಕಣ್ಣು ಗುಡ್ಡೆ ಕಿತ್ತು ಆಟವಾಡಿದಂತಹ ಭಯಾನಕ ಕೃತ್ಯ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಪೊಲೀಸರ ಪ್ರಕಾರ ಮಂಗಳವಾರ ಸಂಜೆ ಮುಂಬೈ ಹೊರವಲಯದ ಮುಂಬ್ರಾ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಬೀದಿನಾಯಿಯೊಂದರ ಮೇಲೆ ಈ ಅಮಾನವೀಯ ಘಟನೆ ನಡೆದಿದೆ.
ಆರೋಪಿ ಬೀದಿನಾಯಿಯ ಕಣ್ಣನ್ನು ಕಿತ್ತು ಸಾರ್ವಜನಿಕರೆದುರೇ ಕಣ್ಣುಗುಡ್ಡೆಯನ್ನು ಇಟ್ಟುಕೊಂಡು ಗೋಲಿಯಂತೆ ಆಟವಾಡಿದ್ದಾನೆ ಎಂದು ಈ ಭೀಭತ್ಸ ಕೃತ್ಯ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇವರ ಕೃತ್ಯ ನೋಡಿದ ಜನ ಕೂಡಲೇ ಮುಂಬ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕೃತ್ಯದ ವೀಡಿಯೋ ಈಗ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಆರೋಪಿ ರಸ್ತೆ ಮೇಲೆ ಕುಳಿತು ನಾಯಿಯ ಕಣ್ಣುಗುಡ್ಡೆಯೊಂದಿಗೆ ಆಡುವುದನ್ನು ಕಾಣಬಹುದಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿಗಳ ಕಲ್ಯಾಣ ಸಂಸ್ಥೆಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಂತರ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 325 ರ ಅಡಿಯಲ್ಲಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಾಲಿವುಡ್ ನಟಿ ಸ್ವೀನಿಗೆ ಬಾಲಿವುಡ್ನಿಂದ ಭರ್ಜರಿ ₹530 ಕೋಟಿ ಆಫರ್?
ನವದೆಹಲಿ: ಹಾಲಿವುಡ್ ನಟಿ ಸಿಡ್ನಿ ಸ್ವೀನಿ ಶೀಘ್ರದಲ್ಲೇ ಹಿಂದಿ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಚಿತ್ರವೊಂದರಲ್ಲಿ ನಟಿಸಲು ಸಿನಿಮಾ ತಂಡವೊಂದು ಇವರಿಗೆ ಬರೋಬ್ಬರಿ 530 ಕೋಟಿ ರು. ಆಫರ್ ನೀಡಿದೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ. ಖ್ಯಾತನಾಮ ಸಂಸ್ಥೆಯೊಂದು ಬಾಲಿವುಡ್ ಇತಿಹಾಸದಲ್ಲೇ ಅತಿ ದುಬಾರಿ ವೆಚ್ಚದ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಈ ಚಿತ್ರವನ್ನು ಹೆಚ್ಚಿನ ಪ್ರಮಾಣದ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರದ ನಾಯಕಿ ಪಾತ್ರಕ್ಕೆ ಸಿಡ್ನಿ ಸ್ವೀನಿಗೆ ಆಹ್ವಾನ ನೀಡಲಾಗಿದೆ. ಇದಕ್ಕೆ ಆಕೆಗೆ 530 ಕೋಟಿ ರು. ಸಂಭಾವನೆ ಆಫರ್ ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಸಿಡ್ನಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಬೆಂಗಳೂರಿನ ಐಐಎಂ ದೇಶದ ನಂ.1 ಬಿಸಿನೆಸ್ ಕಾಲೇಜು: ಕ್ಯುಎಸ್ ವರದಿ
ನವದೆಹಲಿ: ಲಂಡನ್ ಮೂಲದ ಕ್ಯುಎಸ್ ಸಂಸ್ಥೆಯು 2025ನೇ ಸಾಲಿನ ಅತ್ಯುತ್ತಮ ಎಂಬಿಎ ಕಾಲೇಜುಗಳ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಅಗ್ರ 100ರ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಮೂರು ಐಐಎಂಗಳು ಸ್ಥಾನ ಪಡೆದಿವೆ. ಇನ್ನು ಕೇವಲ ಭಾರತದ ಬಿಸಿನೆಸ್ ಕಾಲೇಜುಗಳನ್ನು ಪರಿಗಣಿಸಿದರೆ ಐಐಎಂಬಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಬಿ- ಸ್ಕೂಲ್ ಬ್ಯಾಂಕಿಂಗ್ನಲ್ಲಿ ಭಾರತದ 14 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದ್ದು, ಅದರಲ್ಲಿ ಮೂರು ಸಂಸ್ಥೆಗಳು ಅಗ್ರ 100ರಲ್ಲಿ ಅರ್ಹತೆ ಗಿಟ್ಟಿಸಿಕೊಂಡಿವೆ. ಈ ಪೈಕಿ ಬೆಂಗಳೂರಿನ ಐಐಎಂ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಜಿಗಿತ ಕಂಡು 52ನೇ ಸ್ಥಾನ ಪಡೆದಿದೆ. ಅಹಮದಾಬಾದ್, ಕೋಲ್ಕತಾ ಐಐಎಂಗಳು ಕ್ರಮವಾಗಿ 52, 58ನೇ ಸ್ಥಾನ ಪಡೆದಿವೆ.
ಮೋದಿಗೆ ನೀಡಿದ್ದ 1300 ಗಿಫ್ಟ್ ಇ-ಹರಾಜು: ಭವಾನಿ ದೇವಿ ವಿಗ್ರಹಕ್ಕೆ ₹1.3 ಕೋಟಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಮೋದಿ ಅವರ 75ನೇ ಜನ್ಮದಿನವಾದ ಬುಧವಾರ ಚಾಲನೆ ನೀಡಲಾಗಿದೆ. ಸೆ.17ರಿಂದ ಅ.2ರವರೆಗೆ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಒಟ್ಟು 1300 ವಸ್ತುಗಳನ್ನು ಹರಾಜಿಗೆ ಇಡಲಾಗಿದೆ. ದರಪಟ್ಟಿಯಲ್ಲಿ ಭವಾನಿ ದೇವಿಯ ವಿಗ್ರಹವು ಅಗ್ರಸ್ಥಾನದಲ್ಲಿದ್ದು, 1.3 ಕೋಟಿ ರು. ನಿಗದಿಪಡಿಸಲಾಗಿದೆ. ರಾಮ ಮಂದಿರದ ಪ್ರತಿಕೃತಿಗೆ 5.5 ಲಕ್ಷ ರು., ಪ್ಯಾರಾ ಒಲಿಂಪಿಕ್ಸ್ ಪಟುಗಳು ಕೊಟ್ಟ 3 ಜೊತೆ ಶೂಗೆ 7.7 ಲಕ್ಷ ರು. ನಿಗದಿಪಡಿಸಲಾಗಿದೆ. ಮಾರಾಟದಿಂದ ಬರುವ ಹಣವನ್ನು ನಮಾಮಿಗಂಗೆ ಯೋಜನೆಗೆ ಬಳಸಲಾಗುತ್ತದೆ.